ಕಾರವಾರ: ಹೊನ್ನಾವರ ತಾಲೂಕಿನ ಇಡಗುಂಜಿಯ ತಮ್ಮ ನಿವಾಸದಲ್ಲಿಯೇ ಶುಕ್ರವಾರ ರಾತ್ರಿ ಕೃಷ್ಣಯಾಜಿ (78) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇಂದು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಇದಾದ ಬಳಿಕ ಅಂತಿಮ ವಿಧಿ ವಿಧಾನ ನೆರವೇರಿಸಲಾಗಿದೆ.
ಬಣ್ಣ ಹಚ್ಚಿ ವೇಷ ಕಟ್ಟಿ ಕುಣಿದು ಕಲಾವಿದರಾಗಿ ಯಕ್ಷರಂಗದಲ್ಲಿ ಪಯಣ ಆರಂಭಿಸಿದ್ದ ಕೃಷ್ಣಯಾಜಿ ಮದ್ದಲೆ ವಾದಕರಾಗಿ, ಚೆಂಡೆವಾದನದಲ್ಲಿ ಐದು ದಶಕಗಳ ಕಾಲ ಕಲಾವಿದರನ್ನು ರಂಗದಲ್ಲಿ ಕುಣಿಸಿದ್ದರು. ಪತ್ನಿ ರತ್ನಾವತಿ ಯಾಜಿ, ಮಕ್ಕಳಾದ ಮೀರಾ, ತನುಜಾ ಹಾಗೂ ವಾಣಿ ಅವರನ್ನು ಅಗಲಿರುವ ದಿವಂಗತರು ಯಕ್ಷರಂಗದಲ್ಲಿ ಬಹುದೊಡ್ಡ ಹೆಸರು ಗಳಿಸಿದ್ದರು. ಖ್ಯಾತ ಮದ್ದಲೆ ವಾದಕ ಕಿನ್ನೀರು ನಾರಾಯಣ ಹೆಗಡೆಯವರಲ್ಲಿ ಮದ್ದಲೆ ಅಭ್ಯಾಸ ಮಾಡಿ ಹಿರಿಯ ಭಾಗವತ ಗುಂಡ್ಮಿ ರಾಮಚಂದ್ರ ನಾವಡರಿಂದ ಚಂಡೆ ಹಾಗೂ ಮದ್ದಲೆ ವಾದನದಲ್ಲಿ ಸೂಕ್ತ ಮಾರ್ಗದರ್ಶನ ಪಡೆದುಕೊಂಡಿದ್ದರು.
ಇಡಗುಂಜಿ, ಗುಂಡಿಬೈಲ್, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ, ಗುಂಡಬಾಳಾ ಮೇಳಗಳಲ್ಲಿ ಐದು ದಶಕಗಳ ಕಾಲ ಚಂಡೆ ನುಡಿಸಿ ಖ್ಯಾತಿಯ ಉತ್ತುಂಗ ತಲುಪಿದ್ದರು. ರಾಜ್ಯದ ಗಡಿ ದಾಟಿ ದೇಶದ ಮೂಲೆ ಮೂಲೆಯಲ್ಲಿಯೂ ಯಕ್ಷಗಾನದ ಕಂಪು ಪಸರಿಸುವಲ್ಲಿ ಶ್ರಮಿಸಿದ್ದ ಇವರು ಅನೇಕ ಬಾರಿ ಸಾಗರದಾಚೆಗೂ ಪ್ರವಾಸ ಕೈಗೊಂಡು ಯಕ್ಷಗಾನದ ಸವಿಯನ್ನು ಯಕ್ಷಪ್ರೇಮಿಗಳಿಗೆ ಉಣಬಡಿಸಿದ್ದರು.