ಕರ್ನಾಟಕ

karnataka

By

Published : Jan 12, 2022, 10:29 PM IST

ETV Bharat / state

ಗೋವಾದಿಂದ ಕರ್ನಾಟಕ ಪ್ರವೇಶಿಸಲು ಆರ್‌ಟಿ-ಪಿಸಿಆರ್ ಕಡ್ಡಾಯ, ಆಕ್ರೋಶ

ಗೋವಾದಿಂದ ಯಾರೇ ಕರ್ನಾಟಕಕ್ಕೆ ಪ್ರವೇಶಿಸಬೇಕಿದ್ದರೂ ಕಡ್ಡಾಯವಾಗಿ ಡಬಲ್ ಡೋಸ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಜೊತೆಗೆ ಆರ್‌ಟಿ- ಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಇರಬೇಕೆಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಗೋವಾದವರಿಂದ ಇದೀಗ ವಿರೋಧ ವ್ಯಕ್ತವಾಗಿದ್ದು, ಕಾರವಾರ- ಗೋವಾ ಗಡಿ ಭಾಗವಾದ ಪೊಳೆಂ ಸಮೀಪದಲ್ಲಿರುವ ಕರ್ನಾಟಕದ ಕೋವಿಡ್ ಔಟ್‌ಪೋಸ್ಟ್ ಬಳಿ ಗೋವನ್ನರು ಪ್ರತಿಭಟನೆ ನಡೆಸಿದ್ದಾರೆ.

ಆರ್‌ಟಿಪಿಸಿಆರ್ ಕಡ್ಡಾಯಗೊಳಿಸಿದ್ದಕ್ಕೆ ಗೋವನ್ನರ ಆಕ್ರೋಶ
ಆರ್‌ಟಿಪಿಸಿಆರ್ ಕಡ್ಡಾಯಗೊಳಿಸಿದ್ದಕ್ಕೆ ಗೋವನ್ನರ ಆಕ್ರೋಶ

ಕಾರವಾರ:ಕರ್ನಾಟಕ ಪ್ರವೇಶಕ್ಕೆ ಗೋವಾದಿಂದ ಬರುವವರಿಗೂ ಆರ್‌ಟಿ-ಪಿಸಿಆರ್ ಕಡ್ಡಾಯಗೊಳಿಸಲಾಗಿದ್ದು, ಗೋವನ್ನರ ಆಕ್ರೋಶಕ್ಕೆ ಕಾರಣವಾಗಿದೆ.

ಗೋವಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ, ಮಹಾರಾಷ್ಟ್ರ, ಕೇರಳದವರಿಗೆ ವಿಧಿಸುತ್ತಿದ್ದ ನಿಯಮಗಳನ್ನೇ ಗೋವಾದಿಂದ ಬರುವವರಿಗೂ ವಿಧಿಸಿದೆ.


ಗೋವಾದಿಂದ ಯಾರೇ ಕರ್ನಾಟಕ ಪ್ರವೇಶಿಸಬೇಕಿದ್ದರೂ ಕಡ್ಡಾಯವಾಗಿ ಡಬಲ್ ಡೋಸ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಜೊತೆಗೆ ಆರ್‌ಟಿ- ಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಇದ್ದರಷ್ಟೆ ಪೊಲೀಸರು ಕರ್ನಾಟಕದೊಳಗೆ ಬಿಡುತ್ತಿದ್ದಾರೆ.

ಗೋವಾ ಪ್ರವೇಶಕ್ಕೆ ಯಾವುದೇ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯವಿಲ್ಲ. ಆದರೆ ಕರ್ನಾಟಕ ಕಡ್ಡಾಯ ಮಾಡಿರುವುದರಿಂದ ಪ್ರತಿನಿತ್ಯ ಕಾರವಾರ- ಗೋವಾಕ್ಕೆ ಹೋಗಿಬರುವವರಿಗೆ ತೊಂದರೆ ಉಂಟಾಗಿದೆ ಎಂದು ಗೋವನ್ನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರವಾರ- ಗೋವಾ ಗಡಿ ಭಾಗವಾದ ಪೊಳೆಂ ಸಮೀಪದಲ್ಲಿರುವ ಕರ್ನಾಟಕದ ಕೋವಿಡ್ ಔಟ್‌ಪೋಸ್ಟ್ ಬಳಿ ಗೋವನ್ನರು ಪ್ರತಿಭಟನೆ ನಡೆಸಿದ್ದು, ಕರ್ನಾಟಕದಿಂದ ಗೋವಾಕ್ಕೆ ಹೋಗುವ ವಾಹನಗಳನ್ನೂ ತಡೆದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ನಡೆಗೆ ದಿಢೀರ್​ ಬ್ರೇಕ್​.. ಮೇಕೆದಾಟು ಪಾದಯಾತ್ರೆ ನಿಷೇಧಿಸಿ ಸರ್ಕಾರದಿಂದ ಮಹತ್ವದ ಆದೇಶ

ಇದರಿಂದಾಗಿ ಗಡಿಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕರ್ನಾಟಕ ಪೊಲೀಸರು ಹಾಗೂ ಗೋವಾ ಪೊಲೀಸರು ಈ ವೇಳೆ ಮಧ್ಯಪ್ರವೇಶಿಸಿ ಗೋವನ್ನರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸರೊಂದಿಗೆ ಗೋವನ್ನರು ಆಕ್ರೋಶ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ಕೂಡ ನಡೆದಿದೆ. ಕೊನೆಗೆ ಈ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು, ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ ಎಂದು ಕರ್ನಾಟಕ ಪೊಲೀಸರು ಹೇಳಿದ ಕೆಲ ಸಮಯದ ಬಳಿಕ ಗೋವನ್ನರು ವಾಪಸಾಗಿದ್ದಾರೆ.

ಗೋವಾದಿಂದ ಬರುವವರಿಗೆ ಕಡ್ಡಾಯವಾಗಿ ಡಬಲ್ ಡೋಸ್ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಜೊತೆಗೆ ಆರ್‌ಟಿ- ಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಇರುವುದನ್ನು ಖಚಿತಪಡಿಸಿಕೊಂಡು ಒಳ ಬಿಡುವುದನ್ನು ಮುಂದುವರೆಸಿದ್ದಾರೆ. ಕೋವಿಡ್ ಎರಡನೇ ಅಲೆಯಲ್ಲಿ ಗೋವಾ ಗಡಿಯಲ್ಲಿ ಕರ್ನಾಟಕದವರಿಗೆ ಆರ್‌ಟಿ- ಪಿಸಿಆರ್ ಕಡ್ಡಾಯಗೊಳಿಸಲಾಗಿತ್ತು. ಅಂದು ಕಾರವಾರದಿಂದ ಮನವಿ ಮಾಡಿದ್ದರೂ ನಿಯಮ ಸಡಿಲಿಕೆ ಮಾಡಿರಲಿಲ್ಲ.

ABOUT THE AUTHOR

...view details