ಕರ್ನಾಟಕ

karnataka

ETV Bharat / state

ಕಾರವಾರ: ಬಾರದ ಸೀಮೆ ಎಣ್ಣೆಯಿಂದ ಬರಿದಾದ ಮೀನುಗಾರರ ಬದುಕು

ಕರಾವಳಿಯ ಮೀನುಗಾರರಿಗೆ ಸೀಮೆ ಎಣ್ಣೆ ಸಿಗದೇ ಪರದಾಟ, ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಸಂಕಷ್ಟ - ಉತ್ತರ ಕನ್ನಡಕ್ಕೆ ಮಲತಾಯಿ ಧೋರಣೆ ಆರೋಪ

By

Published : Jan 3, 2023, 5:46 PM IST

Traditional fishing
ಸಾಂಪ್ರದಾಯಿಕ ಮೀನುಗಾರಿಕೆ

ಉತ್ತರಕನ್ನಡಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಆರೋಪಿಸಿದರು

ಕಾರವಾರ(ಉತ್ತರ ಕನ್ನಡ) :ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಒದಗಿಸುವ ವಿಚಾರವಾಗಿ ನೆರೆಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮೀನುಗಾರರಿಗೆ ಮಾತ್ರ ಎಲ್ಲ ಸೌಲಭ್ಯಗಳು ಸಿಗುತ್ತಿದ್ದು ಉತ್ತರ ಕನ್ನಡಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎನ್ನುವ ಆರೋಪಗಳು ಇದೀಗ ಕೇಳಿ ಬಂದಿವೆ.

ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಸಣ್ಣ ಯಾಂತ್ರೀಕೃತ ದೋಣಿ ಬಳಸಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಸರ್ಕಾರ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆಯನ್ನು ಒದಗಿಸುತ್ತಿತ್ತು. ಆದರೆ, ಕಳೆದ 3-4 ತಿಂಗಳಿನಿಂದ ಉತ್ತರ ಕನ್ನಡ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆಯಾಗಿಲ್ಲ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೀನುಗಾರರಿಗೆ ಸೀಮೆ ಎಣ್ಣೆಯನ್ನು ವಿತರಣೆ ಮಾಡಲಾಗಿದೆ. ಆದರೆ ನಮ್ಮ ಜಿಲ್ಲೆಗೆ ಕೇವಲ ಶೇ. 35 ರಷ್ಟು ಮಾತ್ರ ಪೂರೈಕೆಯಾಗಿದೆ. ಈ ಬಗ್ಗೆ ಮೀನುಗಾರಿಕಾ ಸಚಿವರಿಗೂ ತಿಳಿಸಿದ್ದು, 15 ದಿನದಲ್ಲಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿರುವ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡದೇ ಇರುವುದರಿಂದ ಉತ್ತರ ಕನ್ನಡಕ್ಕೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳ ಮಲತಾಯಿ ಧೋರಣೆಯಿಂದಲೇ ಈ ರೀತಿ ಸಮಸ್ಯೆ ಎದುರಾಗಿದೆ. ಮೊದಲು ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಜಿಲ್ಲೆಗೆ ಹೊಸ ಅಧಿಕಾರಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿದರು.

ಸರ್ಕಾರದಿಂದ ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಪೂರ್ಣಪ್ರಮಾಣದ ಸೀಮೆಎಣ್ಣೆ ಬಿಡುಗಡೆಯಾಗಿದ್ದು, ಉತ್ತರಕನ್ನಡಕ್ಕೆ ಶೇಕಡಾ 35ರಷ್ಟು ಮಾತ್ರ ನೀಡಲಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಬಾಕಿ ಸೀಮೆ ಎಣ್ಣೆ ಬಿಡುಗಡೆಗೆ ಮೀನಗಾರಿಕಾ ಸಚಿವರಿಗೆ ಮನವಿ ಮಾಡೋದಾಗಿ ಎಂಎಲ್‌ಸಿ ಗಣಪತಿ ಉಳ್ವೇಕರ್ ಭರವಸೆ ನೀಡಿದ್ದಾರೆ.

ಈ ಹಿಂದೆ :ಜಿಲ್ಲೆಯ ಕರಾವಳಿಯಲ್ಲಿ ಎರಡು ಸಾವಿರಕ್ಕೂ ಅಧಿಕ ನಾಡದೋಣಿಗಳಿದ್ದು, ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಈ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಪ್ರತಿವರ್ಷ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಮೀನುಗಳು ದಡದತ್ತ ಬರುವುದರಿಂದ ನಾಡದೋಣಿ ಮೀನುಗಾರಿಕೆಗೆ ಉತ್ತಮ ಮೀನುಗಳು ಬಲೆಗೆ ಸಿಗುತ್ತವೆ. ಆ ವರ್ಷದ ಆದಾಯವನ್ನು ನಾಲ್ಕೈದು ತಿಂಗಳಲ್ಲಿ ಗಳಿಸಿಕೊಳ್ಳುತ್ತಿದ್ದರು.

ಈ ಹಿಂದೆ ನಿಗದಿಯ ಅರ್ಧದಷ್ಟಾದರೂ ಸೀಮೆಎಣ್ಣೆ ವಿತರಣೆಯಾಗುತ್ತಿತ್ತು. ಆದರೆ, ಈ ಬಾರಿ ಅದನ್ನೂ ಸಹ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೇ ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ ಎನ್ನುವಂತೆ ಸಾಂಪ್ರದಾಯಿಕ ಮೀನುಗಾರರಿಗೆ ಮೀನು ಲಭ್ಯವಿದ್ದರೂ ಮೀನುಗಾರಿಕೆ ನಡೆಸಲಾಗದ ಪರಿಸ್ಥಿತಿ ಎದುರಾಗಿದ್ದು ಸಂಬಂಧಪಟ್ಟವರು ಇನ್ನಾದ್ರೂ ಇತ್ತ ಗಮನಹರಿಸಿ ಮೀನುಗಾರಿಕೆಗೆ ಅಗತ್ಯವಿರುವ ಸೀಮೆಎಣ್ಣೆ ಪೂರೈಕೆ ಮಾಡಬೇಕಿದೆ.

ಇದನ್ನೂ ಓದಿ :ಮತ್ಸ್ಯೋದ್ಯಮದ ಆಧುನೀಕರಣ: ಲಾಂಗ್ ಲೈನರ್ ಫಿಶಿಂಗ್‌ಗೆ ಸರ್ಕಾರದ ಪ್ರೋತ್ಸಾಹ

ABOUT THE AUTHOR

...view details