ಉಡುಪಿ:ನಗರಠಾಣಾ ಎಸ್ಐ ಅನಂತ ಪದ್ಮನಾಭ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದಕ್ಕಿದ್ದಂತೆ ಅಮಾನತು ಮಾಡಿದ್ದಾರೆ. ಈ ಮಧ್ಯೆ ಆಡಳಿತ ಪಕ್ಷದ ಶಾಸಕ ರಘುಪತಿ ಭಟ್ ಎಸ್ಐ ಅಮಾನತು ಪ್ರಕ್ರಿಯೆ ಖಂಡಿಸಿದ್ದು, ಸಸ್ಪೆಂಡ್ ರದ್ದು ಮಾಡುವಂತೆ ಗೃಹ ಸಚಿವರಿಗೆ ಒತ್ತಾಯಿಸಿದ್ದಾರೆ.
ಕರ್ತವ್ಯ ಲೋಪ ಆರೋಪದಡಿ ಎಸ್ಐ ಅಮಾನತು... ಸಸ್ಪೆಂಡ್ ಖಂಡಿಸಿ ಶಾಸಕನ ಕಿಡಿ - ಸ್ಥಳೀಯ ಶಾಸಕರು ಎಸ್ಪಿ ವಿರುದ್ಧ ಕಿಡಿ
ಆಡಳಿತ ಪಕ್ಷದ ಜನಪ್ರತಿನಿಧಿಗಳು ನಿರ್ಧಿಷ್ಟ ಪೊಲೀಸರ ವರ್ಗಾವಣೆ, ಸಸ್ಪೆಂಡ್ ಗೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹೇರೋದುಂಟು, ಆದರೆ, ಉಡುಪಿಯಲ್ಲಿ ಇದಕ್ಕೆ ತದ್ವಿರುದ್ದವಾದ ಬೆಳವಣಿಗೆ ನಡೆದಿದೆ. ಎಸ್ಐ ಒಬ್ಬರ ಸಸ್ಪೆಂಡ್ ಖಂಡಿಸಿ ಸ್ಥಳೀಯ ಶಾಸಕರು ಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ.
![ಕರ್ತವ್ಯ ಲೋಪ ಆರೋಪದಡಿ ಎಸ್ಐ ಅಮಾನತು... ಸಸ್ಪೆಂಡ್ ಖಂಡಿಸಿ ಶಾಸಕನ ಕಿಡಿ](https://etvbharatimages.akamaized.net/etvbharat/prod-images/768-512-5042569-thumbnail-3x2-hbf.jpg)
ನವೆಂಬರ್ 4ರಂದು ಉಡುಪಿಯ ಅಜ್ಜರಕಾಡು ಪಾರ್ಕ್ನಲ್ಲಿ ಪರಸ್ಪರ ಭಿನ್ನಕೋಮಿನ ಯುವ ಜೋಡಿ ಅಸಭ್ಯ ವರ್ತನೆ ತೋರುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು. ನಾಗರಿಕರು ಈ ಜೋಡಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಚಾರಣೆ ನಡೆಸಿದ್ದರು. ಆದರೆ, ಎರಡೂ ಕಡೆಯವರು ದೂರು ನೀಡಲು ನಿರಾಕರಿಸಿದಾಗ ರಾಜಿಯಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. ಆ ಬಳಿಕ ಯುವಕನ ಕಡೆಯವರು ಹೋಗಿ ಹಲ್ಲೆ ಮಾಡಿದ ಬಗ್ಗೆ ಎಸ್ಪಿಗೆ ದೂರು ನೀಡಿದ್ದರು. ಹಾಗಾಗಿ ಎಸ್ಪಿ ನಿಶಾ ಜೇಮ್ಸ್ ದೂರು ದಾಖಲಿಸಿಕೊಳ್ಳದೇ ಕರ್ತವ್ಯಲೋಪ ಮಾಡಿದ ಆರೋಪದಲ್ಲಿ ಎಸ್ಐ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿದ್ದಾರೆ.
ಈ ಸಂಬಂಧ ಸೌಹಾರ್ದಕ್ಕೆ ಅಡ್ಡಿಯಾಗಬಾರದು ಅನ್ನೋ ಉದ್ದೇಶದಿಂದ ಎಸ್ಐ ತೆಗೆದುಕೊಂಡ ಕ್ರಮ ಸರಿಯಾಗಿದೆ. ಅಯೋಧ್ಯೆ ತೀರ್ಪು ಬರಬೇಕಾಗಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಎಸ್ಐ ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ಎಸ್ಪಿ ವರ್ತನೆ ವಿರುದ್ಧ ಶಾಸಕ ರಘುಪತಿ ಭಟ್ ಕಿಡಿಕಾರಿದ್ದಾರೆ.