ಕರ್ನಾಟಕ

karnataka

By ETV Bharat Karnataka Team

Published : Oct 1, 2023, 7:08 PM IST

ETV Bharat / state

ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ: ತಾಳಿಸರ ಕಿತ್ತೋಡುತ್ತಿದ್ದ ಇಬ್ಬರ ಬಂಧನ

ಮಹಿಳೆಯರಿಂದ ತಾಳಿಸರ ಕಸಿದುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಅಂತರಜಿಲ್ಲಾ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಯಲ್ಲಾಪುರ ಪೊಲೀಸರು
ಯಲ್ಲಾಪುರ ಪೊಲೀಸರು

ಕಾರವಾರ (ಉತ್ತರ ಕನ್ನಡ) : ಮಹಿಳೆಯರ ಕೊರಳಲ್ಲಿರುವ ಬಂಗಾರದ ಸರ ಹಾಗೂ ತಾಳಿಸರ ಕಸಿದುಕೊಂಡು ಹೋಗುತ್ತಿದ್ದ ಇಬ್ಬರು ಅಂತರಜಿಲ್ಲಾ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಫಜಲ್ ಯಾನೆ ಲಿಂಬು ಖಾದರಗೌಸ ಗವಾರಿ ಹಾಗೂ ಶಿರಸಿ ರಾಮನಬೈಲಿನ ನಿವಾಸಿ ಪೈಜಾನ್​ ಅಬ್ದುಲ್ ಸಮದ್ ಮುಲ್ಲಾ ಬಂಧಿತರು.

ಆರೋಪಿಗಳಿಂದ ಸುಮಾರು 3.50 ಲಕ್ಷ ರೂ. ಬೆಲೆಯ 55 ಗ್ರಾಂ ತೂಕದ ನಾಲ್ಕು ತಾಳಿ ಸರ ಸೇರಿದಂತೆ ಒಟ್ಟು 4.70 ಲಕ್ಷ ರೂ ಬೆಲೆಯ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ. ಡಿವೈಎಸ್​ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ ಇನ್ನಿತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಕಾರವಾರದಲ್ಲಿ ಮನೆ ದೋಚಿದ ಕಳ್ಳರು: ಕಾರವಾರ ನಗರದ ಬೈತಖೋಲದ ಮನೆಯೊಂದರಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಯ ಬಾಗಿಲು ಮುರಿದು 50 ಸಾವಿರ ನಗದು ಹಾಗೂ ಬಂಗಾರದ ಆಭರಣಗಳನ್ನು ದೋಚಿದ್ದಾರೆ. ಆಶಾ ಬಂಡಾರಿ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದವರು ರಾತ್ರಿ ಗಣಪತಿ ನಿಮಜ್ಜನ ಮೆರವಣಿಗೆ ನೋಡಲು ತೆರಳಿದ್ದರು ಎಂದು ತಿಳಿದುಬಂದಿದೆ.

ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಯ ಬಾಗಿಲು ಮುರಿದ ಕಳ್ಳರು ಮನೆಯಲ್ಲಿದ್ದ ನಗದು ಹಾಗೂ ಬಂಗಾರದ ಕಿವಿ ಓಲೆ ಕದ್ದಿದ್ದಾರೆ. ಕಾರವಾರ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಅಪರಿಚಿತ ಶವ ಪತ್ತೆ; ಕೊಲೆ ಶಂಕೆ: ಕುಮಟಾ-ಶಿರಸಿ ಹೆದ್ದಾರಿಯಲ್ಲಿ ದೇವಿಮನೆ ಘಟ್ಟದ ಮಾಸ್ತಿಮನೆ ಕ್ಷೇತ್ರಪಾಲ ಮಂದಿರದ ಹಿಂಭಾಗದಲ್ಲಿ ಶನಿವಾರ ಬೆಳಗ್ಗೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಸುಮಾರು 35- 40 ವರ್ಷದವರಾಗಿದ್ದು, ಬಿಳಿ ಬಣ್ಣದ ಜುಬ್ಬಾ, ಕೆಂಪು, ಕಪ್ಪು, ನೀಲಿ ಬಣ್ಣದ ಗೆರೆಯುಳ್ಳ ಲುಂಗಿ ಧರಿಸಿದ್ದಾರೆ. ಹುಬ್ಬು ಹಾಗೂ ಕಿವಿ ಹಿಂಭಾಗದಲ್ಲಿ ಗಾಯ ಕಂಡುಬಂದಿದೆ. ಯಾರೋ ಬೇರೆಡೆ ಕೊಲೆ ಮಾಡಿ ಎಸೆದು ಹೋಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕುಮಟಾ ಪೊಲೀಸರು ಎರಡು ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಎರಡು ದೇವಸ್ಥಾನಗಳಲ್ಲಿ 5 ಮಾಂಗಲ್ಯ ಸರ, 18 ಚಿನ್ನ ಗುಂಡುಗಳು ಕಳವು

ABOUT THE AUTHOR

...view details