ಉಡುಪಿ:ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ಕುಟುಂಬವೊಂದು ವಂಚನೆ ಮಾಡಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿವೋರ್ವರು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಂಚನೆಗೆ ಒಳಗಾದ ವ್ಯಕ್ತಿ ಗೋವಿಂದರಾಜ್ ಶೆಟ್ಟಿ ಇಲ್ಲಿನ ನಿವಾಸಿ ಆಶಾ ಆರ್. ಶೆಟ್ಟಿ ಮತ್ತು ರತ್ನಾಕರ್ ಆರ್. ಶೆಟ್ಟಿಯವರಿಗೆ ಸಂಬಂಧಿಸಿದ ಮುಲ್ಕಿ ಬಪ್ಪನಾಡು ಗ್ರಾಮದ ಸರ್ವೇ ನಂಬರ್ 53/14ಪಿ1 ರಲ್ಲಿ 0-97 ಎಕರೆ ಜಮೀನನ್ನು ಅವರ ಮಗ ರಿಶಿತ್ ಶೆಟ್ಟಿ ಎಂಬಾತನ ಮೂಲಕ ಗೋವಿಂದರಾಜ್ ಶೆಟ್ಟಿ ಎಂಬುವರು ಖರೀದಿಸುವ ಕುರಿತಂತೆ 2013 ಮೇ 15 ರಂದು ಕರಾರನ್ನು ಮಾಡಿಕೊಂಡಿದ್ದರು.
ಸದರಿ ಕರಾರಿನಂತೆ ಸ್ಥಿರ ಆಸ್ತಿಯು ಭೂ ನ್ಯಾಯಮಂಡಳಿ ಆದೇಶದಂತೆ ಕ್ರಯ ಪತ್ರ ಮಾಡಿಕೊಡಲು ಕಾಲಾವಕಾಶ ಇದ್ದು, ಸದರಿ ಭೂ ನ್ಯಾಯ ಮಂಡಳಿ ಆದೇಶದಂತೆ ಮಾರಾಟ ನಿರ್ಬಂಧದ ಕಾಲಾವಕಾಶ ಮುಗಿದ ನಂತರ ಗೋವಿಂದರಾಜ್ ಶೆಟ್ಟಿ ಹೆಸರಿಗೆ ಕ್ರಯ ಪತ್ರ ಮಾಡಲು ಕರಾರು ಮೂಲಕ ಮಾತುಕತೆ ನಡೆದಿತ್ತು ಎನ್ನಲಾಗ್ತಿದೆ.
ಆದರೆ ಆಶಾ ಶೆಟ್ಟಿ ದಂಪತಿ ಮತ್ತು ಇವರ ಮಗ ರಿಶಿತ್ ಶೆಟ್ಟಿ ಸೇರಿಕೊಂಡು ಕರಾರು ಮಾಡಿಕೊಂಡು ಹಣ ಕ್ರಯಕ್ಕೆ ಸಂಬಂಧಪಟ್ಟಂತೆ ಹಣ ನೀಡಿದ ತಮಗೆ ಮೋಸ ಮಾಡಿ ಇನ್ನೊಬ್ಬರಿಗೆ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದು ಗೋವಿಂದರಾಜ್ ಶೆಟ್ಟಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನ್ಯಾಯವಾಗಿ ಜಮೀನನ್ನು ನನ್ನ ಹೆಸರಿಗೆ ಕರಾರು ಪತ್ರಗಳನ್ನು ಮಾಡಬೇಕಾಗಿದ್ದು, ನನಗೆ ರಿಶಿತ್ ಮತ್ತು ಅವರ ತಂದೆ-ತಾಯಿ ಸೇರಿಕೊಂಡು ಮೋಸ ವಂಚನೆ ಮಾಡಿ ನನ್ನ ಅನುಮತಿ ಇಲ್ಲದೆ ನನ್ನ ನಕಲಿ ಹೆಬ್ಬೆಟ್ಟು ಗುರುತನ್ನು ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಕರಾರಿನಂತೆ ನಾನು ನೀಡಿದ ಹಣವನ್ನು ಹಿಂದಿರುಗಿಸದೆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿ ನನಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಗೋವಿಂದರಾಜ ಶೆಟ್ಟಿ ಆರೋಪಿಸಿದ್ದಾರೆ.