ಕಾರವಾರ (ಉತ್ತರ ಕನ್ನಡ):ಸಾಮಾನ್ಯವಾಗಿ ದೇವರಿಗೆ ನೈವೇದ್ಯವಾಗಿ ತಿಂಡಿ-ತಿನಿಸು ಹಾಗೂ ಹಣ್ಣು, ಹಂಪಲುಗಳನ್ನು ಸಮರ್ಪಿಸುತ್ತಾರೆ. ಹೆಚ್ಚಾಗಿ ಹಾಲು, ತುಪ್ಪದಿಂದ ಅಭಿಷೇಕ ಮಾಡಿ, ತುಪ್ಪದ ದೀಪದಿಂದ ಆರತಿ ಮಾಡುವುದುಂಟು. ಆದರೆ, ಇಲ್ಲೊಂದು ದೇವರು ಉಳಿದೆಲ್ಲ ದೇವರಿಗಿಂತ ಸಂಪೂರ್ಣ ವಿಭಿನ್ನ. ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ, ಬೀಡಿ-ಸಿಗರೇಟ್ನಿಂದಲೇ ಆರತಿ ಬೆಳಗಲಾಗುತ್ತದೆ.
ಒಂದೆಡೆ ದೇವರಿಗೆ ಅರ್ಪಿಸಲು ಬಗೆಬಗೆಯ ಮದ್ಯವನ್ನು ಕೈಯಲ್ಲಿ ಹಿಡಿದು ನಿಂತಿರುವ ಭಕ್ತರು, ಇನ್ನೊಂದೆಡೆ ತರಹೇವಾರಿ ಬಾಟಲಿಗಳಲ್ಲಿ ತಂದಂತಹ ಮದ್ಯವನ್ನು ಅಭಿಷೇಕ ಮಾಡುತ್ತಿರುವ ಅರ್ಚಕರು, ದೇವಸ್ಥಾನದ ಎದುರು ಕ್ಯಾಂಡಲ್ಗಳನ್ನು ದೇವರಿಗೆ ಬೆಳಗುತ್ತಿರುವ ಭಕ್ತರು ಮತ್ತೊಂದೆಡೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದಲ್ಲಿ ನಡೆಯುವ ಖಾಪ್ರಿ ದೇವರ ಜಾತ್ರೆಯಲ್ಲಿ ಈ ದೃಶ್ಯಗಳು ನಿಮಗೆ ಕಾಣಸಿಗುತ್ತವೆ.
ಇದನ್ನೂ ಓದಿ:ಶ್ರೀರಂಗನಾಥನಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಅದೇ ತೀರ್ಥ!
ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಹರಕೆ ಕಟ್ಟಿಕೊಂಡು ಬರುವ ಭಕ್ತರು ಸಿಗರೇಟ್, ಕ್ಯಾಂಡಲ್ನಿಂದ ಆರತಿ ಮಾಡಿ ಮದ್ಯದಿಂದಲೇ ಅಭಿಷೇಕವನ್ನೂ ಮಾಡುವರು. ಅಷ್ಟೇ ಅಲ್ಲ, ದೇವರಿಗೆ ಕೋಳಿ ಬಲಿ ಕೊಟ್ಟು ರಕ್ತದಿಂದ ನೈವೇದ್ಯ ಮಾಡುತ್ತಾರೆ. ಖಾಪ್ರಿ ಶಕ್ತಿ ದೇವರು. ಹೀಗಾಗಿ ಇಷ್ಟಾರ್ಥಗಳ ಈಡೇರಿಕೆಗೆ ಈ ರೀತಿಯ ಹರಕೆಗಳನ್ನು ಸಲ್ಲಿಸಲಾಗುತ್ತದೆ ಎನ್ನುತ್ತಾರೆ ಭಕ್ತೆ ರೇಷ್ಮಾ.