ಕಾರವಾರ:ಮಳೆಗಾಲ ಮುಗಿಯುವ ಹೊತ್ತಿಗೆ ತೆನೆಯೊಡೆದು ಬರುವ ಹೊಸ ಫಲವನ್ನು ಮನೆಗೆ ತರುವ ಕ್ಷಣವನ್ನು ಹೊಸ್ತಿನ ಹಬ್ಬವಾಗಿ ಕರಾವಳಿ ಭಾಗಗಳಲ್ಲಿ ಆಚರಿಸಲಾಗುತ್ತದೆ. ಒಂದೊಮ್ಮೆ ಈ ಹಬ್ಬ ಆಚರಣೆ ಆಗದೇ ಇದ್ದಲ್ಲಿ ಗ್ರಾಮದಲ್ಲಿ ಮತ್ಯಾವ ಹಬ್ಬವೂ ನಡೆಯುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ ಇಂದು ಊರಿಗೆ ಊರೇ ಒಂದಾಗಿ ಗದ್ದೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆಗಳನ್ನು ಮನೆ ತುಂಬಿಸಿಕೊಳ್ಳುವ ಮೂಲಕ ಭಿನ್ನವಾಗಿ ಆಚರಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ದಸರಾ, ಗಂಗಾಷ್ಠಮಿ ಸಂದರ್ಭದಲ್ಲಿ ಹೊಸ್ತಿನ ಹಬ್ಬವನ್ನು ಸಡಗರ ಸಂಭ್ರಮದಿಂದ ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ತಲೆ ತಲೆಮಾರುಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಹಬ್ಬ ಹರಿದಿನಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕುಮಟಾದ ಬರ್ಗಿಯಲ್ಲಿ ಆಚರಿಸಲಾಗುವ ಈ ಹೊಸ್ತಿನ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ.
ಮಳೆಗಾಲ ಮುಗಿಯುವ ಹೊತ್ತಲ್ಲಿ ವಿಶೇಷ ಪೂಜೆ
ಮಳೆಗಾಲ ಮುಗಿಯುವ ಹೊತ್ತಿಗೆ ಹೊಲಗಳಲ್ಲಿ ಫಸಲೊಡೆದ ಫಲವನ್ನು ಮನೆ ತುಂಬಿಸಿಕೊಳ್ಳುವ ಪೂರ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಹಬ್ಬವನ್ನು ಹರಣ ಮುಹೂರ್ತ, ಹೊಸ ಧಾನ್ಯ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಹಬ್ಬದ ದಿನ ವಾದ್ಯಮೇಳದೊಂದಿಗೆ ಜನರು ಹಾಗೂ ಅರ್ಚಕರು ಹೊಸ್ತಿನ ಹಬ್ಬಕ್ಕಾಗಿಯೇ ಮೀಸಲಿಟ್ಟಿರುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಕದಿರು ಹೊತ್ತು ತರುತ್ತಾರೆ. ಇದರಲ್ಲಿ ಊರಿನ ಎಲ್ಲ ಸಮುದಾಯದವರು ಒಟ್ಟಾಗಿಯೇ ಪಾಲ್ಗೊಂಡು ಹಬ್ಬ ಆಚರಣೆ ಮಾಡುವುದು ವಿಶೇಷ.