ಭಟ್ಕಳ:ತಾಲೂಕಿನಮಾವಳ್ಳಿ-2 ಗ್ರಾಮದ ಕೊಡ್ಸೂಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪಠ್ಯೇತರ ಚಟುವಟಿಕೆಯ ಭಾಗವಾಗಿ 60 ಪರಿಸರ ಸ್ನೇಹಿ ಕುಂಡ ತಯಾರಿಸಿ ಹೊಸದೊಂದು ಪ್ರಯೋಗ ಮಾಡಿದ್ದಾರೆ.
ಮಾವಳ್ಳಿ-2 ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಗ್ರಾಮದಲ್ಲಿರುವ ಕೊಡ್ಸೂಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು 60 ಪರಿಸರ ಸ್ನೇಹಿ ಕುಂಡ ತಯಾರಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ. ಈ ಶಾಲೆಯಲ್ಲಿ 6 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಪ್ರಭಾರಿ ಮುಖ್ಯ ಶಿಕ್ಷಕ ಪರಮೇಶ್ವರ ಜಟ್ಟ ನಾಯ್ಕ ನೇತೃತ್ವದಲ್ಲಿ ತುಕಾರಾಮ ತಾಡುಕಟ್ಟಾ, ಶಾರದಾ ನಾಯ್ಕ, ಸುಧಾ ಅಶೋಕ ಆಚಾರಿ, ಮಂಜುನಾಥ ಶೇಟ ಹಾಗೂ ಧರ್ಮ ಕುಪ್ಪು ನಾಯ್ಕ ಅವರು ಶಾಲೆಯ ಶೈಕ್ಷಣಿಕ ಕಾರ್ಯಕ್ರಮದೊಂದಿಗೆ ಬಿಡುವಿನ ವೇಳೆಯಲ್ಲಿ ಈ ಪರಿಸರ ಸ್ನೇಹಿ ಕುಂಡವನ್ನು ಯೋಜನಾಬದ್ಧವಾಗಿ ತಯಾರಿಸಿದ್ದಾರೆ.
ಶಿಕ್ಷಕರು ವಿದ್ಯಾಗಮ ಶೈಕ್ಷಣಿಕ ಕಾರ್ಯಕ್ರಮವನ್ನು ನಿರ್ವಹಿಸುತ್ತಾ ಬಿಡುವಿನ ವೇಳೆ ಶಾಲೆಯ ‘ನಿಸರ್ಗ’ ಪರಿಸರ ಸಂಘದ ಅಡಿಯಲ್ಲಿ ವಿವಿಧ ಪರಿಸರ ಪೂರಕ ಚಟುವಟಿಕೆಗಳನ್ನು ಮಾಡುತಿದ್ದಾರೆ. ಅವುಗಳಲ್ಲಿ ಈ ಪರಿಸರ ಸ್ನೇಹಿ ಕುಂಡ ಕೂಡ ಒಂದು. ಮಾರುಕಟ್ಟೆಯಲ್ಲಿ ಈ ಕುಂಡಕ್ಕೆ 150ರಿಂದ 200 ರೂ. ಬೆಲೆಯಿದೆ. ಹೀಗಾಗಿ ಶಿಕ್ಷಕರೇ ಕುಂಡ ತಯಾರಿಕೆಗಿಳಿದ್ದು, ಕೇವಲ 50 ರೂ. ವ್ಯಯಿಸಿ ಕುಂಡಗಳನ್ನು ಸಿದ್ಧಪಡಿಸಿದ್ದಾರೆ. ಸರ್ಕಾರದಿಂದ ಪರಿಸರ ಸ್ನೇಹಿ ಸಂಘಕ್ಕೆ 5 ಸಾವಿರ ಅನುದಾನ ನೀಡಲಾಗಿದ್ದು, ಅದರಲ್ಲಿ 1 ಸಾವಿರ ರೂ. ಈ ಕುಂಡ ತಯಾರಿಕೆಗೆ ಬಳಸಿಕೊಂಡಿದ್ದು, 3 ಚೀಲ ಸಿಮೆಂಟ್ ಹಾಗೂ ಮರಳನ್ನು ದಾನಿಗಳ ಸಹಾಯದಿಂದ ಪಡೆದುಕೊಂಡಿದ್ದಾರೆ.
ಒಟ್ಟು 5 ತಿಂಗಳ ಕಾಲಾವಧಿಯಲ್ಲಿ ಶಿಕ್ಷಕರು ವಿವಿಧ ವಿನ್ಯಾಸದ ವಿವಿಧ ಆಕಾರದ ಕುಂಡ ಸಿದ್ಧಪಡಿಸಿದ್ದಾರೆ. ಇದುವರೆಗೆ ಸುಮಾರು 65 ಕುಂಡಗಳನ್ನು ಸಿದ್ಧಪಡಿಸಲಾಗಿದ್ದು, 119 ಕುಂಡಗಳನ್ನು ತಯಾರಿಸಿ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗೆ ಒಂದು ಕುಂಡ, ಗಿಡ ನೀಡುವ ಯೋಜನೆ ರೂಪಿಸಿಕೊಂಡಿದ್ದಾರೆ. ಕುಂಡ ತಯಾರಿಕೆಯ ಬಳಿಕ, ಅದರಲ್ಲಿ ವಿವಿಧ ಬಗೆಯ ಔಷಧಿ ಸಸಿ, ತರಕಾರಿ ಗಿಡಗಳನ್ನು ನೆಟ್ಟು ಮಕ್ಕಳಿಗೆ ಮಾಹಿತಿ ಸಹಿತ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸ್ಥಳೀಯ ಔಷಧಿ ಸಸ್ಯಗಳನ್ನು ಬೆಳೆಸಿ, ಆರೋಗ್ಯಕರ ಶಾಲಾ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನು ಶಿಕ್ಷಕರು ಹೊಂದಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಕುಂಡಗಳಲ್ಲಿ ಔಷಧೀಯ ಸಸಿ, ತರಕಾರಿ ಗಿಡಗಳನ್ನು ಹಾಕಲಾಗಿದೆ. ಮುಂದಿನ 4-5 ತಿಂಗಳಲ್ಲಿ ಇದರ ಉಪಯೋಗವಾಗುವಂತೆ ಸಸಿ ಹಾಕಲಾಗಿದೆ.
ಸುಂದರ ಕೈತೋಟ, ಸಾವಯುವ ಗೊಬ್ಬರ: