ಕರ್ನಾಟಕ

karnataka

By

Published : Dec 12, 2021, 3:39 PM IST

ETV Bharat / state

ಕಟ್ಟಿದ 4 ವರ್ಷಕ್ಕೆ ಬಿರುಕು ಬಿಟ್ಟ ಇಂಜಿನಿಯರಿಂಗ್ ಕಾಲೇಜು ಕಟ್ಟಡ : ವಿದ್ಯಾರ್ಥಿಗಳಲ್ಲಿ ಆತಂಕ

ನಿರ್ದೇಶಕರ ಸೂಚನೆ ಮೇರೆಗೆ ಕಟ್ಟಡ ನಿರ್ಮಾಣ ಮಾಡಿದ್ದ ರೈಟ್ಸ್ ಕಂಪನಿ ಹಾಗೂ ಬೆಂಗಳೂರಿನ ಖಾಸಗಿ ಸಂಸ್ಥೆಯ ತಜ್ಞರನ್ನೊಳಗೊಂಡ ತಂಡ ಕಾಲೇಜಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿದೆ. ಬಿರುಕು ಬಿಟ್ಟಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಮೇಲ್ಛಾವಣಿಗೆ ಆಧಾರ ಒದಗಿಸಿದ್ದಾರೆ..

Karwar govt engineering college damage
ಕಾರವಾರ ಇಂಜಿನಿಯರಿಂಗ್​ ಕಾಲೇಜು ಕಟ್ಟಡದಲ್ಲಿ ಬಿರುಕು

ಕಾರವಾರ :ಇಲ್ಲಿನ ಇಂಜಿನಿಯರಿಂಗ್​ ಕಾಲೇಜು ಕಟ್ಟಡ ನಿರ್ಮಾಗೊಂಡು ನಾಲ್ಕು ವರ್ಷ ಕಳೆದಿವೆ. ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಆದರೆ, ಕಟ್ಟಡದ ಕೆಲ ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಕಾಮಗಾರಿಯೂ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಕಾರವಾರ ಇಂಜಿನಿಯರಿಂಗ್​ ಕಾಲೇಜು ಕಟ್ಟಡದಲ್ಲಿ ಬಿರುಕು

ಸರ್ಕಾರಿ ಇಂಜಿನಿಯರಿಂಗ್​ ಕಾಲೇಜಿಗೆ ಸ್ವಂತ ಕಟ್ಟಡದ ಬೇಡಿಕೆ ಹಿನ್ನೆಲೆಯಲ್ಲಿ 2009ರಲ್ಲಿ ಸರ್ಕಾರ ಮಾಜಾಳಿ ಗ್ರಾಮದ 14.34 ಎಕರೆ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಅದರಂತೆ ಕಾಲೇಜಿನ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದ ರೈಟ್ಸ್ ಕಂಪನಿ ಕೋಟ್ಯಂತರ ರೂ. ವೆಚ್ಚದಲ್ಲಿ 2013ರಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿ 2017ರಲ್ಲಿ ಕಾಮಗಾರಿ ಪೂರ್ಣಗೊಳಿಸಿತ್ತು.

ಇದಾದ ಬಳಿಕ ಕಟ್ಟಡವನ್ನು ಕಾಲೇಜಿಗೆ ಹಸ್ತಾಂತರಿಸುವ ವೇಳೆ ಕಟ್ಟಡದ ಗುಣಮಟ್ಟ ಉತ್ತಮವಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಸಾಕಷ್ಟು ವಿರೋಧ ಸಹ ವ್ಯಕ್ತವಾಗಿತ್ತು. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲೇಜಿನ ಆಡಳಿತ ಮಂಡಳಿ ತರಾತುರಿಯಲ್ಲಿ ಕಟ್ಟಡವನ್ನು ಹಸ್ತಾಂತರ ಮಾಡಿಕೊಂಡಿತ್ತು.

ಇನ್ನು ಕಾಲೇಜಿನಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಮೊದಲೇ ತರಗತಿಗಳನ್ನು ಪ್ರಾರಂಭಿಸಿತ್ತು. ಇದೀಗ ಕಾಲೇಜು ಆರಂಭವಾಗಿ ಕೇವಲ ನಾಲ್ಕು ವರ್ಷಗಳು ಕಳೆದಿವೆ. ಅದಾಗಲೇ ಕಾಲೇಜಿನ ಕಟ್ಟಡದ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿದೆ.

ಕಾರವಾರ ಇಂಜಿನಿಯರಿಂಗ್​ ಕಾಲೇಜು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು..

ಕಾಲೇಜಿನ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಶಾಲಾ ಆಡಳಿತ ಮಂಡಳಿ ಬಿರುಕು ಬಿಟ್ಟಿರುವ ಕಟ್ಟಡದಲ್ಲಿನ ತರಗತಿಗಳನ್ನು ಸ್ಥಳಾಂತರಿಸಿದೆ. ಈ ಬಗ್ಗೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರ ಗಮನಕ್ಕೂ ತಂದಿದ್ದಾರೆ.

ನಿರ್ದೇಶಕರ ಸೂಚನೆ ಮೇರೆಗೆ ಕಟ್ಟಡ ನಿರ್ಮಾಣ ಮಾಡಿದ್ದ ರೈಟ್ಸ್ ಕಂಪನಿ ಹಾಗೂ ಬೆಂಗಳೂರಿನ ಖಾಸಗಿ ಸಂಸ್ಥೆಯ ತಜ್ಞರನ್ನೊಳಗೊಂಡ ತಂಡ ಕಾಲೇಜಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿದೆ. ಬಿರುಕು ಬಿಟ್ಟಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಮೇಲ್ಛಾವಣಿಗೆ ಆಧಾರ ಒದಗಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಚಾರ್ಯರು ಸದ್ಯ ಉಂಟಾದ ಬಿರುಕುಗಳಿಂದ ಕಟ್ಟಡಕ್ಕೆ ಹೆಚ್ಚಿನ ಹಾನಿ ಇಲ್ಲ ಎಂದು ತಜ್ಞರು ತಿಳಿಸಿದ್ದು, ಕಟ್ಟಡದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ವರದಿ ನೀಡಲಿದ್ದಾರೆ. ಕಟ್ಟಡದ ಬಿರುಕಿನಿಂದ ವಿದ್ಯಾರ್ಥಿಗಳಿಗಾಗಲಿ, ಶೈಕ್ಷಣಿಕ ಚಟುವಟಿಕೆಗಳಿಗಾಗಲೇ ಯಾವುದೇ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

ABOUT THE AUTHOR

...view details