ಕಾರವಾರ:ಶ್ರೀ ರಾಮನ ಶರದಿಂದ ಉದ್ಬವಿಸಿದೆ ಎನ್ನುವ ಪ್ರತೀತಿ ಹೊಂದಿರುವ ಹೊನ್ನಾವರದಲ್ಲಿ ಶರಾವತಿ ನದಿಗೆ ದೀಪ ಬೆಳಗುವ ವಿಶೇಷ ಕಾರ್ಯಕ್ರಮ ನಡೆಯಿತು. ಶಿವಮೊಗ್ಗದ ಅಂಬುತೀರ್ಥದಲ್ಲಿ ಉಗಮಗೊಂಡು ಹೊನ್ನಾವರ ತಾಲೂಕಿನಲ್ಲಿ ಹರಿದು ಸಮುದ್ರ ಸೇರುವ ಶರಾವತಿ ನದಿಗೆ ದೀಪವನ್ನು ಬೆಳಗಿಸಿ ನಮಿಸುವ ಭಾವನಾತ್ಮಕ ಕಾರ್ಯಕ್ರಮಕ್ಕೆ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮೀಜಿ ಚಾಲನೆ ನೀಡಿದರು.
ಆಶೀರ್ವಚನ ನೀಡಿದ ಶ್ರೀಗಳು, ತಾಲೂಕಿನ ಹಲವರಿಗೆ ಜೀವನಾಡಿಯಾದ ಶರಾವತಿಯನ್ನು ಪೂಜಿಸುವ ಕಾರ್ಯವಾಗಬೇಕು. ಮೂರು ಮಾತೆಯರಿದ್ದಾರೆ. ಜನ್ಮ ನೀಡಿದ ತಾಯಿ, ಗೋಮಾತೆ ಮತ್ತು ಜಲ ಮಾತೆ. ನಮ್ಮ ಪ್ರಾಂತ್ಯದಲ್ಲಿ ಹರಿಯುತ್ತಿರುವ ಶರಾವತಿ ನದಿಯ ತ್ಯಾಗದಿಂದ ಇಲ್ಲಿನ ಜನ ಸುಖಮಯ ಜೀವನ ನಡೆಸುತ್ತಿದ್ದಾರೆ. ಈ ನದಿಯ ಸ್ವಚ್ಛತೆಗೆ ನಾವು ಅದ್ಯತೆ ನೀಡಬೇಕು. ನದಿ ನೀರನ್ನು ಹಾಳು ಮಾಡುವ ಕೆಲಸ ಮಾಡಬಾರದು. ವರ್ಷವಿಡೀ ಈ ನದಿಯ ಸ್ವಚ್ಛತೆಗೆ ಶ್ರಮಿಸೋಣ. ಶರಾವತಿ ತಾಯಿ ನಮ್ಮನ್ನೆಲ್ಲ ಹರಸಲಿ ಎಂದರು.