ಕರ್ನಾಟಕ

karnataka

By

Published : Aug 18, 2022, 5:01 PM IST

Updated : Aug 18, 2022, 10:52 PM IST

ETV Bharat / state

ಕಾರವಾರದಲ್ಲಿ ಬಿಸಿಲು, ಮಳೆಗೆ ನೆಲಕಚ್ಚಿದ ತರಕಾರಿ: ಸಾವಯವ ಕೃಷಿಕರು ಕಂಗಾಲು

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಗ್ರಾಮದ ರೈತರಿಗೆ ಈ ಬಾರಿ ಸುರಿದ ಜಡಿಮಳೆ ಸಾಕಷ್ಟು ಸಂಕಷ್ಟ ಉಂಟುಮಾಡಿದೆ.

ಸಾವಯವ ಕೃಷಿಕ
ಸಾವಯವ ಕೃಷಿಕ

ಕಾರವಾರ: ಮಾರುಕಟ್ಟೆಗಳಿಗೆ ಅದೆಷ್ಟೇ ತರಕಾರಿ ಬಂದರೂ ಕೂಡ ಜನ ಸಾವಯವ ಕೃಷಿಯ ತರಕಾರಿಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಅದರಂತೆ ಇಲ್ಲೊಂದು ಗ್ರಾಮದ ರೈತರೊಬ್ಬರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಹೆಚ್ಚು ತರಕಾರಿ ಬೆಳೆದು ಸ್ಥಳೀಯವಾಗಿ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಮಾರಾಟ ಮಾಡಿ ಒಂದಿಷ್ಟು ಕಾಸು ಸಂಪಾದಿಸುತ್ತಿದ್ದರು. ಆದರೆ, ಈ ಬಾರಿ ಸುರಿದ ಧಾರಾಕಾರ ಮಳೆ ಹಾಗೂ ಸುಡು ಬಿಸಿಲಿನಿಂದಾಗಿ ಸಮರ್ಪಕವಾಗಿ ಬೆಳೆ ಸಿಗದೆ ರೈತರು ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದಾರೆ.

ಸಾವಯವ ಕೃಷಿಕ ಸಂತೋಷ್​ ಗುನಗಿ ಅವರು ಮಾತನಾಡಿರುವುದು

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಗ್ರಾಮದ ರೈತರಿಗೆ ಶ್ರಾವಣ ಬಂತಂದ್ರೆ ಸುಗ್ಗಿಯ ಸಂಭ್ರಮ. ಗ್ರಾಮದ ನೂರಾರು ರೈತರು ತಮ್ಮ ತುಂಡು ಭೂಮಿಯಲ್ಲಿಯೇ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆಯುತ್ತಾರೆ. ಕೇವಲ ಸಗಣಿ ಗೊಬ್ಬರ ಮಾತ್ರ ಬಳಕೆ ಮಾಡುವುದರಿಂದ ಇಲ್ಲಿ ಬೆಳೆದ ತರಕಾರಿಗೆ ಸ್ಥಳೀಯವಾಗಿ ಮಾತ್ರವಲ್ಲದೆ ಪಕ್ಕದ ಗೋವಾದಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ಅಲ್ಲದೆ, ತರಕಾರಿ ತಿನ್ನಲು ಕೂಡ ತುಂಬಾ ರುಚಿಕಟ್ಟಾಗಿರುವುದರಿಂದ ಜನ ಕೂಡ ಹೆಚ್ಚು ಇಷ್ಟಪಡುತ್ತಾರೆ. ಆದರೆ, ಈ ಸಲದ ಮಳೆ ಈ ಕೃಷಿಕರನ್ನು ಸಂಕಷ್ಟಕ್ಕೆ ತಳ್ಳಿದೆ.

ಸಾವಯವ ಬೆಳೆಗಳೊಂದಿಗೆ ರೈತ ಸಂತೋಷ್​ ಗುನಗಿ

ಬಿಸಿಲು ಮಳೆಗೆ ಇಳುವರಿ ಕುಸಿತ: ''ಕಾಯಿ ಬಿಡುವ ವೇಳೆಗೆ ಜೋರು ಮಳೆಯಾದ ಕಾರಣ ಬೆಳೆ ಕೊಳೆಯುತ್ತಿರುವುದು ಒಂದೆಡೆಯಾದರೆ, ಇದೀಗ ಬಿಸಿಲಿನ ಕಾರಣಕ್ಕೆ ಬಳ್ಳಿಗಳು ಹಳದಿಯಾಗಿ ತನ್ನಿಂದಾಗಿಯೇ ಕೊಳೆತು ಹೋಗುತ್ತಿವೆ. ಈ ಬಿಸಿಲು ಮಳೆಯಿಂದಾಗಿ ಇಳುವರಿ ಕೂಡ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೊತೆಗೆ ಹಕ್ಕಿಗಳ ಕಾಟದಿಂದಾಗಿ ಬೆಳೆದ ಬೆಳೆಗೆ ಕೂಲಿಯೂ ಹುಟ್ಟದ ಸ್ಥಿತಿ ಇದ್ದು, ಈ ಬಾರಿ ತುಂಬಾ ನಷ್ಟ ಅನುಭವಿಸಿದ್ದೇವೆ'' ಎನ್ನುತ್ತಾರೆ ಕೃಷಿಕ ಸಂತೋಷ್​ ಗುನಗಿ.

ಕೃಷಿಕೆಲಸದಲ್ಲಿ ತೊಡಗಿರುವುದು

ಸಂಘದಿಂದ ಸಾಲ ಪಡೆದು ಜೀವನ: ''ಈ ಬಾರಿ ವಿಪರೀತ ಮಳೆಯಿಂದಾಗಿ ಭಾರಿ ಲಾಸ್​ ಆಯ್ತು. ವರ್ಷನೂ ತರಕಾರಿ ಬೆಳೆ ಬೆಳೆಯುತ್ತೇವೆ. ಆದ್ರೆ ಈ ತರ ಲಾಸ್​ ಆದ್ರೆ ನಮ್ಗೆ ಪರಿಹಾರ ಯಾರ್ ಕೊಡ್ತಾರೆ?. ಲೋನ್​ ತೆಗೆದುಕೊಂಡು ಬೆಳೆ ಬೆಳೆಯುತ್ತೇವೆ. ಆದ್ರೆ ಸರ್ಕಾರದೋರು ಏನ್​ ಕೊಡ್ತಾರೆ ನಮ್ಗೆ?. ಮಾರ್ಕೆಟ್​ಗೆ ತರಕಾರಿ ಮಾರಾಟ ಮಾಡೋಕೆ ಹೋದ್ರೆ, ಅಲ್ಲಿ ಮಾರಾಟ ಮಾಡ್ಬೇಡಿ, ಇಲ್ಲಿ ಮಾಡ್ಬೇಡಿ ಅಂತಾರೆ. ನಾವು 40 ರಿಂದ 50 ಸಾವಿರ ರೂ ಮಣ್ಣಿಗೆ ಖರ್ಚು ಮಾಡುತ್ತೇವೆ. ಆದರೆ, ಅದರಿಂದ ನಮ್ಗೇನು ಲಾಭ ಸಿಗುತ್ತೆ? ಕಾರಾವಾರಕ್ಕೆ ಮಾರಾಟಕ್ಕೆ ಹೋದ್ರೆ ಅಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡ್ತಾರಾ? ಬುಟ್ಟಿ ತೆಗೀರಿ ಅಂತಾರೆ. ಇಷ್ಟೆಲ್ಲಾ ಲಾಸ್​ ಆದ್ರೂ ಸರ್ಕಾರದಿಂದ ಮಾತ್ರ ಯಾವುದೇ ಅನುಕೂಲ ಆಗಿಲ್ಲ. ನಾವು ಹೆಂಗೋ ಸಂಘದಿಂದ ಸಾಲ ತೆಗೆದುಕೊಂಡು ಜೀವನ ನಡೆಸುತ್ತಿದ್ದೇವೆ'' ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ರೈತ ಮಹಿಳೆ ರಜನಿ ಗುನಗಿ.

ರಸ್ತೆ ಬದಿಯಲ್ಲಿ ತರಕಾರಿ ವ್ಯಾಪಾರಕ್ಕೆ ಕುಳಿತ ರೈತರು

ಇದನ್ನೂ ಓದಿ:ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ..

Last Updated : Aug 18, 2022, 10:52 PM IST

ABOUT THE AUTHOR

...view details