ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮಂಗಳವಾರವೂ ಮುಂದುವರಿದಿದೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡು, ನದಿಪಾತ್ರದ ನಿವಾಸಿಗಳು ನೆರೆ ಭೀತಿ ಎದುರಿಸುವಂತಾಗಿದೆ. ಹವಾಮಾನ ಇಲಾಖೆ ಈಗಾಗಲೇ ಜೂ.7ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಅದರಂತೆ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಸೋಮವಾರ ಆರಂಭವಾದ ಮಳೆ ಕೆಲವೆಡೆ ಸಂಜೆ ಕೊಂಚ ಬಿಡುವು ನೀಡಿದಂತೆ ಕಂಡರೂ ಮಂಗಳವಾರ ಮತ್ತೆ ಮುಂದುವರೆದಿದೆ. ಮಳೆಯೊಂದಿಗೆ ಗಾಳಿ ಕೂಡ ರಭಸದಿಂದ ಬೀಸುತ್ತಿದ್ದು, ನದಿ ಪಾತ್ರದ ಪ್ರದೇಶಗಳಲ್ಲೆಲ್ಲ ಈಗಾಗಲೇ ನೀರು ತುಂಬಲಾರಂಭಿಸಿದೆ.
ಈ ವರ್ಷ ಕೃತಕ ನೆರೆ ಸೃಷ್ಟಿ: ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಂಕೋಲಾ ತಾಲೂಕು ವ್ಯಾಪ್ತಿಯ ಗಂಗಾವಳಿ ನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಮೋಟನಕುರ್ವೆ, ದಂಡೆಬಾಗ, ಕುರ್ವೆ ನಡುಗಡ್ಡೆಯ ಭಾಗದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದಲ್ಲದೆ ಕಲ್ಲೇಶ್ವರ- ಡೊಂಗ್ರಿ- ರಾಮನಗುಳಿ ಭಾಗದಲ್ಲಿಯು ನೀರಿನ ಮಟ್ಟ ಏರಿಕೆಯಾಗಿ, ಗುಳ್ಳಾಪುರದಿಂದ ಕಲ್ಲೇಶ್ವರ- ಶೇವಕಾರ ಕೈಗಡಿಗೆ ಹೋಗುವ ತಾತ್ಕಾಲಿಕ ಸೇತುವೆ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಈ ಭಾಗದ ಸಂಪರ್ಕ ಕಡಿತಗೊಂಡಿದೆ. ಮಂಜುಗುಣಿ ಮತ್ತು ಕೊಡ್ಸಣಿ ಬಳಿ ಸೇತುವೆ ನಿರ್ಮಾಣ ಮಾಡಲು ಗಂಗಾವಳಿ ನದಿಯಲ್ಲಿ ಹಾಕಲಾಗಿರುವ ಭಾರಿ ಪ್ರಮಾಣದ ಮಣ್ಣಿನಿಂದ ಈ ವರ್ಷ ಕೃತಕ ನೆರೆ ಸೃಷ್ಟಿಯಾಗುತ್ತಿದೆ.
ಕಾರವಾರ- ಜೊಯಿಡಾ ಸಂಪರ್ಕಿಸುವ ಅಣಶಿ ಘಟ್ಟದಲ್ಲಿ ಮತ್ತೆ ಈ ಬಾರಿಯೂ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಕಳೆದ ವರ್ಷದ ಮಳೆಗೆ ಇಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ಸಂಪರ್ಕ ಕಡಿತಗೊಂಡಿತ್ತು. ಈ ಬಾರಿ ಕೂಡ ಎರಡು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಕಲ್ಲು-ಮಣ್ಣು ರಸ್ತೆಗೆ ಬಿದ್ದಿದ್ದು, ಮಂಗಳವಾರ ಕೂಡ ಬೃಹತ್ ಕಲ್ಲು ರಸ್ತೆಗೆ ಉರುಳಿಬಿದ್ದಿದೆ. ಹೀಗಾಗಿ, ಈ ಭಾಗದಲ್ಲಿ ಜೀವಭಯದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮುಂಜಾನೆಯಿಂದಲೇ ಭಾರಿಮಳೆ :ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂದು ಮುಂಜಾನೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆಯಿಂದಲೇ ಎಡಬಿಡದೆ ಭಾರಿ ಮಳೆ ಸುರಿಯುತ್ತಿದ್ದು, ಜಿಲ್ಲೆಯಾದ್ಯಂತ ಮಳೆ ಅಬ್ಬರ ಹೆಚ್ಚಿದೆ. ಜಿಲ್ಲೆಯ ನದಿಗಳು ತುಂಬಿಕೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕಳೆದ ವಾರದಲ್ಲಿ ಸುರಿದ ಭಾರಿ ಮಳೆಗೆ ತತ್ತರಿಸಿದ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ಮಳೆ ಆತಂಕ ಸೃಷ್ಟಿಸಿದೆ.