ಕರ್ನಾಟಕ

karnataka

By

Published : Jun 1, 2022, 7:49 PM IST

ETV Bharat / state

ಕರ್ನಾಟಕ ನೌಕಾವಲಯದ ಎಫ್ಓಕೆ ಗೆ ರಾಷ್ಟ್ರಪತಿಯಿಂದ ವಿಶಿಷ್ಟ ಸೇವಾ ಪದಕ ಪ್ರದಾನ

ನೌಕಾಪಡೆಯಲ್ಲಿ ಉತ್ತಮ ಸೇವೆಗೈದ ಹಿನ್ನೆಲೆಯಲ್ಲಿ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅತಿ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಿದ್ದಾರೆ.

awarding-of-flag-officer-commanding-rear-admiral-atul-anand
ಕರ್ನಾಟಕ ನೌಕಾವಲಯದ ಎಫ್ಓಕೆ ಗೆ ರಾಷ್ಟ್ರಪತಿಯಿಂದ ವಿಶಿಷ್ಟ ಸೇವಾ ಪದಕ ಪ್ರದಾನ

ಕಾರವಾರ: ನೌಕಾಪಡೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅತಿ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಿದ್ದಾರೆ. ಮಂಗಳವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅತುಲ್ ಆನಂದ್ ಅವರಿಗೆ ಅತಿ ವಿಶಿಷ್ಟ ಸೇವಾ ಪದಕವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರದಾನ ಮಾಡಿದರು.

ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಅತಿ ವಿಶಿಷ್ಟ ಸೇವಾ ಪದಕ ಪ್ರದಾನ

1988ರ ಜನವರಿ 1ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜನೆಗೊಂಡ ಅತುಲ್ ಆನಂದ್ ಅವರು ಖಡಕ್ವಾಸ್ಲಾದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಮೀರ್ಪುರದ ರಕ್ಷಣಾ ಸೇವೆಗಳ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು ಹಾಗೂ ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ತರಬೇತಿ ಪಡೆದಿದ್ದರು. ಅಮೆರಿಕಾದ ಹವಾಯಿಯ ಏಷ್ಯಾ ಪೆಸಿಫಿಕ್ ಸೆಂಟರ್ ಫಾರ್ ಸೆಕ್ಯುರಿಟಿ ಸ್ಟಡೀಸ್‌ನಲ್ಲಿ ಪ್ರತಿಷ್ಠಿತ ಅಡ್ವಾನ್ಸ್ ಸೆಕ್ಯುರಿಟಿ ಕೋ- ಆಪರೇಷನ್ ಕೋರ್ಸ್‌ ಅನ್ನೂ ಅವರು ಮಾಡಿದ್ದಾರೆ.

ಎಂಫಿಲ್ ಮತ್ತು ಎಂಎಸ್ಸಿ ಡಿಫೆನ್ಸ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್, ಮಾಸ್ಟರ್ಸ್ ಇನ್ ಡಿಫೆನ್ಸ್ ಸ್ಟಡೀಸ್ ಮತ್ತು ಬಿಎಸ್ಸಿ ಪದವಿ ಪಡೆದಿರುವ ಅವರು, ತಮ್ಮ ನೌಕಾ ವೃತ್ತಿಜೀವನದಲ್ಲಿ ಟಾರ್ಪಿಡೊ ರಿಕವರಿ ನೌಕೆ ಐಎನ್ ಟಿಆರ್ ವಿ ಎ72, ಕ್ಷಿಪಣಿ ನೌಕೆ ಐಎನ್ಎಸ್ ಚಟಕ್, ಕಾರ್ವೆಟ್ ಐಎನ್ಎಸ್ ಖುಕ್ರಿ ಮತ್ತು ಡೆಸ್ಟ್ರಾಯರ್ ಐಎನ್ಎಸ್ ಮುಂಬೈ ಸೇರಿದಂತೆ ಹಲವೆಡೆ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಲ್ಲದೇ ಐಎನ್ಎಸ್ ಶಾರದಾ, ಐಎನ್ಎಸ್ ರಣವಿಜಯ್ ಮತ್ತು ಐಎನ್ಎಸ್ ಜ್ಯೋತಿಗಳಲ್ಲಿ ನ್ಯಾವಿಗೇಟಿಂಗ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದು, ಸೀ ಹ್ಯಾರಿಯರ್ ಸ್ಕ್ವಾಡ್ರನ್ ಐಎನ್‌ಎಎಸ್ 300ನ ನಿರ್ದೇಶನ ಅಧಿಕಾರಿ ಮತ್ತು ಡೆಸ್ಟ್ರಾಯರ್ ಐಎನ್‌ಎಸ್ ದೆಹಲಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಜಾಯಿಂಟ್ ಡೈರೆಕ್ಟರ್ ಸ್ಟಾಫ್ ರಿಕ್ವೈರ್ಮೆಂಟ್ಸ್, ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ಡೈರೆಕ್ಟಿಂಗ್ ಸ್ಟಾಫ್, ಡೈರೆಕ್ಟರ್ ನೇವಲ್ ಆಪರೇಷನ್ಸ್ ಮತ್ತು ಡೈರೆಕ್ಟರ್ ನೇವಲ್ ಇಂಟೆಲಿಜೆನ್ಸ್ ಗಳಂಥ ಹುದ್ದೆಗಳನ್ನೂ ಅವರು ನಿರ್ವಹಿಸಿದ್ದಾರೆ. ರಕ್ಷಣಾ ಸಚಿವಾಲಯದ ಸಂಯೋಜಿತ ಪ್ರಧಾನ ಕಛೇರಿಯಲ್ಲಿ ನೌಕಾ ಕಾರ್ಯಾಚರಣೆಗಳು ಮತ್ತು ಕಾರ್ಯತಂತ್ರ, ಪರಿಕಲ್ಪನೆಗಳು ಮತ್ತು ರೂಪಾಂತರದ ಪ್ರಧಾನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೇ, ನೌಕಾಪಡೆಯ ಸಹಾಯಕ ಮುಖ್ಯಸ್ಥರಾಗಿ ಮತ್ತು ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಉಪ ಕಮಾಂಡೆಂಟ್ ಮತ್ತು ಮುಖ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸದ್ಯ 2021ರ ಡಿಸೆಂಬರ್ ನಲ್ಲಿ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಆಗಿ ಹೆಡ್ ಕ್ವಾರ್ಟರ್ ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ನೌಕಾ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸದಾ ಹಸನ್ಮುಖಿ ವ್ಯಕ್ತಿತ್ವದೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಹಿಂದೆಯೇ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರು, ಪದಕ ವಿಜೇತರು ಹಾಗೂ ಅವರ ಕುಟುಂಬಸ್ಥರು ಹಾಜರಿದ್ದರು.

ಓದಿ :ರಾಜ್ಯಸಭೆ ಮೂರನೇ ಅಭ್ಯರ್ಥಿ ಗೆಲುವಿಗೆ ಹೀಗಿದೆ ಬಿಜೆಪಿ ಲೆಕ್ಕಾಚಾರ..!

For All Latest Updates

ABOUT THE AUTHOR

...view details