ಕಾರವಾರ (ಉ.ಕ): ಅತಿ ಹೆಚ್ಚು ಅರಣ್ಯ ಪ್ರದೇಶವನ್ನೊಳಗೊಂಡಿರುವ ಜಿಲ್ಲೆಯಲ್ಲಿ ಮಳೆ ಕೂಡ ಹೆಚ್ಚು. ಈ ಕಾರಣದಿಂದಲೇ ಸಮುದ್ರ ಕೊರೆತ, ನೆರೆ ಹಾವಳಿ, ಭೂಕುಸಿತದಂಥ ಪ್ರಕೃತಿ ವಿಕೋಪಗಳು ಸಂಭವಿಸಿ ಇಲ್ಲಿನ ಜನರ ರಕ್ಷಣೆಯೇ ದೊಡ್ಡ ಸವಾಲಾಗಿ ಬಿಡುತ್ತದೆ.
ಆದರೆ ಇಂತಹ ಸಮಸ್ಯೆಯನ್ನು ತಕ್ಷಣ ಪತ್ತೆಹಚ್ಚಿ ಕಾರ್ಯಾಚರಣೆಗೆ ನೆರವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಹೊಸ ತಯಾರಿ ಮಾಡಿಕೊಂಡಿದೆ. ಇದಕ್ಕಾಗಿ ಡ್ರೋನ್ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದೆ. ಮಳೆಗಾಲದ ಸಮಯದಲ್ಲಿ ಅಥವಾ ಚಂಡಮಾರುತದ ಇಫೆಕ್ಟ್ನಿಂದಾಗಿ ನೆರೆ ಕಾಟ, ಸಮುದ್ರದ ಅಲೆಗಳಲ್ಲಿ ರೌದ್ರಾವತಾರ ಕಾಣಿಸಿಕೊಳ್ಳುತ್ತವೆ. ಇಲ್ಲವೇ, ಗುಡ್ಡ ಕುಸಿತ, ಭೂ ಕುಸಿತ, ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಎಲ್ಲಾದರೂ ಜನರು ಸಿಲುಕಿದ್ದಾರೋ, ಪ್ರಾಣಿಗಳು ಸಿಲುಕಿವೆಯೋ ಅಥವಾ ಕಾಡುಗಳ ರಕ್ಷಣೆ ಹೇಗೆ ಸಾಧ್ಯ ಅನ್ನೋ ಸವಾಲುಗಳು ಎದುರಾಗುತ್ತವೆ.
ಈ ಸವಾಲಿಗೆ ಉತ್ತರ ನೀಡುವುದೊಂದಿಗೆ ತುರ್ತು ಕ್ರಮ ಕೈಗೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಡ್ರೋನ್ ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ. ವಿಪತ್ತು ನಿರ್ವಹಣಾ ನಿಧಿ (ಡಿಸಾಸ್ಟರ್ ಮ್ಯಾನೇಜ್ಮೆಂಟ್ ಫಂಡ್)ಯಿಂದ ಡ್ರೋನ್ ಖರೀದಿಗಾಗಿ ಪೊಲೀಸ್ ಇಲಾಖೆಗೆ ಫಂಡ್ ನೀಡಿದ್ದು, ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಡ್ರೋನ್ ಅನ್ನು ಐಡಿಯಾ ಫೋರ್ಜ್ ಕಂಪನಿಯಿಂದ ಖರೀದಿಸಲಾಗಿದೆ.