ಕಾರವಾರ (ಉತ್ತರಕನ್ನಡ): ಕಡಲತೀರದಲ್ಲಿ ವಾಸವಾಗಿರುವ ಮೀನುಗಾರರಲ್ಲಿ ಸ್ವಚ್ಚತೆ ಬಗೆಗೆ ಜಾಗೃತಿ ಮೂಡಿಸಿ ಆ ಮೂಲಕ ಕಡಲತೀರವನ್ನು ಪ್ರವಾಸಿಗರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿತ್ತು.ಇದರ ಜೊತೆಗೆ ವಿಭಿನ್ನ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಒಂದೆಡೆ ಕಡಲತೀರದುದ್ದಕ್ಕೂ ಬಿದ್ದಿರುವ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ಜನ, ಇನ್ನೊಂದೆಡೆ ನಾ ಮುಂದು ತಾ ಮುಂದು ಎಂದು ಸಮುದ್ರದಲ್ಲಿ ಹುಟ್ಟು ಹಾಕುತ್ತ ದೋಣಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೀನುಗಾರರು, ಮತ್ತೊಂದೆಡೆ ಹಗ್ಗಜಗ್ಗಾಟದಲ್ಲಿ ಬಲಪ್ರದರ್ಶನ ನಡೆಸುತ್ತಿರುವ ಯುವಕರು ಈ ದೃಶ್ಯಗಳು ಕಂಡು ಬಂದಿದ್ದು ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮದಲ್ಲಿ.
ಅಂತಾರಾಷ್ಟ್ರೀಯ ಕಡಲತೀರದ ಸ್ವಚ್ಛತಾ ದಿನ : ಅಂತಾರಾಷ್ಟ್ರೀಯ ಕಡಲತೀರದ ಸ್ವಚ್ಛತಾ ದಿನದ ಅಂಗವಾಗಿ ಬೆಲೆಕೇರಿಯ ಕರಾವಳಿ ಕಾವಲು ಪೊಲೀಸ್ ಠಾಣೆಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಕರಾವಳಿ ಕಾವಲು ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಮತ್ತು ಅವರ ಕುಟುಂಬಸ್ಥರು ಹಾರವಾಡದ ಕಡಲತೀರದಲ್ಲಿ ಸ್ವಚ್ಛತೆ ನಡೆಸಿದರು. ಕಡಲತೀರದುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಟ್ಟೆ, ಬಾಟಲ್, ಬಲೆ ಸೇರಿದಂತೆ ತರಗೆಲೆಯ ತ್ಯಾಜ್ಯವನ್ನು ಆಯ್ದು ಸ್ವಚ್ಛಗೊಳಿಸುವ ಕಾರ್ಯ ಮಾಡಲಾಯಿತು.
ಗಮನ ಸೆಳೆದ ದೋಣಿ ಸ್ಪರ್ಧೆ :ಕಡಲ ತೀರದ ಸ್ವಚ್ಛತೆಯ ಬಳಿಕ ಸ್ಥಳೀಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಇದರ ಜೊತೆಗೆ ದೋಣಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇಬ್ಬರಂತೆ ಒಟ್ಟು 12 ದೋಣಿಗಳಲ್ಲಿ ಸ್ಪರ್ಧೆ ನಡೆಯಿತು. ನಿತ್ಯ ಕಸುಬಿನಲ್ಲಿ ನಿಧಾನವಾಗಿ ದೋಣಿ ಓಡಿಸುತ್ತಿದ್ದವರು ಈ ಭಾರಿ ಸ್ಪರ್ಧೆಗೆ ಬಿದ್ದು ಇರುವ ಶಕ್ತಿಯೆನ್ನೆಲ್ಲ ಬಳಸಿ ದೋಣಿ ಓಡಿಸಿದ್ದು ಎಲ್ಲರ ಗಮನ ಸೆಳೆಯಿತು.