ಕರ್ನಾಟಕ

karnataka

ETV Bharat / state

ಮಗುವಿನ ಚಿಕಿತ್ಸೆಗೆ ಮಧ್ಯರಾತ್ರಿಯಲ್ಲಿ ಪಾಲಕರ ಪರದಾಟ... ಮಾನವೀಯತೆ ಮೆರೆದ ಮಾಜಿ ಶಾಸಕ - Sathish Sail helped a child news

ಮಿದುಳು ಜ್ವರದಂತ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳಿಗೆ ತನ್ನ ಕೈಲಾಗುವಂತ ಸಹಾಯ ಮಾಡಿ ಮಾಜಿ ಶಾಸಕ ಸತೀಶ್​ ಸೈಲ್​ ಮಾನವೀಯತೆ ಮೆರೆದಿದ್ದಾರೆ.

sathish sail
ಮಾಜಿ ಶಾಸಕ ಸತೀಶ್​ ಸೈಲ್

By

Published : Dec 29, 2019, 8:38 PM IST

ಕಾರವಾರ:ಬಹುವರ್ಷದ ಬೇಡಿಕೆಯಂತೆ ಕಾರವಾರದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಗೊಂಡರೂ ತುರ್ತು ಹಾಗೂ ಸಮರ್ಪಕ ಚಿಕಿತ್ಸೆ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದ್ದು, ಶನಿವಾರ ತಡರಾತ್ರಿ ಕೂಡ ಇಂತಹುದೇ ಒಂದು ಘಟನೆ ನಡೆದಿದೆ.

ಮಾನವೀಯತೆ ಮೆರೆದ ಮಾಜಿ ಶಾಸಕ ಸತೀಶ್​ ಸೈಲ್​

ಅಂಕೋಲದ ಅಗ್ರಗೋಣದ ವನಿತಾ(10) ಎಂಬ ಮಗು ಮಿದುಳು ಜ್ವರದಂಥ ಕಾಯಿಲೆಯಿಂದ ಬಳಲುತ್ತಿದ್ದಳು. ಕಾಯಿಲೆ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಮಾಮೂಲಿ ಜ್ವರವೆಂದು ಅಂದುಕೊಂಡಿದ್ದ ಪಾಲಕರು ಕುಮಟಾ ಆಸ್ಪತ್ರೆಯೊಂದರಲ್ಲಿ‌ ಚಿಕಿತ್ಸೆ ಕೊಡಿಸಿದ್ದರು. ಆದರೆ, ಅಲ್ಲಿನ ವೈದ್ಯರು ತಮ್ಮಿಂದ ಚಿಕಿತ್ಸೆ ಸಾಧ್ಯವಾಗುವುದಿಲ್ಲವೆಂದು ಮಂಗಳೂರಿಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದು, ಬಡ ಪಾಲಕರು ಕೆಲವು ದಿನಗಳವರೆಗೆ ಮಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಶನಿವಾರ ಮಧ್ಯರಾತ್ರಿ 12.30ರ ಸುಮಾರಿಗೆ ಆಂಬುಲೆನ್ಸ್ ಮೂಲಕ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು.

ದುರದೃಷ್ಟವಶಾತ್ ಆಸ್ಪತ್ರೆಯ ವೈದ್ಯರು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹೇಳಿ ಕೂಡಲೇ ಗೋವಾಕ್ಕೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದಾರೆ. ಇದರಿಂದಾಗಿ ದಿಕ್ಕು ತೋಚದಂತಾದ ಮುಗ್ದ, ಬಡ ಪಾಲಕರು ಮಾಜಿ ಶಾಸಕ ಸತೀಶ್ ಸೈಲ್ ಅವರ ಬಳಿ ಸಹಾಯಕ್ಕಾಗಿ ಫೋನಾಯಿಸಿದ್ದಾರೆ. ತಕ್ಷಣವೇ ಸತೀಶ್ ಸೈಲ್ ಜಿಲ್ಲಾಸ್ಪತ್ರೆಗೆ ಆಗಮಿಸಿ ಮಗುವಿನ ಪರಿಸ್ಥಿತಿ ಕಂಡು ಮರುಗಿದರು. ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಿಸುವಂತೆ ವೈದ್ಯರ ಬಳಿ ಮನವಿ ಮಾಡಿಕೊಂಡರು.

ಆದರೆ, ಅಸಹಾಯಕರಾಗಿದ್ದ ವೈದ್ಯರು, ಆಸ್ಪತ್ರೆಯ ಪರಿಸ್ಥಿತಿಯ ಬಗ್ಗೆ ವಿವರಿಸಿ, ಇಂಥ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡಲು ಪಿಡಿಯಾಟ್ರಿಕ್ ಐಸಿಯುವಿನ ಅವಶ್ಯಕತೆ ಇದೆ. ಜತೆಗೆ, ಪಿಡಿಯಾಟ್ರಿಕ್ ವೆಂಟಿಲೇಟರ್ ಅವಶ್ಯವಿದ್ದು, ಎರಡೂ ಸೌಲಭ್ಯ ತಮ್ಮಲ್ಲಿಲ್ಲ ಎಂದು ತಿಳಿಸಿದರು. ಹೀಗಾಗಿ ಗೋವಾದ ಬಾಂಬೋಲಿಯಮ್​ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವುದು ಸೂಕ್ತ ಎಂದು ಸಲಹೆ ನೀಡಿದರು.

ವೈದ್ಯರಿಂದ ಶಿಫಾರಸು ಪತ್ರ ಬರೆಸಿಕೊಂಡ ಸತೀಶ್ ಸೈಲ್, ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದರು. ಆಂಬುಲೆನ್ಸ್ ಗೆ ತಮ್ಮ ಕೈಯಲ್ಲಿದ್ದ ಹಣ ಪಾವತಿಸಿ ಕೂಡಲೇ ಗೋವಾಕ್ಕೆ ಕಳುಹಿಸಿಕೊಟ್ಟರು.

ಈ ಬಗ್ಗೆ ಬಳಿಕ ಮಾತನಾಡಿದ ಸತೀಶ್ ಸೈಲ್, ನಮ್ಮ ಮೆಡಿಕಲ್ ಕಾಲೇಜು ಇದ್ದೂ ಇಲ್ಲದ ಪರಿಸ್ಥಿತಿಯಲ್ಲಿದೆ. ತುರ್ತು ಚಿಕಿತ್ಸೆಗಳು ಇಲ್ಲಿ ಲಭ್ಯವಿರದ ಕಾರಣ ರೋಗಿಗಳು ಪರದಾಡುವಂತಾಗಿದೆ. ಈ ಬಗ್ಗೆ ನಾಗರಿಕರೆಲ್ಲರೂ ಸೇರಿ ಚರ್ಚೆ ನಡೆಸಿ, ಹೋರಾಟ ನಡೆಸಬೇಕಿದೆ. ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕರ್ನಾಟಕದವರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮಂಗಳೂರು ಆಸ್ಪತ್ರೆಗಳು ದುಬಾರಿಯಾಗಿದ್ದು, ಪ್ರಯಾಣವೂ ದೂರವಾಗಿದೆ. ಹೀಗಾಗಿ ಜಿಲ್ಲೆಯ ಜನತೆಗೆ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಪರಿತಪಿಸುವಂತಾಗಿದೆ. ರಾಜಕೀಯ ಬಿಟ್ಟು ಇಲ್ಲಿನ ಮೆಡಿಕಲ್ ಕಾಲೇಜಿನ ಸಂಪೂರ್ಣ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಿದೆ ಎಂದು ಕರೆ ನೀಡಿದರು.

ABOUT THE AUTHOR

...view details