ಉಡುಪಿ: ಬ್ರಹ್ಮಾವರದ ಸಮೀಪ ಮೊಬೈಲ್ ಕಳವು ಮಾಡಿದ ಆರೋಪಿ ಮಹಮ್ಮದ್ ಫರಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರದಲ್ಲಿ ಮೊಬೈಲ್ ಕಳ್ಳತನ ಆರೋಪಿಯ ಬಂಧನ - ಉಡುಪಿ ಸುದ್ದಿ
ಮೊಬೈಲ್ ಕಳ್ಳತನ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಗಾಂಜಾ ಮಾರಾಟ ಹಾಗೂ ಗಾಂಜಾ ಸೇವನೆ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ಈ ಮೊದಲೇ ದಾಖಲಾಗಿವೆ.

ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಕಲ್ಲಬೆಟ್ಟು ಬಳಿಯ ರಸ್ತೆಯಲ್ಲಿ ರಕ್ಷಾ ಎಂಬಾಕೆ ಮನೆಯಿಂದ ಕೆಲಸಕ್ಕೆಂದು ಹೊರಟು ಮೊಬೈಲ್ನಲ್ಲಿ ಮಾತನಾಡುತ್ತಾ ನಡೆದುಕೊಂಡು ಬ್ರಹ್ಮಾವರ ಪೇಟೆಗೆ ಹೋಗುತ್ತಿದ್ದರು. ಈ ವೇಳೆ ಅವರ ಹಿಂಭಾಗದಿಂದ ಅಪರಿಚಿತರಿಬ್ಬರು ಮೋಟಾರ್ ಸೈಕಲ್ನಲ್ಲಿ ಬಂದು ರಕ್ಷಾ ಕೈಯಿಂದ ಮೊಬೈಲ್ ಕಸಿದುಕೊಂಡು ಹೋಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.
ಆರೋಪಿ ಉದ್ಯಾವರ ಮೇಲ್ಪೇಟೆ ವಾಸಿ ಮೊಹಮದ್ ಫರಾನ್ ಎಂಬಾತನ ಮೇಲೆ ಈ ಮೊದಲು ಮಣಿಪಾಲ ಠಾಣೆಯಲ್ಲಿ ಸುಲಿಗೆ ಪ್ರಕರಣ, ಗಾಂಜಾ ಮಾರಾಟ ಮಾಡಿದ ಬಗ್ಗೆ ಮಲ್ಪೆ ಠಾಣೆಯಲ್ಲಿ ಮತ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಈತನು ರೂಢಿಗತ ಕಳವು ಆರೋಪಿಯಾಗಿದ್ದು, ಸುಲಿಗೆಯಾದ ರೆಡ್ಮಿ ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ಬೈಕ್ ಸೇರಿ ಒಟ್ಟು ರೂ. 70,000 ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.