ಕಾರವಾರ : ಅಂಕೋಲಾ ತಾಲೂಕಿನ ದೊಡ್ಡ ದೇವರೆಂದೇ ಹೆಸರಾಗಿರುವ ವೆಂಕಟರಮಣ ದೇವರ ತೇರು ಉತ್ಸವವು ಜಲಕ್ರೀಡೆಯಾಡುವುದರೊಂದಿಗೆ ಸಂಪನ್ನಗೊಂಡಿದೆ. ಕಳೆದೆರಡು ದಿನಗಳಿಂದ ನಡೆಯುತ್ತಿರುವ ಸಣ್ಣ ತೇರು ಉತ್ಸವದೊಂದಿಗೆ ಹನುಮ ಜಯಂತಿ ಪ್ರಯುಕ್ತ ಸಾವಿರಾರು ಭಕ್ತರ ಕೂಡುವಿಕೆಯಲ್ಲಿ ದೊಡ್ಡ ತೇರು ಪಟ್ಟಣದ ರಥ ಬೀದಿಯಲ್ಲಿ ಮೆರವಣಿಗೆ ಸಾಗಿ ಉತ್ಸವ ಸಂಪನ್ನಗೊಂಡಿದೆ. ಉತ್ಸವ ಮುಗಿಸಿ ಬೇಟೆಯಾಟ ಆಡುವುದರೊಂದಿಗೆ ಆಯಾಸಗೊಂಡ ದೇವರು ತಾಲೂಕಿನ ಬೊಬ್ರುವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಾಬಂದರ್ ಗ್ರಾಮದ ಹಳ್ಳಕ್ಕೆ ಜಲಕ್ರೀಡೆಗೆ ತೆರಳುವ ಆಚರಣೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಬೆಳಾಬಂದರ್ ಗ್ರಾಮದ ಪ್ರಮುಖರು ದೊಡ್ಡ ತೇರಿನ ಮರುದಿನ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ವೀಳ್ಯ ನೀಡಿ ಜಲಕ್ರೀಡೆಗೆ ಆಮಂತ್ರಿಸುವುದು ಪದ್ಧತಿ. ಬಳಿಕ ದೇವಸ್ಥಾನದಿಂದ ಪಲ್ಲಕ್ಕಿಯ ಮೂಲಕ ದೇವರನ್ನು ಹಳ್ಳದ ದಡಕ್ಕೆ ಕರೆತರುತ್ತಾರೆ. ಹಾಗೆಯೇ ದೇವಸ್ಥಾನದ ಧರ್ಮದರ್ಶಿಗಳನ್ನೊಳಗೊಂಡಂತೆ ಅಲಂಕೃತಗೊಂಡ ದೋಣಿಯಲ್ಲಿ ವಿರಾಜಮಾನನಾಗುವ ವೆಂಕಟರಮಣ ದೇವರು ಜಲಮಾರ್ಗದಿಂದ ನದಿ-ಸಮುದ್ರ ಸಂಗಮ ಪ್ರದೇಶವಾದ ಗಾಬಿತಕೇಣಿಗೆ ತೆರಳಿ ಅಲ್ಲಿಯ ಮೀನುಗಾರ ಸಮಾಜದವರಿಂದ ಪೂಜೆಯನ್ನು ಸ್ವೀಕರಿಸಿ ಮತ್ತೆ ಬೆಳಾಬಂದರ ಹಳ್ಳದ ತೀರದಲ್ಲಿ ಬಂದು ಕುಳಿತುಕೊಳ್ಳುವ ವೆಂಕಟರಮಣ ದೇವರನ್ನು ನೋಡಲು ಭಕ್ತ ಸಾಗರವೇ ಹರಿದು ಬರುತ್ತದೆ.