ಕರ್ನಾಟಕ

karnataka

By ETV Bharat Karnataka Team

Published : Oct 28, 2023, 9:09 AM IST

Updated : Oct 28, 2023, 12:56 PM IST

ETV Bharat / state

ಪ್ರಯೋಜನಕ್ಕೆ ಬಾರದ ಸಿಸಿ ಕ್ಯಾಮರಾಗಳು: ಎಲ್ಲ ಪೊಲೀಸ್ ಠಾಣೆಗಳಲ್ಲಿ ಕ್ಯಾಮರಾ ಅಳವಡಿಕೆಗೆ ಆಗ್ರಹ !

ಉತ್ತರಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ, ಇವುಗಳ ನಿರ್ವಹಣೆ ಸರಿಯಾಗಿ ಮಾಡದೇ ಇರುವುದರಿಂದ ಕೆಟ್ಟು ಹೋಗಿವೆ. ಅಲ್ಲದೇ ಜಿಲ್ಲೆಯ ಎಲ್ಲ ಪೊಲೀಸ್​ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

cc-cameras-installed-in-uttharakannada-are-not-working-properly
ಪ್ರಯೋಜನಕ್ಕೆ ಬಾರದಂತಾದ ಸಿಸಿ ಕ್ಯಾಮರಾಗಳು: ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕ್ಯಾಮರಾ ಅಳವಡಿಕೆಗೆ ಆಗ್ರಹ!

ಪ್ರಯೋಜನಕ್ಕೆ ಬಾರದಂತಾದ ಸಿಸಿ ಕ್ಯಾಮರಾಗಳು: ಎಲ್ಲ ಪೊಲೀಸ್ ಠಾಣೆಗಳಲ್ಲಿ ಕ್ಯಾಮರಾ ಅಳವಡಿಕೆಗೆ ಆಗ್ರಹ!

ಕಾರವಾರ (ಉತ್ತರಕನ್ನಡ): ಅಪರಾಧ ಪತ್ತೆ ಸೇರಿದಂತೆ ಇನ್ನಿತರ ವಿಷಯಗಳಿಗೆ ಇತ್ತೀಚಿನ ದಿನಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಪ್ರಮುಖವಾಗಿ ಬಳಕೆಯಾಗುತ್ತಿವೆ. ಅದರಲ್ಲಿಯೂ ನಗರದ ವಿವಿಧೆಡೆ ಅಳವಡಿಸಿದ ಸಿಸಿ ಕ್ಯಾಮರಾಗಳು ಪೊಲೀಸರಿಗೆ ಹೆಚ್ಚು ಸಹಕಾರಿಯಾಗಿದೆ. ಆದರೆ, ಇದೀಗ ಈ ಸಿಸಿ ಕ್ಯಾಮರಾಗಳು ಕೆಟ್ಟು ಹೋಗಿದ್ದು, ಯಾರಿಗೂ ಪ್ರಯೋಜನಕ್ಕೆ ಬಾರದಂತಾಗಿದೆ.

ಉತ್ತರಕನ್ನಡ ಜಿಲ್ಲೆಯ ಹಲವೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಸಿಸಿಟಿವಿಗಳು ಹಲವು ಅಪರಾಧ‌ ಪ್ರಕರಣಗಳನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ. ನಗರ ಪ್ರದೇಶದಲ್ಲಿ ವಾಹನ ಸಂಚಾರ ನಿರ್ವಹಣೆ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆಗೆ ಸಿಸಿ ಕ್ಯಾಮರಾಗಳು ಉಪಯುಕ್ತವಾಗಿದೆ. ಸಿಸಿಟಿವಿಗಳು ಇದ್ದರೂ ಇವುಗಳ ನಿರ್ವಹಣೆ ಮಾತ್ರ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಲದೇ ಇನ್ನು ಕೆಲವೆಡೆ ಸಿಸಿಟಿವಿಗಳನ್ನೇ ಹಾಕಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಪೊಲೀಸ್ ಇಲಾಖೆಯಿಂದ ಕಾರವಾರ ನಗರ ಸೇರಿದಂತೆ ಹಲವೆಡೆ ಸಿಸಿಟಿವಿಗಳನ್ನು ಹಾಕಲಾಗಿದೆ. ಆದರೆ, ಇವುಗಳು ನಿರ್ವಹಣೆ ಇಲ್ಲದೇ ಹಾಳಾಗಿದ್ದು, ಅಪರಾಧ ಚಟುವಟಿಕೆಗಳು ನಡೆದಾಗ ಪೊಲೀಸರು ಅಂಗಡಿಗಳ ಮುಂದೆ ಹಾಕಿದ ಸಿಸಿಟಿವಿಗಳಿಂದ ದೃಶ್ಯ ಪಡೆಯುವಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರಾದ ಅನಿಲ್ ರೋಡ್ರಿಗಸ್​, ಸುಪ್ರೀಂ ಕೋರ್ಟ್ ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ಕಡ್ಡಾಯವಾಗಿ ಸಿಸಿಕ್ಯಾಮರಾ ಅಳವಡಿಸಲು ಸೂಚಿಸಿದೆ. ಆದರೆ, ನಮ್ಮ‌ಲ್ಲಿ ಕೆಲ ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮರಾವೇ ಇಲ್ಲ. ಕೆಲವೆಡೆ ಇದ್ದರೂ ಕೆಟ್ಟು ಹೋಗಿದೆ. ಇದರಿಂದ ಸಾರ್ವಜನಿಕರು ತಮ್ಮ ದೂರುಗಳು ದಾಖಲಿಸಲು ಮುಂದಾದಾಗ ಅಧಿಕಾರಿಗಳು ಇರುವುದೇ ಇಲ್ಲ. ದಿನವಿಡಿ ಕಾಯಿಸುತ್ತಾರೆ. ಇಂತಹ ಹಲವು ಪ್ರಕರಣಗಳು ನಡೆಯುವ ಕಾರಣ ಸಿಸಿ ಕ್ಯಾಮರಾಗಳಿದ್ದಲ್ಲಿ ಅನುಕೂಲವಾಗಲಿದೆ. ಆದ್ದರಿಂದ ಈ ಬಗ್ಗೆ ಅಧಿಕಾರಿಗಳಿಗೆ ಎಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಲು ಮನವಿ ಮಾಡಿದ್ದೇವೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಟಿ ಜಯಕುಮಾರ ಪ್ರತಿಕ್ರಿಯಿಸಿ, ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲೂ ಸಿಸಿಟಿವಿಗಳನ್ನು ಹಾಕಬೇಕು ಎನ್ನುವ ಆದೇಶವಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಪೊಲೀಸರು ಸಾರ್ವಜನಿಕರ ಜೊತೆ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಮೇಲಾಧಿಕಾರಿಗಳು ಗಮನಿಸುವ ನಿಟ್ಟಿನಲ್ಲಿ ಸಿಸಿಟಿವಿಗಳನ್ನು ಹಾಕಬೇಕು. ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಅದನ್ನು ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ಜೊತೆಗೆ ಕೆಲವು ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ನಿರ್ವಹಣೆ ಇಲ್ಲದೆ ಕೆಲಸ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಬಗ್ಗೆ ಪುರಸಭೆಗೆ ಮಾಹಿತಿ ನೀಡಿದ್ದೇವೆ. ಸರಿಪಡಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :ಮಲೆನಾಡಲ್ಲಿ ಹುಲಿ ಉಗುರು, ಚರ್ಮ ಇರುವುದು ಸಾಮಾನ್ಯ, ಇದನ್ನು ಸರ್ಕಾರ ಇಲ್ಲಿಗೆ ಅಂತ್ಯ ಮಾಡಲಿ: ಎಂ ಪಿ ಕುಮಾರಸ್ವಾಮಿ

Last Updated : Oct 28, 2023, 12:56 PM IST

ABOUT THE AUTHOR

...view details