ಕರ್ನಾಟಕ

karnataka

By ETV Bharat Karnataka Team

Published : Sep 20, 2023, 7:27 PM IST

ETV Bharat / state

ಬನವಾಸಿಯಲ್ಲಿ ಅರಣ್ಯ ಇಲಾಖೆಯಿಂದ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ: ಕ್ಯೂಆರ್​ ಸ್ಕ್ಯಾನ್ ಮಾಡಿದಲ್ಲಿ ಸಿಗಲಿದೆ ಕದಂಬರ ಇತಿಹಾಸ

ಸಾರ್ವಜನಿಕರಿಗೆ ಬನವಾಸಿಯ ಇತಿಹಾಸ ಹೇಳುವ ನೂತನ ಕಲ್ಪನೆಗೆ ಅರಣ್ಯ ಇಲಾಖೆ ನಾಂದಿ ಹಾಡಿದೆ.

Digital touch to Salumarada thimmakka park by forest department in Banavasi
ಬನವಾಸಿಯಲ್ಲಿ ಅರಣ್ಯ ಇಲಾಖೆಯಿಂದ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ

ಬನವಾಸಿಯಲ್ಲಿ ಅರಣ್ಯ ಇಲಾಖೆಯಿಂದ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ

ಶಿರಸಿ:ಕನ್ನಡದ ಮೊದಲ ರಾಜಧಾನಿ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಇತಿಹಾಸವನ್ನು ಈಗ ಇಲ್ಲಿಯ ಗಿಡಮರಗಳು ಸಾರುತ್ತಿವೆ. ಅದೂ ಡಿಜಿಟಲ್ ತಂತ್ರಜ್ಞಾನದ ಮೂಲಕ ಎಂಬುದು ವಿಶೇಷ. ಬನವಾಸಿಯ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ ನೀಡಿರುವ ಅರಣ್ಯ ಇಲಾಖೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಬನವಾಸಿಯ ಇತಿಹಾಸವನ್ನು ತಿಳಿಸುವ ಮಾದರಿ ಕಾರ್ಯ ಕೈಗೊಂಡಿದೆ. ಕದಂಬ ನಡಿಗೆ ಎಂಬ ನೂತನ ಕಲ್ಪನೆಯನ್ನು ಜಾರಿಗೆ ತಂದಿದೆ.

ಶಿರಸಿ ತಾಲೂಕಿಗೆ ಒಳಪಡುವ ಬನವಾಸಿ ಕದಂಬರಾಳಿದ ಪ್ರದೇಶ. ಇದನ್ನು ಕನ್ನಡದ ಪ್ರಥಮ ರಾಜಧಾನಿ ಅಂತಲೂ ಕರೆಯುತ್ತಾರೆ. ಇದು ಐತಿಹಾಸಿಕ ಮಹತ್ವವುಳ್ಳ ಪ್ರದೇಶ. ಇಲ್ಲಿ ಸಾಕಷ್ಟು ಸಂಗತಿಗಳು ಅಡಕವಾಗಿವೆ. ಇದರಿಂದ ಅರಣ್ಯ ಇಲಾಖೆ ಹೊಸದೊಂದು ಪ್ರಯೋಗ ನಡೆಸಿ, ಇಲಾಖೆಯ ಅಡಿಯಲ್ಲಿ ಬರುವ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ ನೀಡಿದೆ. ಅಲ್ಲಿ ಅಳವಡಿಸಿದ ಬೋರ್ಡ್​ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ಭರಪೂರ ವಿವರ ಲಭ್ಯವಾಗುತ್ತದೆ.

ಬನವಾಸಿಯಲ್ಲಿ ಅರಣ್ಯ ಇಲಾಖೆಯಿಂದ ಉದ್ಯಾನವನಕ್ಕೆ ಡಿಜಿಟಲ್ ಸ್ಪರ್ಶ

2017ರಲ್ಲಿ ಆರಂಭವಾದ ಈ ಉದ್ಯಾವನಕ್ಕೆ ವಾಕಿಂಗ್ ಪಥದಂಚಿನಲ್ಲಿ 14ಕ್ಕೂ ಹೆಚ್ಚು ಬೋರ್ಡ್​ಗಳನ್ನು ಅಳವಡಿಸಲಾಗಿದೆ. ಈ ಪ್ರತಿ ಬೋರ್ಡ್​ಗಳಲ್ಲಿ ಕದಂಬರ ರಾಜಧಾನಿಯ ವಿಶೇಷತೆಯ ವಿವರಗಳಿವೆ. ಹೀಗೆ ಪ್ರತಿ ಬೋರ್ಡ್​ಗಳನ್ನು ಓದುತ್ತ ಸಾಗಿದಂತೆ ಕೆಳಗಡೆ ಇರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಆ ವಿಷಯಗಳ ಕುರಿತ ಮಾಹಿತಿ ಖಜಾನೆಯೇ ತೆರೆದುಕೊಳ್ಳುತ್ತದೆ. ಇದರಿಂದ ಮಾಹಿತಿ ಬರೆದುಕೊಳ್ಳುವ ಅವಶ್ಯಕತೆ ಇಲ್ಲದಾಗುತ್ತದೆ. ವೆಬ್ ಪೇಜ್‌ಗಳಲ್ಲಿ ನೋಡಬೇಕಿಲ್ಲ. ಎಲ್ಲ ಮಾಹಿತಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ಮೊಬೈಲ್‌ನಲ್ಲಿ ದೊರೆಯುತ್ತದೆ. ಈ ಎಲ್ಲ ಕಾರಣದಿಂದ ಬನವಾಸಿ ವೀಕ್ಷಣೆಗೆ ಬರುವ ನಾಡಿನ ವಿವಿಧೆಡೆ ಪ್ರವಾಸಿಗರು ಈ ಉದ್ಯಾನವನಕ್ಕೆ ಬಂದು ವೀಕ್ಷಿಸುತ್ತಾರೆ. ಅಲ್ಲದೇ ಪ್ರತಿನಿತ್ಯ ಬೆಳಗ್ಗೆ ಸಂಜೆ ಸುತ್ತಮುತ್ತಲಿನವರು ಇಲ್ಲಿಯೇ ವಾಕಿಂಗ್ ಮಾಡುತ್ತಾರೆ.

ಸುಮಾರು 18 ಎಕರೆ ಪ್ರದೇಶ ವ್ಯಾಪ್ತಿ ಹೊಂದಿರುವ ಈ ಉದ್ಯಾವನದ ವಾಕಿಂಗ್ ಪಥದಂಚಿನಲ್ಲಿರುವ 15 ಜಾತಿಯ ಗಿಡಗಳ ಹೆಸರು, ವಿಶೇಷತೆ, ವೈಜ್ಞಾನಿಕ ಹೆಸರುಗಳ ಫಲಗಳನ್ನು ಹಾಕಲಾಗಿದೆ. ಇಲ್ಲಿ ಮಕ್ಕಳ ಉದ್ಯಾವನ, ಚಿಟ್ಟೆಗಳ ಉದ್ಯಾನವನ, ತುಗೂಯ್ಯಾಲೆಗಳು, ಪಾರಾಗೋಲ್‌ಗಳು, ದ್ಯಾನಕೇಂದ್ರಗಳಿವೆ. ಕದಂಬ ಗಿಡಗಳನ್ನು ಪ್ರತ್ಯೇಕವಾಗಿ ಬೆಳೆಸಲಾಗಿದೆ.
ಕದಂಬರ ರಾಜ್ಯದ ಸ್ಥಾಪಕ ಮಯೂರ ವರ್ಮ ಕ್ರಿ.ಶ 325-346 ಅವಧಿಯಲ್ಲಿ ಬನವಾಸಿಯನ್ನು ರಾಜಧಾನಿಯಾಗಿಸಿಕೊಂಡಿದ್ದನು.

ಬೌದ್ಧ ಧರ್ಮ ಪ್ರಸಾರಕ್ಕೆ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಬಿಕ್ಷುವು ಬನವಾಸಿ ಪ್ರಾಂತ್ಯಕ್ಕೆ ಬಂದಿರುವುದು. ಸಿಂಹಳದ ಬೌದ್ಧ ಬಿಕ್ಷುಗಳೂ ಸಹ ಧರ್ಮ ಪ್ರಸಾರಕ್ಕೆ ಬಂದಿರುವ ಮಾಹಿತಿ ಫಲಕ ಹಾಕಲಾಗಿದೆ. ಇದನ್ನು ತಿಳಿಸಲು ಕದಂಬ ನಡಿಗೆ ಎಂಬ ವಾಕಿಂಗ್ ಪಾಥ್ ನಿರ್ಮಾಣ ಮಾಡಲಾಗಿದೆ. ಇದರ ಜತೆಯಲ್ಲಿ ಬನವಾಸಿ ವಿಶೇಷತೆ, ಬನವಾಸಿ ಕೋಟೆ, ಬನವಾಸಿ ಮಧುಕೇಶ್ವರ ದೇವಾಲಯ, ಮಧುಕೇಶ್ವರ ದೇವಸ್ಥಾನದ ವಾಸ್ತುಶಿಲ್ಪ, ಕದಂಬೋತ್ಸವದ, ಕದಂಬ ಮರದ ಬಗೆಗಿನ ವಿವರವನ್ನು ಚಿತ್ರಸಹಿತ ದೊಡ್ಡದಾದ ಬೋರ್ಡ್​ಗಳನ್ನು ಹಾಕಿರುವುದು ವಿಶೇಷ. ಈ ಎಲ್ಲ ಬೋರ್ಡ್​ಗಳಲ್ಲೂ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ.

ಒಟ್ಟಾರೆಯಾಗಿ ಕದಂಬರ ರಾಜಧಾನಿಯಲ್ಲಿ ಕದಂಬ ವಿಶೇಷತೆಯನ್ನು ಒಳಗೊಂಡಿರುವ ಉದ್ಯಾನವನ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ. ಹೀಗಾಗಿಯೇ ಸಾಲುಮರದ ತಿಮ್ಮಕ್ಕ ಉದ್ಯಾವನಕ್ಕೆ ಕದಂಬರ ನಡಿಗೆ ಎಂದು ಹೆಸರಿಟ್ಟು ವಾಕ್‌ ಪಥ ನಿರ್ಮಿಸಲಾಗಿದೆ. ಅಧಿಕೃತವಾಗಿ ಇನ್ನಷ್ಟೇ ಇದು ಉದ್ಘಾಟನೆ ಆಗಬೇಕಿದ್ದರೂ, ಅರಣ್ಯ ಇಲಾಖೆಯ ಕಾರ್ಯ ಇತಿಹಾಸಕಾರರಿಂದ, ಸ್ಥಳೀಯರಿಂದ ಶ್ಲಾಘನೆಗೆ ಪಾತ್ರವಾಗಿದೆ.

ಇದನ್ನೂ ಓದಿ :ಸಾಲುಮರದ ತಿಮ್ಮಕ್ಕ ಉದ್ಯಾನವನವೀಗ ಪ್ರವಾಸಿಗರಿಗೆ ಅಚ್ಚುಮೆಚ್ಚು; ಇಲ್ಲಿವೆ 4,500ಕ್ಕೂ ಅಧಿಕ ಸಸಿಗಳು!

ABOUT THE AUTHOR

...view details