ಕರ್ನಾಟಕ

karnataka

By

Published : Jan 25, 2023, 8:00 AM IST

ETV Bharat / state

ಜಾನುವಾರುಗಳಿಗೆ ಚರ್ಮಗಂಟು ರೋಗ: ಉಳವಿ ಚನ್ನಬಸವೇಶ್ವರ ಜಾತ್ರೆಯಲ್ಲಿ ಚಕ್ಕಡಿಗೆ ನಿರ್ಬಂಧ

ಶ್ರೀ ಚೆನ್ನಬಸವೇಶ್ವರರ ಕ್ಷೇತ್ರ ಉಳವಿ ಜಾತ್ರೆಯಲ್ಲಿ ಚಕ್ಕಡಿ ಗಾಡಿಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

Ulavi Channabasaveshwar fair wheel ban
ಉಳವಿ ಚನ್ನಬಸವೇಶ್ವರ ಜಾತ್ರೆಗೆ ಚಕ್ಕಡಿಗೆ ನಿರ್ಭಂದ

ಕಾರವಾರ (ಉತ್ತರ ಕನ್ನಡ) :ಪುರಾಣ ಪ್ರಸಿದ್ಧ ಶ್ರೀ ಚೆನ್ನಬಸವೇಶ್ವರರ ಕ್ಷೇತ್ರ ಉಳವಿ ಜಾತ್ರೆಗೆ ಪ್ರತಿ ವರ್ಷವೂ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಹರಿದುಬರುತ್ತದೆ. ಬಹುತೇಕರು ತಮ್ಮ ಚಕ್ಕಡಿ ಗಾಡಿಗಳಲ್ಲಿ ಕುಟುಂಬಸಮೇತರಾಗಿ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಆದರೆ ಈ ಬಾರಿ ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಚಕ್ಕಡಿಗಳಿಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಬಂಧ ವಿಧಿಸಿದೆ.

ಪಶ್ಚಿಮ ಘಟ್ಟಗಳ ದಟ್ಟ ಕಾನನದ ನಡುವೆ ವಿರಾಜಮಾನರಾಗಿರುವ ಚನ್ನಬಸವೇಶ್ವರರ ಕ್ಷೇತ್ರ ಉಳವಿ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿರುವ ಈ ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಗೆ ಚಕ್ಕಡಿಗಳ ಮೂಲಕ ಭಕ್ತರು ಆಗಮಿಸುತ್ತಾರೆ. ಚಕ್ಕಡಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಉಳವಿ ಜಾತ್ರೆಗೆ ಬರುವ ಭಕ್ತರು ವಾರಗಳ ಕಾಲ ಇಲ್ಲಿಯೇ ಉಳಿದುಕೊಂಡು ಮಹಾರಥೋತ್ಸವ ಮುಗಿಸಿ ತಮ್ಮೂರುಗಳಿಗೆ ವಾಪಸಾಗುತ್ತಾರೆ.

ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿದ್ದು ಹೆಚ್ಚಿನ ಭಕ್ತರಿಲ್ಲದೇ ಜಾತ್ರೆ ಮಂಕಾಗಿತ್ತು. ಈ ಸಲ ಜನವರಿ 28ರಿಂದ ಜ. 8ರವರೆಗೆ ಜಾತ್ರೆ ನಡೆಯಲಿದ್ದು ಫೆಬ್ರುವರಿ 6 ರಂದು ಮಹಾರಥೋತ್ಸವವಿದೆ. ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಉದ್ದೇಶಿಸಲಾಗಿದೆ. ಆದರೆ, ಜಾನುವಾರುಗಳಿಗೆ ಚರ್ಮಗಂಟು ರೋಗ ಎದುರಾಗಿದ್ದು ಚಕ್ಕಡಿ ಗಾಡಿಗಳಿಗೆ ಅವಕಾಶವಿಲ್ಲ.

ಜಾತ್ರೆಗೆ ಯಾರೂ ಸಹ ಚಕ್ಕಡಿ ಗಾಡಿಗಳನ್ನು ತರದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ದೇವಸ್ಥಾನ ಸಮಿತಿ ಭಕ್ತರಿಗೆ ಈ ಕುರಿತು ಜಾಗೃತಿ ಮೂಡಿಸುತ್ತಿದೆ. ಭಕ್ತರು ಚಕ್ಕಡಿ ಗಾಡಿಗಳ ಬದಲಿಗೆ ಟ್ರಾಕ್ಟರ್ ಇಲ್ಲವೇ ಬಸ್‌ಗಳಲ್ಲಿ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಚೆನ್ನಬಸವೇಶ್ವರ ಟ್ರಸ್ಟ್‌ ಮನವಿ ಮಾಡಿದೆ.

"ಚೆನ್ನಬಸವೇಶ್ವರರ ಜೊತೆಗೆ ಬಸವನನ್ನು ಪೂಜೆ ಮಾಡುವ ಕಾರಣ ಉತ್ತರ ಕರ್ನಾಟಕ ಭಾಗದ ರೈತರು ಪ್ರತಿ ವರ್ಷ ಉಳುವಿ ಜಾತ್ರೆಗೆ ಎತ್ತಿನ ಗಾಡಿ ಮೂಲಕವೇ ಬರುವುದು ಸಾಮಾನ್ಯ. ಆದರೆ ಈ ವರ್ಷ ಚರ್ಮಗಂಟು ರೋಗ ಹೆಚ್ಚುತ್ತಿದ್ದು ಎತ್ತಿನಗಾಡಿ ತರದಂತೆ ಮನವಿ ಮಾಡಲಾಗಿದೆ. ಬದಲಾಗಿ, ಟ್ಯಾಕ್ಟರ್ ಇಲ್ಲವೇ ಇತರೆ ವಾಹನಗಳನ್ನು ಬಳಸುವಂತೆ ಸೂಚಿಸಲಾಗಿದೆ. ಈಗಾಗಲೇ ಹಳಿಯಾಳ ಜೋಯಿಡಾ ಭಾಗದಲ್ಲಿ ರೋಗ ಉಲ್ಬಣಗೊಂಡಿದ್ದು ಇದರಿಂದ ಇತರೆ ಜಾನುವಾರುಗಳಿಗೂ ತಗಲುವ ಸಾಧ್ಯತೆ ಇದೆ. ಈ ಕಾರಣದಿಂದ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ" ಎಂದು ಜಾತ್ರಾ ಸಮಿತಿ ಸದಸ್ಯ ಎಂಎಲ್‌ಸಿ ಗಣಪತಿ ಉಳ್ವೇಕರ್ ಹೇಳಿದರು.

ರೈತರ ಆರಾಧ್ಯ ದೈವ:ಉಳವಿ ಚೆನ್ನಬಸವೇಶ್ವರರು ರೈತರ ಆರಾಧ್ಯ ದೈವವಾಗಿದ್ದು ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಅದರಲ್ಲೂ ರೈತರು ವಿಶೇಷವಾಗಿ ತಮ್ಮ ಕುಟುಂಬದವರೊಂದಿಗೆ ಜಾನುವಾರುಗಳನ್ನು ಕಟ್ಟಿಕೊಂಡು ಚಕ್ಕಡಿ ಗಾಡಿಗಳಲ್ಲಿ ಆಗಮಿಸಿ ಜಾತ್ರೆಯ 12 ದಿನಗಳ ಕಾಲವೂ ಉಳವಿಯಲ್ಲೇ ತಂಗುತ್ತಾರೆ.

ಪ್ರತಿವರ್ಷ ಸುಮಾರು ಐನೂರಕ್ಕೂ ಅಧಿಕ ಚಕ್ಕಡಿ ಗಾಡಿಗಳು ರಾಜ್ಯದ ವಿವಿಧೆಡೆಗಳಿಂದ ಈ ಜಾತ್ರೆಗಾಗಿಯೇ ಆಗಮಿಸುತ್ತಿದ್ದವು. ಆದರೆ ಪ್ರಸ್ತುತ ವರ್ಷ ಜಾನುವಾರುಗಳಿಗೆ ಚರ್ಮಗಂಟು ರೋಗದ ಕಾರಣಕ್ಕೆ ಜೋಯಿಡಾ, ಹಳಿಯಾಳ ತಾಲ್ಲೂಕುಗಳಲ್ಲೇ ಹೆಚ್ಚಿನದಾಗಿ ಬಾಧಿಸುತ್ತಿದ್ದು ಜಾನುವಾರುಗಳು ಸಾವನ್ನಪ್ಪಿದ ಘಟನೆಗಳು ನಡೆದಿವೆ.

"ರೋಗ ವ್ಯಾಪಿಸುವುದನ್ನು ನಿಯಂತ್ರಿಸುವ ಉದ್ದೇಶದಿಂದಲೇ ಈ ಬಾರಿ ಚಕ್ಕಡಿಗಳಿಗೆ ನಿಷೇಧವಿದೆ. ಆದರೆ ಭಕ್ತರಿಗೆ ಆಗಮಿಸಲು ವಿಶೇಷ ಬಸ್‌ ವ್ಯವಸ್ಥೆಗಳನ್ನು ಕಲ್ಪಿಸಿದ್ದು ಯಾವುದೇ ರೀತಿಯಲ್ಲೂ ಅನನುಕೂಲ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ" ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಉಪಾಧ್ಯಕ್ಷ ಸಂಜಯ ಕಿತ್ತೂರು ಮಾಹಿತಿ ನೀಡಿದರು.

ಇದನ್ನೂ ಓದಿ:ವೀಸಾ ಉಲ್ಲಂಘನೆ: ಪಾಕಿಸ್ತಾನ ಮಹಿಳೆ ಮತ್ತು ಭಟ್ಕಳದ ಆಕೆಯ ಪತಿಗೆ ಜೈಲು ಶಿಕ್ಷೆ

ABOUT THE AUTHOR

...view details