ಕಾರವಾರ: ಗಣೇಶ ಚತುರ್ಥಿ ಮುಗಿದು ಸುಮಾರು ಆರು ತಿಂಗಳುಗಳೇ ಕಳೆದಿದೆ. ಆದರೂ ಕಾರವಾರದ ಕೆಲ ಮನೆಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜಿಸಲಾಗುತ್ತಿದೆ.
ಹೌದು, ಸಾಮಾನ್ಯವಾಗಿ ಗಣೇಶ ಚತುರ್ಥಿ ಎಂದಾಕ್ಷಣ ಮಳೆಗಾಲ ನೆನಪಾಗುತ್ತದೆ. ಈ ವೇಳೆ ತರುವ ಗಣೇಶನನ್ನು ದಿನ, ವಾರ ಇಲ್ಲವೇ ತಿಂಗಳುಗಳ ಕಾಲ ಇಟ್ಟು ಪೂಜಿಸುವುದು ವಾಡಿಕೆ. ಆದರೆ ಮಾಘ ಮಾಸದಲ್ಲಿ ಬರುವ ಮಾಘ ಚೌತಿಯನ್ನು ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಆಚರಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಗಣೇಶ ಚತುರ್ಥಿಯಂತೆ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅದರಲ್ಲೂ ಕಾರವಾರದಲ್ಲಿ ಮಾಘ ಚತುರ್ಥಿಯನ್ನು ಗಣೇಶ ಚತುರ್ಥಿಯಷ್ಟೆ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.
ತಾಲೂಕಿನ ಮಾಜಾಳಿಯ ಗಾಂವಗೇರಿ ರಾಮನಾಥ್ ಕ್ಲಬ್ನವರು ಪ್ರತಿಷ್ಠಾಪಿಸಿದ್ದ ಸರ್ವಜನಿಕ ಗಣೇಶನ ಮೂರ್ತಿ ಎಲ್ಲರ ಗಮನ ಸೆಳೆಯಿತು. ಬೃಹತ್ ಗಣೇಶನನ್ನು ಮಧ್ಯಾಹ್ನದ ವೇಳೆಗೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಇದೆ ವೇಳೆ ಕಾರವಾರದ ವಿವಿಧ ಭಾಗಗಳಲ್ಲಿ ಮತ್ತು ಜಿಲ್ಲೆಯ ಇತರೆಡೆಯೂ ಗಣೇಶನನ್ನು ತಂದು ಪೂಜಿಸಲಾಯಿತು.