ಕರ್ನಾಟಕ

karnataka

ETV Bharat / state

ಬ್ಯಾಂಕ್ ನೌಕರರಿಂದಲೇ ಹೆಚ್ಚುತ್ತಿರುವ ವಂಚನೆ: ಕೋಟಿ ಲಪಟಾಯಿಸಿದ ಅಧಿಕಾರಿ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್! - ಬ್ಯಾಂಕಿನಲ್ಲಿ ವಂಚನೆ

ಕಾರವಾರ ಬ್ಯಾಂಕ್ ಆಫ್ ಬರೋಡಾ ವಂಚನೆ ಪ್ರಕರಣ: ರಾಷ್ಟ್ರೀಕೃತ ಬ್ಯಾಂಕ್​ನ ಅಸಿಸ್ಟೆಂಟ್ ಮ್ಯಾನೇಜರ್ ಬ್ಯಾಂಕಿನಿಂದ ಸುಮಾರು 2.69 ಕೋಟಿ ಹಣವನ್ನು ತನ್ನ ಹೆಂಡತಿ ಖಾತೆಗೆ ಜಮಾ ಮಾಡಿ ನಾಪತ್ತೆಯಾಗಿದ್ದ. ಇದೀಗ ಅವರ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇರುವುದು ತಿಳಿದುಬಂದಿದೆ.

Bank of Baroda fraud case
ಬ್ಯಾಂಕ್ ಆಫ್ ಬರೋಡಾ

By

Published : Sep 13, 2022, 11:08 AM IST

ಕಾರವಾರ: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗಿಗಳೇ ಬ್ಯಾಂಕಿನಲ್ಲಿ ವಂಚನೆ ಮಾಡುತ್ತಿರುವ ಕೆಲ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಮತ್ತೊಂದು ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್​​ನ ಅಸಿಸ್ಟೆಂಟ್ ಮ್ಯಾನೇಜರ್ ಬ್ಯಾಂಕಿನಿಂದ ಸುಮಾರು 2.69 ಕೋಟಿ ಹಣವನ್ನು ತನ್ನ ಹೆಂಡತಿ ಖಾತೆಗೆ ಜಮಾ ಮಾಡಿ ನಾಪತ್ತೆಯಾಗಿದ್ದು, ಇದೀಗ ಈತನ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇರುವುದು ತಿಳಿದುಬಂದಿದೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರೇ ಬ್ಯಾಂಕಿಗೆ ಪಂಗನಾಮ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಬ್ಯಾಂಕ್ ಆಫ್ ಬರೋಡಾದಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಮಾರ್ ಬೋನಾಲ ಎಂಬುವರು ಐದು ತಿಂಗಳ ಹಿಂದೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇರ್ಪಡೆಗೊಂಡಿದ್ದರು. ಸೇರ್ಪಡೆಗೊಂಡಾಗಿನಿಂದ ಸೆ.5ರವರೆಗೆ ಬ್ಯಾಂಕ್​​ ಸಿಬ್ಬಂದಿ ಲಾಗಿನ್ ಮೂಲಕ ಕರೆಂಟ್ ಅಕೌಂಟ್​​ನಿಂದ ತಮ್ಮ ಪತ್ನಿ ರೇವತಿ ಗೊರೆ ಹೆಸರಿನ ಖಾತೆಗೆ ಆರೋಪಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಸುಮಾರು 2.69 ಕೋಟಿ ಹಣವನ್ನು ಹೀಗೆ ಲಪಟಾಯಿಸಿದ್ದು, ಕೆಲ ದಿನಗಳ ಹಿಂದೆಯೇ ಬ್ಯಾಂಕಿಗೆ ಬರದೆ ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ.

ಕಾರವಾರ ಬ್ಯಾಂಕ್ ಆಫ್ ಬರೋಡಾ ವಂಚನೆ ಪ್ರಕರಣ..

ಬ್ಯಾಂಕ್​ ಮ್ಯಾನೇರ್​ರಿಂದ ದೂರು.. ಬ್ಯಾಂಕಿನ ಮ್ಯಾನೇಜರ್ ಅವರು ಅಸಿಸ್ಟೆಂಟ್ ಮ್ಯಾನೇಜರ್ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಅಲ್ಲದೇ ಬ್ಯಾಂಕಿನ ಖಾತೆಗಳನ್ನ ಪರಿಶೀಲಿಸಿದಾಗ ಆರೋಪಿತ ಕುಮಾರ್ ಬೋನಾಲ ಬ್ಯಾಂಕಿನಲ್ಲಿದ್ದ ಹಣ ಲಪಟಾಯಿಸಿ ಪರಾರಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವ ಖಾತೆಗೆ ಹಣವನ್ನ ವರ್ಗಾವಣೆ ಮಾಡಿಕೊಂಡಿದ್ದಾನೋ ಆ ಖಾತೆಯನ್ನ ಪರಿಶೀಲಸಿದಾಗ ಯಾವುದೇ ಹಣ ಇಲ್ಲದಿರುವುದು ತಿಳಿದಿದೆ.

ಪೊಲೀಸ್​ ತನಿಖೆ ಚುರುಕು.. ಸದ್ಯ ಯಲ್ಲಾಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಾಪತ್ತೆಯಾಗಿರುವ ಕುಮಾರ್ ಪತ್ತೆಗಾಗಿ ಬಲೆ ಬೀಸಿದ್ದಾರೆ. ಆರೋಪಿಯನ್ನ ಬಂಧಿಸಿದ ನಂತರ ಹಣವನ್ನ ಎಲ್ಲಿ ಇಟ್ಟಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಬ್ಯಾಂಕಿನಲ್ಲಿದ್ದ ಗ್ರಾಹಕರ ಹಣಕ್ಕೆ ಯಾವುದೇ ತೊಂದರೆಯಾಗಿಲ್ಲ. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಭಟ್ಕಳದಲ್ಲಿ ಕೆಲ ತಿಂಗಳ ಹಿಂದೆ ಎಸ್​​ಬಿಐ ಬ್ಯಾಂಕಿನಲ್ಲಿ ಉದ್ಯೋಗಿಯೋರ್ವ ಇದೇ ರೀತಿ ಹಣ ವಂಚನೆ ಮಾಡಿ ಪರಾರಿಯಾಗಿದ್ದ ಘಟನೆ ನಡೆದಿತ್ತು. ಇದೀಗ ಎರಡನೇ ಪ್ರಕರಣವಾಗಿ ಯಲ್ಲಾಪುರದಲ್ಲಿ ನಡೆದಿದ್ದು, ಇಂತಹ ವಂಚನೆ ಪ್ರಕರಣ ತಡೆಯಲು ಬ್ಯಾಂಕ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಇದನ್ನೂ ಓದಿ:ಬ್ಯಾಂಕ್​ಗೆ ವಂಚಿಸಿ ಹೆಂಡತಿ ಖಾತೆಗೆ 2ಕೋಟಿಗೂ ಹೆಚ್ಚು ಹಣ ವರ್ಗಾವಣೆ: ನಾಪತ್ತೆಯಾದ ಅಧಿಕಾರಿ!

ABOUT THE AUTHOR

...view details