ಕರ್ನಾಟಕ

karnataka

By

Published : Nov 27, 2022, 10:52 PM IST

ETV Bharat / state

ಬ್ರಿಟೀಷರನ್ನೇ ಅಣುಕಿಸುತ್ತಿದ್ದ ಹಾಲಕ್ಕಿಗಳ ಹಗರಣ: ಆಚರಣೆ ಬಿಡದ ಸಮುದಾಯದವರಿಂದ ಅಣಕು ಪ್ರದರ್ಶನ

ಹಿಂದೆ ಬ್ರಿಟೀಷರಿಗೆ ಸಂಗತಿಗಳನ್ನು ತಿಳಿಸಲು ಇಂಗ್ಲೀಷ್ ಭಾಷೆ ಬಾರದ ಹಿನ್ನಲೆ ಹಾಲಕ್ಕಿ ಸಮುದಾಯವರು ಹಗರಣ ಉತ್ಸವದ ಮೂಲಕ ಅಣುಕು ಪ್ರದರ್ಶನದಂತೆ ವೇಷತೊಟ್ಟು ಬ್ರಿಟೀಷರಿಗೆ ತಿಳಿಸುತ್ತಿದ್ದರಂತೆ. ನಂತರದ ದಿನಗಳಲ್ಲಿ ಇದೊಂದು ಸಂಪ್ರದಾಯದಂತೆ ದಿಂಡಿ ಉತ್ಸವದಲ್ಲಿ ನಡೆದುಕೊಂಡು ಬಂದಿದೆ.

halakki-tribal-community-celebrating-hagarana-uthsava-in-karwar
ಬ್ರಿಟಿಷರನ್ನೇ ಅಣುಕಿಸುತ್ತಿದ್ದ ಹಾಲಕ್ಕಿಗಳ ಹಗರಣ: ಆಚರಣೆ ಬಿಡದ ಸಮುದಾಯದವರಿಂದ ಅಣಕು ಪ್ರದರ್ಶನ

ಕಾರವಾರ : ಜಾತ್ರೆ ಅಂದ್ಮೇಲೆ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತದೆ. ಅಲ್ಲಿನ ಜನರ ಆಚಾರ, ವಿಚಾರಗಳಿಗೆ ಅನುಗುಣವಾಗಿ ವಿಭಿನ್ನ ಆಚರಣೆಗಳನ್ನು ಮಾಡಲಾಗುತ್ತದೆ. ಕೆಲವೆಡೆ ಕೋಳಿ, ಕುರಿ ಬಲಿ ವಿಶೇಷತೆಯಾಗಿದ್ರೆ ಇನ್ನೂ ಕೆಲವೆಡೆ ನಡೆಯುವ ಆಚರಣೆಗಳೇ ವಿಶೇಷವಾಗಿರುತ್ತದೆ. ಅದರಂತೆ ಕರಾವಳಿ ನಗರಿ ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲಿ ವಿಭಿನ್ನ ಜಾತ್ರೆ ನಡೆಯುತ್ತದೆ.

ಒಂದೆಡೆ ಬೃಹತ್ ಗಾತ್ರದ ಪಂಜುರ್ಲಿ, ತೋಳ, ಕೋಣ ಸೇರಿದಂತೆ ಬಗೆ ಬಗೆಯ ಮಾದರಿಗಳನ್ನು ಹೊತ್ತುಕೊಂಡು ಬರುತ್ತಿರುವ ವಿಭಿನ್ನ ವೇಷಭೂಷಣ ತೊಟ್ಟ ಜನರು. ಇನ್ನೊಂದೆಡೆ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ, ಯಕ್ಷಗಾನ ಪಾತ್ರಧಾರಿ ಸೇರಿದಂತೆ ವಿವಿಧ ವೇಷಧಾರಿಗಳು ವಾಹನದ ಮೇಲೆ ಕುಳಿತಿರುವುದು. ಮತ್ತೊಂದೆಡೆ ಇವೆಲ್ಲವನ್ನು ಕಣ್ತುಂಬಿಕೊಳ್ಳುತ್ತಾ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳುತ್ತಿರುವ ಪ್ರೇಕ್ಷಕರು. ಅರೇ ಇದೇನು ಛದ್ಮವೇಷ ಸ್ಪರ್ಧೆ ಅಂದುಕೊಂಡ್ರಾ. ಖಂಡಿತಾ ಇಲ್ಲ. ಇವೆಲ್ಲವೂ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದ ಜಾತ್ರೆಯಲ್ಲಿ ಕಂಡುಬಂದ ದೃಶ್ಯಗಳು.

ಬ್ರಿಟೀಷರನ್ನೇ ಅಣುಕಿಸುತ್ತಿದ್ದ ಹಾಲಕ್ಕಿಗಳ ಹಗರಣ: ಆಚರಣೆ ಬಿಡದ ಸಮುದಾಯದವರಿಂದ ಅಣಕು ಪ್ರದರ್ಶನ

ಹಾಲಕ್ಕಿ ಬುಡಕಟ್ಟು ಸಮಾಜದಿಂದ ದಿಂಡಿ ಜಾತ್ರೆ: ಇಲ್ಲಿ ಗ್ರಾಮದ ನಾರಾಯಣ ದೇವರ ಜಾತ್ರಾ ಮಹೋತ್ಸವವನ್ನು ವರ್ಷಂಪ್ರತಿ ನಡೆಸಲಾಗುತ್ತದೆ. ಹಾಲಕ್ಕಿ ಬುಡಕಟ್ಟು ಸಮಾಜದವರು ಕಾರ್ತಿಕ ಮಾಸದಲ್ಲಿ ಆಚರಿಸುವ ನಾರಾಯಣ ದೇವರ ಜಾತ್ರೆಯನ್ನು ದಿಂಡಿ ಜಾತ್ರೆಯೆಂದು ಕರೆಯುತ್ತಾರೆ. ಈ ಜಾತ್ರೆಯಲ್ಲಿ ಅಣುಕು ಪ್ರದರ್ಶನ ಮಾಡುವ ಹಗರಣ ಉತ್ಸವ ಆಯೋಜಿಸುವುದೇ ಜಾತ್ರೆಯ ವಿಶೇಷ.

ಬ್ರಿಟೀಷರ ಕಾಲದಿಂದ ನಡೆದುಕೊಂಡು ಬಂದ ಹಗರಣ ಉತ್ಸವ: ಬ್ರಿಟೀಷರ ಕಾಲದಿಂದ ಹಾಲಕ್ಕಿ ಸಮುದಾಯದವರು ಈ ಹಗರಣ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಿಂದೆ ಬ್ರಿಟೀಷರಿಗೆ ಸಂಗತಿಗಳನ್ನು ತಿಳಿಸಲು ಇಂಗ್ಲೀಷ್ ಭಾಷೆ ಬಾರದ ಹಿನ್ನಲೆ ಹಾಲಕ್ಕಿ ಸಮುದಾಯವರು ಹಗರಣ ಉತ್ಸವದ ಮೂಲಕ ಅಣುಕು ಪ್ರದರ್ಶನದಂತೆ ವೇಷತೊಟ್ಟು ಬ್ರಿಟೀಷರಿಗೆ ತಿಳಿಸುತ್ತಿದ್ದರಂತೆ. ನಂತರದ ದಿನಗಳಲ್ಲಿ ಇದೊಂದು ಸಂಪ್ರದಾಯದಂತೆ ದಿಂಡಿ ಉತ್ಸವದಲ್ಲಿ ನಡೆದುಕೊಂಡು ಬಂದಿದೆ.

ಹಗರಣ ಉತ್ಸವದಲ್ಲಿ ಅಣುಕು ಪ್ರದರ್ಶನ: ಇನ್ನು ಈ ಬಾರಿಯ ಹಗರಣ ಉತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ಕಾಂತಾರ ಚಿತ್ರದ ದೈವ ನರ್ತಕ, ಕೊರಗಜ್ಜ ಹಾಗೂ ಬೃಹತ್ ಗಾತ್ರದ ಪಂಜುರ್ಲಿ ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾದವು. ಇದರೊಂದಿಗೆ ಬೃಹತ್ ಗಾತ್ರದ ತೋಳ, ಕೋಸ್ಟ್ ಗಾರ್ಡ್‌ನ ವಿಮಾನ, ವಿವಿಧ ದೇವರ ಮಾದರಿಗಳನ್ನು ಪ್ರದರ್ಶಿಸಲಾಯಿತು. ಜೊತೆಗೆ ಕೋಣ, ಯಕ್ಷಗಾನ, ಅಯ್ಯಪ್ಪಸ್ವಾಮಿ ಮಹಿಮೆ ಸೇರಿದಂತೆ ಹತ್ತು ಹಲವು ಅಣುಕು ಪ್ರದರ್ಶನವನ್ನು ಮಾಡಲಾಯಿತು.

ಈ ಹಗರಣ ಉತ್ಸವದಲ್ಲಿ ಮಾಡುವ ಅಣುಕು ಪ್ರದರ್ಶನಕ್ಕೆ ತಿಂಗಳಿನಿಂದ ತಯಾರಿ ಮಾಡಿಕೊಳ್ಳಬೇಕಿದ್ದು, ಯಾರ ಆರ್ಥಿಕ ಸಹಾಯವೂ ಇರುವುದಿಲ್ಲ. ಆದರೆ ಇಂದಿಗೂ ತಮ್ಮ ಸಮುದಾಯದ ಸಂಪ್ರದಾಯವನ್ನು ಬೆಳೆಸುವ ನಿಟ್ಟಿನಲ್ಲಿ ಹಾಲಕ್ಕಿ ಸಮುದಾಯದವರೇ ಈ ಉತ್ಸವವನ್ನು ನಡೆಸುತ್ತಾ ಬಂದಿದ್ದಾರೆ. ಇನ್ನು ಈ ಉತ್ಸವವನ್ನು ನೋಡಲು ಅಕ್ಕಪಕ್ಕದ ಗ್ರಾಮಗಳ ನೂರಾರು ಮಂದಿ ಆಗಮಿಸುತ್ತಾರೆ. ಬಂದಂತಹ ಪ್ರೇಕ್ಷಕರು ಪ್ರತಿಬಾರಿ ಪ್ರದರ್ಶಿಸುವ ವಿಭಿನ್ನ ವೇಷಗಳನ್ನು ನೋಡಿ ಫೋಟೋ, ವಿಡಿಯೋ ತೆಗೆದುಕೊಂಡು ಖುಷಿಪಡುತ್ತಾರೆ.

ಒಟ್ಟಿನಲ್ಲಿ ವಿವಿಧ ಬಗ್ಗೆ ಅಣುಕು ಪ್ರದರ್ಶನವನ್ನು ಪ್ರದರ್ಶಿಸುವ ಮೂಲಕ ಆಮದಳ್ಳಿ ಗ್ರಾಮದಲ್ಲಿ ನಡೆಯುವ ದಿಂಡಿ ಜಾತ್ರೆ ವಿಶೇಷ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಂದಿಗೂ ತಮ್ಮ ಸಂಪ್ರದಾಯವನ್ನು ಉಳಿಸಲು ಹಾಲಕ್ಕಿ ಸಮುದಾಯವರು ಮಾಡುತ್ತಿರುವ ಈ ಹಗರಣ ಉತ್ಸವ ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ :ಮಕ್ಕಳ ಶಿಶ್ತು ಬದ್ಧ ಜೀವನಶೈಲಿ ರೂಪಿಸಲು ವಿದ್ಯಾರ್ಥಿ ಪೊಲೀಸ್ ಕೆಡೆಟ್​​

ABOUT THE AUTHOR

...view details