ಕರ್ನಾಟಕ

karnataka

By

Published : Aug 29, 2022, 1:07 PM IST

ETV Bharat / state

ಕಡಲ ನಗರಿಯಲ್ಲಿ‌ ಕಳೆಗಟ್ಟಿದ ಗಣೇಶೋತ್ಸವ.. 2 ವರ್ಷದ ಬಳಿಕ ಅದ್ಧೂರಿ ಆಚರಣೆಗೆ ಸಿದ್ಧತೆ

ಉತ್ತರ ಕನ್ನಡದ ಕಾರವಾರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದ ಅದ್ಧೂರಿ ಆಚರಣೆಗೆ ಬ್ರೇಕ್ ಬಿದ್ದಿದ್ದು, ಜನರು ಸರಳವಾಗಿ ಆಚರಣೆ ಮಾಡಿದ್ದರು. ಆದರೆ, ಈ ಬಾರಿ ಕೊರೊನಾ ಆತಂಕ ದೂರಾಗಿರುವ ಹಿನ್ನಲೆ ವಿಘ್ನ ನಿವಾರಕನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

karwar ganesh chaturthi preparation
ಗಣೇಶೋತ್ಸವ

ಕಾರವಾರ: ಗೌರಿ ಗಣೇಶ ಹಬ್ಬಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿವೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಕಳೆಗುಂದಿದ್ದ ಗಣೇಶ ಚತುರ್ಥಿ ಈ ಬಾರಿ ರಂಗು ಪಡೆದುಕೊಂಡಿದೆ. ಅದರಲ್ಲೂ ಕರಾವಳಿ ನಗರಿ ಕಾರವಾರದಲ್ಲಿ ವಿಜೃಂಭಣೆಯ ಆಚರಣೆಗೆ ಜನರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೂರ್ತಿ ತಯಾರಕರು ಸಹ ಉತ್ಸಾಹದಿಂದಲೇ ಗಣೇಶನ ತರಹೇವಾರಿ ಅವತಾರಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ಕಾರವಾರದಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಜನರು ಮನೆಗಳಲ್ಲಿ ಆಚರಿಸುವುದರ ಜೊತೆಗೆ ಎಲ್ಲರೂ ಒಟ್ಟಾಗಿ ಸಾರ್ವಜನಿಕವಾಗಿ ಮೂರ್ತಿಗಳನ್ನ ಕೂರಿಸುತ್ತಾರೆ. 9 ರಿಂದ 11 ದಿನಗಳ ಕಾಲ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವುದರ ಜೊತೆಗೆ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಸಹ ವಿಜೃಂಭಣೆಯಿಂದ ಜರುಗುತ್ತದೆ.

ಮಣ್ಣಿನ ಗಣೇಶನ ತಯಾರಿಕೆ

ಎರಡು ವರ್ಷ ಮಂಕಾಗಿದ್ದ ಹಬ್ಬದ ಆಚರಣೆ.. ಕಳೆದೆರಡು ವರ್ಷ ಕೊರೊನಾ ಹಿನ್ನೆಲೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಸರಳವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು. ಈ ಬಾರಿ ಕೊರೊನಾ ಆತಂಕ ಇಲ್ಲವಾಗಿದ್ದು, ಸರ್ಕಾರ ಸಹ ಅವಕಾಶ ನೀಡಿರುವ ಹಿನ್ನೆಲೆ ಜನರು ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಗರದಲ್ಲಿ ಪೆಂಡಾಲ್ ಹಾಕಿ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಹಿಂದಿಗಿಂತಲೂ ದೊಡ್ಡದಾದ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ ಅಂತಾರೆ ಗಣೇಶೋತ್ಸವ ಸಮಿತಿ ಮುಖಂಡರು.

ಕಾರವಾರದಲ್ಲಿ ಗೌರಿ ಗಣೇಶ ಹಬ್ಬಕ್ಕೆ ಸಿದ್ಧತೆ

ಇದನ್ನೂ ಓದಿ:ಪರಿಸರ ಸ್ನೇಹಿ ಗಣಪತಿ ತಯಾರು ಮಾಡುವ ಹಾವೇರಿಯ ನೆಗಳೂರುಮಠ ಕುಟುಂಬ

9 ರಿಂದ 11 ದಿನಗಳ ಕಾಲ ಪೂಜೆ.. ಗಣೇಶ ಚತುರ್ಥಿ ವೇಳೆ ಪ್ರತಿ ವರ್ಷ ಕಾರವಾರ ನಗರದಲ್ಲೇ ಸುಮಾರು 15 ರಿಂದ 20 ಸಾರ್ವಜನಿಕ ಗಣೇಶ ಮೂರ್ತಿಗಳನ್ನ ಸ್ಥಾಪನೆ ಮಾಡಲಾಗುತ್ತದೆ. ರಿಕ್ಷಾ ಚಾಲಕರು, ವಿವಿಧ ಸಂಘ ಸಂಸ್ಥೆಗಳು, ಯುವಕರ ತಂಡ, ಪೊಲೀಸರು, ನಗರಸಭೆ ಸೇರಿದಂತೆ ಹಲವರು ಸಾರ್ವಜನಿಕ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಿ 9 ರಿಂದ 11 ದಿನಗಳ ಕಾಲ ಪೂಜೆ ಸಲ್ಲಿಸುತ್ತಾರೆ. ನಂತರ ಅವುಗಳನ್ನ ನಗರದಲ್ಲಿ ಡಿಜೆ ಹಾಡಿನೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಸಮುದ್ರದಲ್ಲಿ ನಿಮಜ್ಜನ ಮಾಡಲಾಗುತ್ತದೆ.

ಬೆಲೆ ಏರಿಕೆ ನಡುವೆಯೂ ಹಬ್ಬದ ಭರಾಟೆ.. ನಗರದಲ್ಲಿ ಹಬ್ಬದ ವಸ್ತುಗಳ ಖರೀದಿ ಭರಾಟೆ ಸಹ ಜೋರಾಗಿದ್ದು, ಬೆಲೆ ಏರಿಕೆಯಿದ್ದರೂ ಸಹ ಜನರು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ.

ಪರಿಸರ ಸ್ನೇಹಿ ಗಣಪನ ತಯಾರಿಕೆಗೆ ಮಣ್ಣಿನ ಕೊರತೆ.. ಈ ಬಾರಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಸಹ ಅವುಗಳನ್ನು ತಯಾರಿಸಲು ಬೇಕಾದ ಮಣ್ಣಿಗೆ ಕೊರತೆಯಿದೆ. ಹೆಚ್ಚಿನ ಹಣ ಕೊಟ್ಟು ಮಣ್ಣು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸಲು ಸೂಚಿಸುವುದರ ಜೊತೆಗೆ ಮಣ್ಣು ಲಭ್ಯವಾಗುವಂತೆಯೂ ನೋಡಿಕೊಳ್ಳಬೇಕು ಅಂತಾರೆ ಮೂರ್ತಿ ತಯಾರಕರು.

ಇದನ್ನೂ ಓದಿ:ಪರಿಸರ ಸ್ನೇಹಿ ಗಣಪತಿ ತಯಾರು ಮಾಡುವ ಹಾವೇರಿಯ ನೆಗಳೂರುಮಠ ಕುಟುಂಬ

ABOUT THE AUTHOR

...view details