ಕರ್ನಾಟಕ

karnataka

ETV Bharat / state

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಂಪನ್ನ

ಉಡುಪಿಯ ಅಷ್ಠಮಠಗಳ ಪಾಲಿಗೆ ಅತಿದೊಡ್ಡ ಹಬ್ಬವೆಂದರೆ ಪರ್ಯಾಯೋತ್ಸವ. ಇದು ಶ್ರೀಕೃಷ್ಣನ ಪೂಜೆಯ ಅಧಿಕಾರವನ್ನು ಒಂದು ಮಠದವರು ಇನ್ನೊಂದು ಮಠಕ್ಕೆ ಹಸ್ತಾಂತರಿಸುವ ಮಹೋತ್ಸವ. ಇದೀಗ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಪರ್ಯಾಯವನ್ನು ಪೂರೈಸಿದ್ದಾರೆ. ಇಂದು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ.

By

Published : Jan 18, 2022, 10:44 PM IST

paryaya-mahotsava-complited-in-udupi
ಸಂಪನ್ನಗೊಂಡ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಂಪನ್ನಗೊಂಡಿದ್ದು, ಕೋವಿಡ್ ನಿಯಮಾವಳಿಗಳ ಕಾರಣದಿಂದಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ, ಸರಳ ಪರ್ಯಾಯೋತ್ಸವ ನಡೆಯಿತು.

ಉಡುಪಿಯ ಅಷ್ಠಮಠಗಳ ಪಾಲಿಗೆ ಅತಿದೊಡ್ಡ ಹಬ್ಬವೆಂದರೆ ಪರ್ಯಾಯೋತ್ಸವ. ಇದು ಶ್ರೀಕೃಷ್ಣನ ಪೂಜೆಯ ಅಧಿಕಾರವನ್ನು ಒಂದು ಮಠದವರು ಇನ್ನೊಂದು ಮಠಕ್ಕೆ ಹಸ್ತಾಂತರಿಸುವ ಮಹೋತ್ಸವ. ಇದೀಗ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಪರ್ಯಾಯವನ್ನು ಪೂರೈಸಿದ್ದಾರೆ. ಇಂದು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ.


ಉಡುಪಿಯ ಪರ್ಯಾಯ ಮಹೋತ್ಸವ ಅಂದ್ರೆ ಲಕ್ಷಾಂತರ ಜನರು ಭಾಗವಹಿಸುವ ಸಂಪ್ರದಾಯವಿದೆ. ಆದರೆ, ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮಾತ್ರ ಆಚರಣೆ ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿಯ ಪರ್ಯಾಯ ಮಹೋತ್ಸವದಲ್ಲಿ ಯಾವುದೇ ಅದ್ಧೂರಿತನ ಇರಲಿಲ್ಲ.

ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ ವಿದ್ಯಾಸಾಗರ ತೀರ್ಥರು

ಕೆಲವೇ ಸಾವಿರ ಜನರು ನಿಂತು ಮೆರವಣಿಗೆ ನೋಡುವುದಕ್ಕೆ ಮಾತ್ರ ಅವಕಾಶ ಸಿಕ್ಕಿತ್ತು. ರಾತ್ರಿಯೆಲ್ಲಾ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಪರ್ಯಾಯೋತ್ಸವ ಮೆರವಣಿಗೆಯಲ್ಲಿ ಟ್ಯಾಬ್ಲೋಗಳ ಸಂಖ್ಯೆಯನ್ನು ಇಳಿಸಲಾಗಿತ್ತು. ಕಲಾತಂಡಗಳ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಸರ್ಕಾರದ ಕಾನೂನು ಮತ್ತು ಶ್ರೀಪಾದರ ಇಚ್ಛೆಯಂತೆ ಅತ್ಯಂತ ಸರಳ ಪರ್ಯಾಯೋತ್ಸವಕ್ಕೆ ಇದೇ ಮೊದಲ ಬಾರಿಗೆ ಉಡುಪಿ ಸಾಕ್ಷಿಯಾಯಿತು.

ಸಾಂಪ್ರದಾಯಬದ್ಧ ಧಾರ್ಮಿಕ ಕಾರ್ಯಕ್ರಮ:

3:30ಕ್ಕೆ ದಂಡತೀರ್ಥದಲ್ಲಿ ಪುಣ್ಯಸ್ನಾನ ಕೈಗೊಂಡು ಕೃಷ್ಣಾಪುರ ಶ್ರೀಗಳು ಜೋಡುಕಟ್ಟೆಗೆ ಆಗಮಿಸಿದರು. ಅಲ್ಲಿ ಹಾಜರಿದ್ದ ಅಷ್ಠಮಠಾಧೀಶರ ಜೊತೆಗೆ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಅಷ್ಠ ಮಠಾಧೀಶರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮಾನವ ಹೊರೆಯ ಪಲ್ಲಕ್ಕಿಗಳಿಗೆ ಬದಲಾಗಿ ಎಲ್ಲ ಮಠಾಧೀಶರನ್ನು ವಾಹನ ಪಲ್ಲಕ್ಕಿಯಲ್ಲಿ ಕರೆಯಲಾಯಿತು. ಕೃಷ್ಣಾಪುರ ಶ್ರೀಗಳು ಮುಂದೆ ಸಾಗಿದರೆ, ಅವರ ಹಿಂದೆ ಪಲಿಮಾರು ಪೇಜಾವರ ಕಾಣಿಯೂರು ಸೋದೆ ಶಿರೂರು ಶ್ರೀಗಳು ಪಲ್ಲಕ್ಕಿ ಏರಿ ಬಂದರು.


ಏಕಕಾಲದಲ್ಲಿ ಇಷ್ಟೊಂದು ಯತಿಗಳನ್ನು ಒಂದೇ ಮೆರವಣಿಗೆಯಲ್ಲಿ ಕಾಣುವ ಅಪೂರ್ವ ಅವಕಾಶವೇ ಈ ಸಲದ ಪರ್ಯಾಯದ ವಿಶೇಷವಾಯಿತು. ಮೆರವಣಿಗೆ ಮುಗಿಯುತ್ತಿದ್ದಂತೆ ರಥಬೀದಿಗೆ ಆಗಮಿಸಿದ ಅಷ್ಠಮಠಾಧೀಶರು ಕೃಷ್ಣಮಠ ಪ್ರವೇಶಿಸಿದರು. ಶುಭಮುಹೂರ್ತದಲ್ಲಿ ಅದಮಾರು ಶ್ರೀಗಳು ಕೃಷ್ಣಾಪುರ ಸ್ವಾಮೀಜಿಗೆ ಅಧಿಕಾರ ಹಸ್ತಾಂತರಿಸಿದರು.

ಅಕ್ಷಯ ಪಾತ್ರೆ ಮತ್ತು ಸಟ್ಟುಗವನ್ನು ಕೃಷ್ಣಾಪುರ ಶ್ರೀಗಳ ಕೈಗೆ ನೀಡುವ ಮೂಲಕ ಶ್ರೀಕೃಷ್ಣ ಪೂಜಾ ಅಧಿಕಾರ ವರ್ಗಾವಣೆಗೊಂಡಿತು‌. ಬಳಿಕ ವಿದ್ಯಾಸಾಗರ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿದರು. ಅರಳು ಗದ್ದುಗೆಯಲ್ಲಿ ಅಷ್ಠ ಮಠಾಧೀಶರಿಗೆ ಗೌರವ ಸಲ್ಲಿಕೆ ನಡೆಯಿತು. ನಂತರ ನಡೆದ ದರ್ಬಾರಿನಲ್ಲಿ ಎಲ್ಲಾ ಮಠಾಧೀಶರು ಆಶೀರ್ವಚನ ನೀಡಿದರು. ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

ಹದಿನಾಲ್ಕು ವರ್ಷಗಳ ನಂತರ ವಿದ್ಯಾಸಾಗರತೀರ್ಥರು ಕೃಷ್ಣನಿಗೆ ಮಹಾಪೂಜೆ ಸಲ್ಲಿಸಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ನಿರಂತರ ಸೇವೆ ಮುಂದುವರಿಯಲಿದೆ. ಕೋವಿಡ್ ಆತಂಕ ಕಳೆದು, ಸಮಾಜದಲ್ಲಿ ಮತ್ತೆ ನೆಮ್ಮದಿ ಮರಳಲಿ ಎಂದು ಎಲ್ಲಾ ಮಠಾಧೀಶರು ಈ ವೇಳೆ ಹಾರೈಸಿದರು.

ಇದನ್ನೂ ಓದಿ:ಕೊರೊನಾ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ: ಸರ್ಕಾರಕ್ಕೆ ಹೆಚ್​​ಡಿಕೆ ಸಲಹೆ

ABOUT THE AUTHOR

...view details