ಕರ್ನಾಟಕ

karnataka

ETV Bharat / state

ಮತ್ಸ್ಯೋದ್ಯಮದ ಆಧುನೀಕರಣ: ಲಾಂಗ್ ಲೈನರ್ ಫಿಶಿಂಗ್‌ಗೆ ಸರ್ಕಾರದ ಪ್ರೋತ್ಸಾಹ

ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಮತ್ಸ್ಯೋದ್ಯಮವನ್ನು ಆಧುನೀಕರಣಗೊಳಿಸಲು ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅದರಂತೆ ಇದೀಗ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ಸ್ಯಸಂಪದ ಯೋಜನೆಯಡಿ ಲಾಂಗ್ ಲೈನರ್ ಫಿಶಿಂಗ್​ಗೆ ಮೀನುಗಾರರನ್ನು ಪ್ರೋತ್ಸಾಹಿಸುತ್ತಿದೆ. ಮೀನುಗಾರಿಕೆ ದಿನವಾದ ಇಂದು ಕಾರವಾರದಲ್ಲಿ ಆಳಸಮುದ್ರದ ಮೀನುಗಾರಿಕೆ ಕುರಿತು ಮೀನುಗಾರರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

By

Published : Nov 22, 2022, 12:42 PM IST

Fisheries Modernization
ಲಾಂಗ್ ಲೈನರ್ ಫಿಶಿಂಗ್ ಪ್ರೋತ್ಸಾಹಕ್ಕೆ ಮುಂದಾದ ಸರ್ಕಾರ

ಕಾರವಾರ:ಮೀನುಗಾರಿಕೆ ಇದೀಗ ದೇಶದಲ್ಲಿ ಪ್ರಮುಖ ಉದ್ಯಮಗಳಲ್ಲಿ ಒಂದು. ಈ ಹಿಂದೆ ವಿವಿಧ ಬಗೆಯಲ್ಲಿ ಮೀನುಗಾರಿಕೆ ಕೈಗೊಳ್ಳಲಾಗುತ್ತಿದ್ದಾರೂ ಉತ್ಪನ್ನ ಮಾತ್ರ ಅಷ್ಟಕಷ್ಟೇ ಆಗಿರುತ್ತಿತ್ತು. ಆದರೆ ಇದೀಗ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಮೀನುಗಾರಿಕೆ ನಡೆಸುವ ಕಾರಣ ಮೀನಿನ ಉತ್ಪನ್ನ ಹೆಚ್ಚಳ ಸಾಧ್ಯವಿದ್ದು ಇದು ದೇಶದ ಆದಾಯಕ್ಕೂ ಸಹಕಾರಿಯಾಗಿದೆ.

ಈ ಕಾರಣದಿಂದಾಗಿ ಮೀನುಗಾರಿಕೆ ಬಗೆಗೆ ಮೀನುಗಾರರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯದ ಸಹಕಾರದಲ್ಲಿ ಭಾರತ ಮೀನುಗಾರಿಕಾ ಸರ್ವೇಕ್ಷಣಾ ಸಂಸ್ಥೆ ಕಾರವಾರದ ವಾಣಿಜ್ಯ ಬಂದರಿನಲ್ಲಿ ಬೋಟ್ ಮೇಲೆ ಮೀನು ಹಾಗೂ ಅದರ ಉಪಕರಣಗಳ ಪ್ರದರ್ಶನವೊಂದನ್ನು ಏರ್ಪಡಿಸಿತ್ತು.

ಲಾಂಗ್ ಲೈನರ್ ಫಿಶಿಂಗ್ ಪ್ರೋತ್ಸಾಹಕ್ಕೆ ಮುಂದಾದ ಸರ್ಕಾರ

ಮೀನುಗಾರಿಗೆ ಬಗ್ಗೆ ಮಾಹಿತಿ: ಈ ಪ್ರದರ್ಶನಕ್ಕೆ ನೂರಾರು ವಿದ್ಯಾರ್ಥಿಗಳು ಹಾಗೂ ಮೀನುಗಾರರು ಆಗಮಿಸಿದ್ದರು. ಮೀನುಗಾರಿಕೆ ಹಾಗೂ ಲಾಂಗ್ ಲೈನರ್ ಮೀನುಗಾರಿಕೆ, ಮೀನುಗಾರಿಕೆ ವೇಳೆ ಬಳಸುವ ಬಲೆ, ದಾರಗಳ ಬಗ್ಗೆ ಮಾಹಿತಿ ಒದಗಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ಹೇಗೆ ನಡೆಸುತ್ತಾರೆ, ತುರ್ತು ಸಂದರ್ಭದಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಲಾಗುತ್ತದೆ. ಜಲ ಮಾಲಿನ್ಯ ತಡೆ ಹೇಗೆ ಮಾಡಲಾಗುತ್ತದೆ ಎಂಬ ಮಾಹಿತಿ ಒದಗಿಸಲಾಯಿತು.

ಮೀನುಗಾರರನ್ನು ಲಾಂಗ್ ಲೈನರ್ ಮೀನುಗಾರಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರದರ್ಶನಕ್ಕೆ ಆಗಮಿಸಿದ ಮೀನುಗಾರರಿಗೆ ಅಗತ್ಯ ಮಾಹಿತಿ ಒದಗಿಸಲಾಯಿತು. ಮತ್ಸ್ಯ ಸಂಪದ ಯೋಜನೆ ಮೂಲಕ ಬೋಟ್ ಖರೀದಿಗೆ ಸಬ್ಸಿಡಿ ಸಿಗಲಿದ್ದು, ನೂರಾರು ಮೈಲು ದೂರ ತೆರಳಿ ಮೀನುಗಾರಿಕೆ ನಡೆಸುವುದರಿಂದ ಬೃಹತ್ ಗಾತ್ರದ ಮೀನುಗಳನ್ನು ಹಿಡಿಯಲು ಸಾಧ್ಯವಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ ಮೀನುಗಾರಿಕೆ ಮಾಡಲು ಅಗತ್ಯವಿರುವ ಸಲಕರಣೆಗಳು ಕರ್ಚು ವೆಚ್ಚ ಹಾಗೂ ಲಾಭದ ಬಗ್ಗೆ ಮಾಹಿತಿ ಒದಗಿಸಲಾಯಿತು.

ಪ್ರದರ್ಶನ ವೀಕ್ಷಿಸಿದ ಮೀನುಗಾರರನ್ನು ಈ ಬಗ್ಗೆ ಕೇಳಿದ್ರೆ, ಉಡುಪಿ ಮಂಗಳೂರು ಭಾಗದಲ್ಲಿ ಈ ರೀತಿ ಮೀನುಗಾರಿಕೆ ನಡೆಸಲಾಗುತ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಬಹುತೇಕ ಮೀನುಗಾರರು ಸಣ್ಣ ಪ್ರಮಾಣದಲ್ಲಿ ಮಾತ್ರ ಮೀನುಗಾರಿಕೆ ಮಾಡುವ ಕಾರಣ ಈ ಬಗ್ಗೆ ಅಷ್ಟು ಅರಿವಿಲ್ಲ.‌ ಅಲ್ಲದೆ ಬೋಟ್​ನಲ್ಲಿ ಕ್ಯಾಪ್ಟನ್ ಇರಬೇಕು. ನೂರಾರು ಮೈಲು ದೂರ ತೆರಳುವ ಕಾರಣ ತಿಂಗಳುಗಳ ಕಾಲ ಹೊರಗುಳಿಯುವಷ್ಟು ಆಹಾರ ಕಾರ್ಮಿಕರು ಇರಬೇಕಾಗುತ್ತದೆ ಎಂದರು.

ಇದನ್ನೂ ಓದಿ:ಕೊಡಗಿನಲ್ಲಿ ಹೆಚ್ಚುತ್ತಿರುವ ‌ಮಾನವ-ಕಾಡಾನೆ ಸಂಘರ್ಷ: ಅಪಾರ ಬೆಳೆ ಹಾನಿ

ಅಲ್ಲದೇ ಇಷ್ಟೊಂದು ಬಂಡವಾಳ ಹಾಕಿದ ಬಳಿಕ ಆಳ ಸಮುದ್ರದಲ್ಲಿ ಮೀನು ಸಿಗುತ್ತದೆ ಎಂಬ ಅನುಭವ ಕೂಡ ಇಲ್ಲದ ಕಾರಣ, ಇಲ್ಲಿನ ಮೀನುಗಾರರಿಗೆ ಈ ಮೀನುಗಾರಿಕೆ ಕಷ್ಟವಾಗಲಿದೆ. ಆದರೆ ಈ ಬಗ್ಗೆ ಇಲಾಖೆ ಅಗತ್ಯ ಸಹಕಾರದ ಜೊತೆಗೆ ತರಬೇತಿ ನೀಡಿದಲ್ಲಿ ಮಾತ್ರ ಸಾಧ್ಯವಾಗಬಹುದು ಎನ್ನುತ್ತಾರೆ ಮೀನುಗಾರರು.

ಸರ್ಕಾರ ಮೀನುಗಾರಿಕೆಯಲ್ಲಿ ಅತ್ಯಾಧುನಿಕ ಉಪಕರಣ ಬಳಸಿ ಮೀನಿನ ಉತ್ಪನ್ನ ಹೆಚ್ಚಳಕ್ಕೆ ಮುಂದಾಗಿದೆಯಾದರೂ, ದೊಡ್ಡ ಮಟ್ಟದ ಬಂಡವಾಳ ಹಾಕುವುದಕ್ಕೆ ಮೀನುಗಾರರು ಹಿಂಜರಿಯುವಂತಾಗಿದೆ. ಸರ್ಕಾರ ಈ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಿ ಅಗತ್ಯ ಸಹಕಾರ ನೀಡುವ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.

ABOUT THE AUTHOR

...view details