ಶಿರಸಿ(ಉತ್ತರ ಕನ್ನಡ):ರೈತರು ಹಾಗೂ ಕದಂಬ ಯುವಕ ಮಂಡಳಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಓಡಿಸೋ ಸ್ಪರ್ಧೆಗೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಾಕ್ಷಿಯಾಗಿತ್ತು. ಗ್ರಾಮದಲ್ಲಿ ಈ ಬಾರಿ ಗ್ರಾಮಸ್ಥರು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು. ಬೈಕ್, ಫ್ರಿಡ್ಜ್ ಸೇರಿದಂತೆ ವಿವಿಧ ಬಗೆಯ ಬಹುಮಾನಗಳನ್ನು ಇಟ್ಟಿದ್ದರು.
ಹಾವೇರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯ ಹೋರಿಗಳು ಮತ್ತು ಸಾವಿರಾರು ಸಂಖ್ಯೆಯ ಜನರು ಹೋರಿ ಹಬ್ಬ ವೀಕ್ಷಣೆಗೆ ಆಗಮಿಸಿದ್ದರು. ದೀಪಾವಳಿ ಹಾಗೂ ಸಂಕ್ರಾಂತಿ ಹಬ್ಬದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವ ಪಡೆದುಕೊಳ್ಳುತ್ತದೆ.
ಬನವಾಸಿಯಲ್ಲಿ ನಡೆದ ಹೋರಿ ಓಡಿಸೋ ಸ್ಪರ್ಧೆ ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು. ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು.
ರಾಣೆಬೆನ್ನೂರು ಡಾನ್, ಬಾರಂಗಿ ಮಹಾವೀರ, ಹಂಸಭಾವಿಯ ಕರ್ನಾಟಕ ನಂದಿ, ಬೆಣ್ಣಿಗೇರಿಯ ಮಿಡಿನಾಗ, ತಡಸನಹಳ್ಳಿ ಡಾನ್, ಶಿಕಾರಿಪುರ ಗಾಂಧಿನಗರದ ಸೂಪರ್, ಯಲವಳ್ಳಿ ಪಾಳೇಗಾರ, ಕುಪ್ಪಗಡ್ಡೆ ಈಡಿಗರ ಹುಲಿ ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಶರವೇಗದಲ್ಲಿ ಓಡಿ ಧೂಳೆಬ್ಬಿಸಿದವು.
ಇದನ್ನೂ ಓದಿ:ಚಾಮರಾಜನಗರದ ಗೋಪಾಲಸ್ವಾಮಿ ಜಾತ್ರೆಗೂ ಕಾಲಿಟ್ಟ ವ್ಯಾಪಾರ ನಿರ್ಬಂಧ ವಿವಾದ