ಕಾರವಾರ : ಜಾತ್ರೆ ಅಂದ್ಮೇಲೆ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತದೆ. ಅಲ್ಲಿನ ಜನರ ಆಚಾರ, ವಿಚಾರಗಳಿಗೆ ಅನುಗುಣವಾಗಿ ವಿಭಿನ್ನ ಆಚರಣೆಗಳನ್ನು ಮಾಡಲಾಗುತ್ತದೆ. ಕೆಲವೆಡೆ ಕೋಳಿ, ಕುರಿ ಬಲಿ ವಿಶೇಷತೆಯಾಗಿದ್ರೆ ಇನ್ನೂ ಕೆಲವೆಡೆ ನಡೆಯುವ ಆಚರಣೆಗಳೇ ವಿಶೇಷವಾಗಿರುತ್ತದೆ. ಅದರಂತೆ ಕರಾವಳಿ ನಗರಿ ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲಿ ವಿಭಿನ್ನ ಜಾತ್ರೆ ನಡೆಯುತ್ತದೆ.
ಒಂದೆಡೆ ಬೃಹತ್ ಗಾತ್ರದ ಪಂಜುರ್ಲಿ, ತೋಳ, ಕೋಣ ಸೇರಿದಂತೆ ಬಗೆ ಬಗೆಯ ಮಾದರಿಗಳನ್ನು ಹೊತ್ತುಕೊಂಡು ಬರುತ್ತಿರುವ ವಿಭಿನ್ನ ವೇಷಭೂಷಣ ತೊಟ್ಟ ಜನರು. ಇನ್ನೊಂದೆಡೆ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ, ಯಕ್ಷಗಾನ ಪಾತ್ರಧಾರಿ ಸೇರಿದಂತೆ ವಿವಿಧ ವೇಷಧಾರಿಗಳು ವಾಹನದ ಮೇಲೆ ಕುಳಿತಿರುವುದು. ಮತ್ತೊಂದೆಡೆ ಇವೆಲ್ಲವನ್ನು ಕಣ್ತುಂಬಿಕೊಳ್ಳುತ್ತಾ ಮೊಬೈಲ್ನಲ್ಲಿ ಸೆರೆ ಹಿಡಿದುಕೊಳ್ಳುತ್ತಿರುವ ಪ್ರೇಕ್ಷಕರು. ಅರೇ ಇದೇನು ಛದ್ಮವೇಷ ಸ್ಪರ್ಧೆ ಅಂದುಕೊಂಡ್ರಾ. ಖಂಡಿತಾ ಇಲ್ಲ. ಇವೆಲ್ಲವೂ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದ ಜಾತ್ರೆಯಲ್ಲಿ ಕಂಡುಬಂದ ದೃಶ್ಯಗಳು.
ಹಾಲಕ್ಕಿ ಬುಡಕಟ್ಟು ಸಮಾಜದಿಂದ ದಿಂಡಿ ಜಾತ್ರೆ: ಇಲ್ಲಿ ಗ್ರಾಮದ ನಾರಾಯಣ ದೇವರ ಜಾತ್ರಾ ಮಹೋತ್ಸವವನ್ನು ವರ್ಷಂಪ್ರತಿ ನಡೆಸಲಾಗುತ್ತದೆ. ಹಾಲಕ್ಕಿ ಬುಡಕಟ್ಟು ಸಮಾಜದವರು ಕಾರ್ತಿಕ ಮಾಸದಲ್ಲಿ ಆಚರಿಸುವ ನಾರಾಯಣ ದೇವರ ಜಾತ್ರೆಯನ್ನು ದಿಂಡಿ ಜಾತ್ರೆಯೆಂದು ಕರೆಯುತ್ತಾರೆ. ಈ ಜಾತ್ರೆಯಲ್ಲಿ ಅಣುಕು ಪ್ರದರ್ಶನ ಮಾಡುವ ಹಗರಣ ಉತ್ಸವ ಆಯೋಜಿಸುವುದೇ ಜಾತ್ರೆಯ ವಿಶೇಷ.
ಬ್ರಿಟೀಷರ ಕಾಲದಿಂದ ನಡೆದುಕೊಂಡು ಬಂದ ಹಗರಣ ಉತ್ಸವ: ಬ್ರಿಟೀಷರ ಕಾಲದಿಂದ ಹಾಲಕ್ಕಿ ಸಮುದಾಯದವರು ಈ ಹಗರಣ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಿಂದೆ ಬ್ರಿಟೀಷರಿಗೆ ಸಂಗತಿಗಳನ್ನು ತಿಳಿಸಲು ಇಂಗ್ಲೀಷ್ ಭಾಷೆ ಬಾರದ ಹಿನ್ನಲೆ ಹಾಲಕ್ಕಿ ಸಮುದಾಯವರು ಹಗರಣ ಉತ್ಸವದ ಮೂಲಕ ಅಣುಕು ಪ್ರದರ್ಶನದಂತೆ ವೇಷತೊಟ್ಟು ಬ್ರಿಟೀಷರಿಗೆ ತಿಳಿಸುತ್ತಿದ್ದರಂತೆ. ನಂತರದ ದಿನಗಳಲ್ಲಿ ಇದೊಂದು ಸಂಪ್ರದಾಯದಂತೆ ದಿಂಡಿ ಉತ್ಸವದಲ್ಲಿ ನಡೆದುಕೊಂಡು ಬಂದಿದೆ.