ಭಟ್ಕಳ: ಟೋಲ್ ಗೇಟ್ನಲ್ಲಿ ಆಂಬ್ಯುಲೆನ್ಸ್ ಚಾಲಕರೊಂದಿಗೆ ಅಸಂಬದ್ಧವಾಗಿ ಮಾತನಾಡಿದ ಸಿಬ್ಬಂದಿ ವಿರುದ್ಧ ಆಂಬ್ಯುಲೆನ್ಸ್ ಚಾಲಕರು ಪ್ರತಿಭಟಿಸಿದ ಘಟನೆ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.
ಶಿರೂರು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇರುವ ಟೋಲ್ ಗೇಟಿನ ಒಂದು ಬದಿಯಲ್ಲಿ ತುರ್ತು ಓಡಾಟಕ್ಕೆ ಅನುಕೂಲವಾಗಲು ಮಾರ್ಗ ಇದೆ. ಆ ಮಾರ್ಗದಲ್ಲಿ ಐಆರ್ಬಿ ಅವರು ಹಂಪ್ ನಿರ್ಮಿಸಿದ್ದಾರೆ. ಹೀಗಾಗಿ ತುರ್ತಾಗಿ ಉಡುಪಿ, ಮಂಗಳೂರು ಕಡೆ ತೆರಳುವ ರೋಗಿಗಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟ ಕಂಪನಿಯವರಿಗೆ ಮನವಿ ಮಾಡಿದರೂ ಹಂಪ್ ತೆರವುಗೊಳಿಸಲಿಲ್ಲ. ಹೀಗೆ ರೋಗಿಗಳ ಜೀವ ಹೋಗುವ ಪರಿಸ್ಥಿತಿ ಇದ್ದರೂ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಟೋಲ್ ನಲ್ಲಿ ಹಂಪು ತೆರವುಗೊಳಿಸದೇ ಪ್ರಾಣದೊಂದಿಗೆ ಚೆಲ್ಲಾಟ: ಆಂಬ್ಯುಲೆನ್ಸ್ ಚಾಲಕರ ಆಕ್ರೋಶ ಮತ್ತೊಂದೆಡೆ ಚಾಲಕರೊಂದಿಗೆ ಟೋಲ್ ಗೇಟ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿ ತೊಂದರೆ ಕೊಟ್ಟಿದ್ದರಿಂದ ಚಾಲಕರೆಲ್ಲ ಸೇರಿ ಮ್ಯಾನೇಜರ್ ಅವರನ್ನು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮ್ಯಾನೇಜರ್, ಸಿಬ್ಬಂದಿ ವರ್ತನೆಯಿಂದ ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಆಂಬ್ಯುಲೆನ್ಸ್ ಚಾಲಕರಿಗೆ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಆಂಬ್ಯುಲೆನ್ಸ್ ಸಂಚರಿಸುವ ಮಾರ್ಗದಲ್ಲಿ ಹಾಕಿದ ಹಂಪ್ ಇಂದೇ ತೆಗೆಯುವುದಾಗಿಯೂ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕರಾದ ಅಮಾನುಲ್ಲಾ, ನಾಗಭೂಷಣ್, ಮುಷ್ತಾಕ್, ಶಬೀರ್, ವಿನಾಯಕ ನಾಯ್ಕ, ಸಫೀ, ಅಶ್ಪಕ್ ಮುಂತಾದವರು ಉಪಸ್ಥಿತರಿದ್ದರು.