ಕರ್ನಾಟಕ

karnataka

By

Published : Nov 15, 2021, 6:53 AM IST

ETV Bharat / state

ರಾಜ್ಯದಲ್ಲೇ ಮೊದಲ ಬಾರಿಗೆ ನೀಲಿ ಕಲ್ಲು ಕೃಷಿ: ಕಾರವಾರ ಮಹಿಳೆಯರಿಂದ ವಿಭಿನ್ನ ಪ್ರಯತ್ನ

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಉತ್ತರ ಕನ್ನಡ (Uttara Kannada District) ಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ನೀಲಿಕಲ್ಲು (Blue Stone Farming) ಕೃಷಿಗೆ ಚಾಲನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karawara) ನಂದನಗದ್ದಾದಲ್ಲಿನ ಮಹಿಳೆಯರು ಮತ್ಸ್ಯ ಕೃಷಿ ಮಾಡಲು ಮುಂದಾಗಿದ್ದು, ಕೇಂದ್ರ ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

Karawara Blue Stone Farming
ನೀಲಿ ಕಲ್ಲು ಕೃಷಿ ಪ್ರಾರಂಭಿಸಿದ ಕಾರವಾರ ಮಹಿಳೆಯರು

ಕಾರವಾರ: ಮತ್ಸ್ಯಕ್ಷಾಮ, ಹವಾಮಾನ ವೈಪರಿತ್ಯದಿಂದಾಗಿ ಇತ್ತೀಗೆಚೆ ಮೀನುಗಾರಿಕೆ ನಡೆಸುವುದೇ ದೊಡ್ಡ ಸವಾಲಾಗಿದೆ. ಅದೆಷ್ಟೋ ಮೀನುಗಾರರು ಹಾಕಿದ ಬಂಡವಾಳ ಸಿಗದೇ ಬರಿಗೈಯ್ಯಲ್ಲಿ ವಾಪಸ್ ​ಆದ ಘಟನೆಗಳು ಕೂಡ ನಡೆದಿದೆ. ಆದರೆ, ಇದೀಗ ಮೀನುಗಾರ ಮಹಿಳೆಯರು ರಾಜ್ಯದಲ್ಲಿಯೇ ಪ್ರಥಮವಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಹೊಸ ಪ್ರಯತ್ನವೊಂದಕ್ಕೆ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

ಹೌದು, ಕಳೆದ ಎರಡ್ಮೂರು ವರ್ಷಗಳಿಂದ ಮತ್ಸ್ಯಕ್ಷಾಮ, ಕೊರೊನಾ, ಹವಮಾನ ವೈಪರೀತ್ಯ ಹೀಗೆ ಒಂದಲ್ಲಾ ಒಂದು ಸಮಸ್ಯೆಗಳಿಂದಾಗಿ ಮೀನುಗಾರರು ಮೀನುಗಾರಿಕೆ ನಡೆಸುವುದೇ ಕಷ್ಟಕರವಾಗಿದೆ. ಸಾಲ ಮಾಡಿ ಲಕ್ಷಾಂತರ ರೂ. ಕರ್ಚು ಮಾಡಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತಿಂಗಳುಗಳ ಕಾಲ ಆಳ ಸಮುದ್ರದಲ್ಲಿ ಸುತ್ತಾಡಿದರೂ ಕೂಡ ಡಿಸೇಲ್ ರೇಟ್ ಸಹ ಹುಟ್ಟದ ಕಾರಣ ಅದೆಷ್ಟೋ ಬೋಟ್​ಗಳು ಇಂದಿಗೂ ಲಂಗರು ಹಾಕಿಕೊಂಡಿವೆ.

ಮಾತ್ರವಲ್ಲದೇ, ಮೀನುಗಾರಿಕೆ ಜೊತೆಗೆ ಕಡಲತೀರಗಳಲ್ಲಿ ಬಳಚು, ತಿಸರೇ ಹೆಕ್ಕಿ ತೆಗೆದು ಒಂದಿಷ್ಟು ಸಂಪಾದನೆ ಮಾಡಿಕೊಳ್ಳುತ್ತಿದ್ದ ಮಹಿಳೆಯರ ಉದ್ಯೋಗಕ್ಕೂ ಇದೀಗ ಕೊಕ್ಕೆ ಬಿದ್ದಿದೆ.

ನೀಲಿ ಕಲ್ಲು ಕೃಷಿ ಪ್ರಾರಂಭಿಸಿದ ಕಾರವಾರ ಮಹಿಳೆಯರು

ಈ ಎಲ್ಲ ಸಮಸ್ಯೆಗಳಿಂದಾಗಿ ಸಂಕಷ್ಟದ ಜೀವನ ನಡೆಸುತ್ತಿರುವ ಮೀನುಗಾರರ ಪೈಕಿ, ಕಾರವಾರದ ನಂದನಗದ್ದಾದ ಮೀನುಗಾರ ಮಹಿಳೆಯರು ನೀಲಿಕಲ್ಲು ಕೃಷಿಗೆ ( (Blue Stone Farming) ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (pradhan mantri matsya sampada yojana) ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಶೇ. 60 ರ ಸಬ್ಸಿಡಿ ದರದಲ್ಲಿ ನೀಲಿಕಲ್ಲುಗಳನ್ನು ಸಮುದ್ರದಲ್ಲಿ ಬೆಳೆಯಲಾಗುತ್ತಿದೆ. ನೀಲಿ ಕಲ್ಲುಗಳು ಬಹಳ ರುಚಿಕರವಾಗಿದ್ದು, ಸುಕ್ಕಾ, ಚಿಲ್ಲಿಯಂಥ ಖಾದ್ಯಗಳಿಗೆ ಹೆಚ್ಚಾಗಿ ಬಳಸುವುದರಿಂದ ವಿಶೇಷವಾಗಿ ಕರ್ನಾಟಕ ಹಾಗೂ ಗೋವಾ ಕರಾವಳಿಯ ಭಾಗದಲ್ಲಿ ಹೋಟೆಲ್​ಗಳಲ್ಲಿ ಇದಕ್ಕೆ ಭಾರಿ ಬೇಡಿಕೆಯಿದೆ. ಇದನ್ನು ಮಹಿಳೆಯರು ಉತ್ಸಾಹದಿಂದ ಮಾಡುತ್ತಿದ್ದು, ಇದು ಮೀನುಗಾರರಿಗೆ ನೆರವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಇದನ್ನೂ ಓದಿ:'ಜೈ ಭೀಮ್' ಚಿತ್ರದ ಸೂರ್ಯ ಮೇಲೆ ಹಲ್ಲೆ ಮಾಡಿದ್ರೆ 1 ಲಕ್ಷ ಬಹುಮಾನ : ಪಿಎಂಕೆ ಜಿಲ್ಲಾ ಕಾರ್ಯದರ್ಶಿಯ ವಿವಾದಾತ್ಮಕ ಘೋಷಣೆ

ಇನ್ನು ಕಾರವಾರದ ನಂದನಗದ್ದಾ ಬಳಿ 10 ಮೀನುಗಾರ ಮಹಿಳೆಯರು ಸೇರಿ ಸಂಘವೊಂದನ್ನು ಮಾಡಿಕೊಂಡು ಕಾಳಿನದಿ ಅಳಿವೆಯಲ್ಲಿ ಪ್ರಥಮ ಬಾರಿಗೆ ನೀಲಿಕಲ್ಲು ಕೃಷಿ ಮಾಡುತ್ತಿದ್ದಾರೆ. ಸುಮಾರು 10 ರಾಫ್ಟ್ ಗಳನ್ನು ಸಿದ್ಧಪಡಿಸಿರುವ ಮೀನುಗಾರರು ನೀಲಿ ಕಲ್ಲುಗಳನ್ನು ಉದ್ದದ ಬಟ್ಟೆಯಲ್ಲಿ ಹಾಕಿ ಅದನ್ನು ಹಗ್ಗದೊಂದಿಗೆ ಮೀಟರ್ ಉದ್ದಷ್ಟು ಹೊಲಿದು ನೀರಿನಲ್ಲಿ ಇಳಿಬಿಡಲಾಗುತ್ತದೆ.

ಇದು ಮೂರು ತಿಂಗಳ ಬಳಿಕ ದೊಡ್ಡದಾಗಿ ಹಗ್ಗಕ್ಕೆ ಅಂಟಿಕೊಂಡಿರುತ್ತದೆ. ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ನೀಲಿಕಲ್ಲುಗಳ ಕೃಷಿಯನ್ನು ಮಾಡಲಾಗುತ್ತಿದ್ದು, ಮೀನುಗಾರಿಕೆ ಇಲಾಖೆಯಿಂದ ತರಬೇತಿ ಕೂಡ ನೀಡಲಾಗಿದೆ. ಒಟ್ಟಾರೆ ಸಂಕಷ್ಟದ ಸಂದರ್ಭದಲ್ಲಿ ಮೀನುಗಾರ ಮಹಿಳೆಯರು ಇಂತಹದೊಂದು ಯೋಜನೆ ಸದ್ಬಳಕೆಗೆ ಮುಂದಾಗಿರುವುದು ಸ್ವಾಗತಾರ್ಹ.

ABOUT THE AUTHOR

...view details