ಕಾರವಾರ: ಭಟ್ಕಳದ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಬಳಿ ಕಾಡುಹಂದಿ ಬೇಟೆಯಾಡಿದ ಆರೋಪದ ಮೇರೆಗೆ 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, 11 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ನಿವಾಸಿಗಳಾದ ಪರಶುರಾಮ ಗುಳಪ್ಪೆ, ಚಂದ್ರಪ್ಪ ಬಂಗಾರಪ್ಪ, ರಮೇಶ ಬಾಳಪ್ಪ, ಬಂಗಾರಿ ಚಂದ್ರಪ್ಪ, ಸೂರಿ ಚಂದ್ರಪ್ಪ, ಅಶೋಕ ರಾಮಪ್ಪ, ನಾಗರಾಜ ಬಸವಂತಪ್ಪ, ಕುಮಾರ ಯಲ್ಲಪ್ಪ, ಹನುಮಂತ ರಮೇಶ ನಾಯ್ಕ, ಚಂದ್ರಪ್ಪ ಬಂಧಿತರು. ತಲೆಮರೆಸಿಕೊಂಡವರನ್ನು ಯುವರಾಜ, ಸುಭಾಶ, ನಾಗಪ್ಪ, ಯಲ್ಲಪ್ಪ ಎಂದು ಗುರುತಿಸಲಾಗಿದ್ದು, ಅವರ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ್ದಾರೆ.
ಇವರು ಪುರಸಭೆಯ ಘನತಾಜ್ಯ ವಿಲೇವಾರಿ ಘಟಕದ ಪಕ್ಕದ ಗುಡ್ಡದಲ್ಲಿ ಕಾಡುಹಂದಿಗಾಗಿ ಬಲೆ ಬೀಸಿದ್ದರು. ಆದರೆ, ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು.
ಬಳಿಕ ಡಿಎಫ್ಒ ಗಣಪತಿ, ಎಸಿಎಫ್ ಬಾಲಚಂದ್ರ ಮಾರ್ಗದರ್ಶನದಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ ಶಂಕರಗೌಡ ಅಲಗೋಡ, ಉಪವಲಯ ಅರಣ್ಯಾಧಿಕಾರಿಗಳಾದ ರವಿ ಎಸ್., ಮಲ್ಲಿಕಾರ್ಜುನ, ಗಣಪತಿ ನಾಯ್ಕ, ರಾಮಾ ನಾಯ್ಕ, ಪ್ರಮೋದ, ಶಿವಾನಂದ, ಮೇಘರಾಜ, ಶೇಷು ಶಿವಾನಂದ ಕಾರ್ಯಾಚರಣೆ ನಡೆಸಿದ್ದು, ಟಾಟಾ ಏಸ್ ಮತ್ತು 2 ಕಾಡುಹಂದಿಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಜೀವಂತವಿದ್ದ ಒಂದು ಹಂದಿಯನ್ನು ಕಾಡಿಗೆ ಬಿಟ್ಟಿದ್ದು, ಮೃತ ಹಂದಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತಿ ಕಾರ್ಯ ನಡೆಸಿದ್ದಾರೆ. ಅಲ್ಲದೆ ಬಂಧಿತ ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.