ಕರ್ನಾಟಕ

karnataka

By

Published : Jan 26, 2021, 5:26 PM IST

ETV Bharat / state

ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪಡೆದ ಕುಟುಂಬಕ್ಕೆ ಅನ್ಯಾಯ..

ಬಾಲಕೃಷ್ಣ ನಾಯರ್​​​ ಅವರಿಗೆ, ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ನೀಡಲಾಗಿತ್ತು. ಪ್ರಶಸ್ತಿ ದೊರೆತು 6 ದಶಕಗಳು ಕಳೆದರೂ, ಅವರ ಕುಟುಂಬ ಸೂಕ್ತ ಗೌರವ ಧನಕ್ಕಾಗಿ ಅಲೆದಾಡುತ್ತಿದೆ..

Injustice to the family who received the President's Bravery Award
ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪಡೆದ ಕುಟುಂಬಕ್ಕೆ ಅನ್ಯಾಯ

ಉಡುಪಿ :ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪಡೆದ ಕುಟುಂಬಕ್ಕೆ ಅನ್ಯಾಯವಾಗಿದೆ. ಪ್ರಶಸ್ತಿ ಪುರಸ್ಕೃತರ ಕುಟುಂಬಕ್ಕೆ ಸೂಕ್ತ ಗೌರವ ಧನ ನೀಡದೆ ಕೇರಳ ಪೊಲೀಸ್ ಇಲಾಖೆ ಕಳೆದ ಆರು ದಶಕಗಳಿಂದ ಸತಾಯಿಸುತ್ತಿದೆ.

ಬಾಲಕೃಷ್ಣ ನಾಯರ್ ಎಂಬುವರು 1951ರಲ್ಲಿ ಮಂಗಳೂರು ಬಂದರ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್​​ಪೆಕ್ಟರ್ ಆಗಿ ಕೆಲಸ ಆರಂಭಿಸಿದ್ದರು. ನಂತರ ಹಂಪನಕಟ್ಟೆ-ಬದಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿ, ಭಾಷಾವಾರು ಪ್ರಾಂತ್ಯಗಳ ರಚನೆಯಾದ ಬಳಿಕ ಕಾಸರಗೋಡಿಗೆ ವರ್ಗಾವಣೆಗೊಂಡಿದ್ದರು.

1961ರಲ್ಲಿ ಕಾಸರಗೋಡಿನ ಮಂಜೇಶ್ವರ ಠಾಣೆಯಲ್ಲಿದ್ದಾಗ ಅಪೂರ್ವ ಸಾಹಸ ಮೆರೆದಿದ್ದರು. ಅಂತಾರಾಜ್ಯ ಡಕಾಯಿತನಾಗಿದ್ದ ಕಿಟ್ಟು ಅಗಸ ಎಂಬುವನ ತಂಡದೊಂದಿಗೆ ಹೋರಾಡಿ, ಅವನ ಮನೆಗೆ ದಾಳಿ ನಡೆಸಿ ರಹಸ್ಯ ಮಾಹಿತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆತನ ಬಂಧನದಲ್ಲಿ ಶ್ರಮಿಸಿದ್ದರು.

ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪಡೆದ ಕುಟುಂಬಕ್ಕೆ ಅನ್ಯಾಯ..

ಜೀವದ ಹಂಗು ತೊರೆದು ಹೋರಾಡಿದ್ದಕ್ಕಾಗಿ ಬಾಲಕೃಷ್ಣ ನಾಯರ್​​​ ಅವರಿಗೆ, ಗಣರಾಜ್ಯೋತ್ಸವದ ದಿನ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ನೀಡಲಾಗಿತ್ತು. ಪ್ರಶಸ್ತಿ ದೊರೆತು 6 ದಶಕಗಳು ಕಳೆದರೂ, ಅವರ ಕುಟುಂಬ ಸೂಕ್ತ ಗೌರವ ಧನಕ್ಕಾಗಿ ಅಲೆದಾಡುತ್ತಿದೆ.

ಕೇರಳ ಪೊಲೀಸ್ ಇಲಾಖೆ ಪ್ರತಿ ತಿಂಗಳು ಕೇವಲ 100 ರೂಪಾಯಿ ಗೌರವಧನ ನೀಡುತ್ತಿದೆ. ಈ ನೂರು ರೂಪಾಯಿಯನ್ನು ಪಡೆಯುವುದಕ್ಕೆ ಅವರ ಮಡದಿ ವಿಜಯಲಕ್ಷ್ಮಿ, ಕೇರಳದ ಕಲ್ಲಿಕೋಟೆಗೆ ಹೋಗಬೇಕು.

ಸದ್ಯ ಈಕೆ ಮಂಗಳೂರಿನ ಸುರತ್ಕಲ್​​ನಲ್ಲಿ ನೆಲೆಸಿದ್ದಾರೆ. ಕನಿಷ್ಠ ಗೌರವಧನ ಕೂಡ ಕಳೆದ ಎರಡು ವರ್ಷಗಳಿಂದ ಈಕೆಯ ಕೈ ಸೇರಿಲ್ಲ. ವಾಸ್ತವದಲ್ಲಿ ಗೌರವಧನದ ಮೊತ್ತ ಮಾಸಿಕ ₹6,000ಕ್ಕೆ ಏರಿಕೆಯಾಗಿದೆ. ಈ ವಿಚಾರವನ್ನು ಕೇರಳ ಪೊಲೀಸ್ ಇಲಾಖೆ ಈಕೆಯಿಂದ ಮುಚ್ಚಿಟ್ಟಿದೆ.

ಬಾಲಕೃಷ್ಣ ನಾಯರ್ ತೀರಿ ಹೋಗಿ 40 ವರ್ಷವಾಯಿತು. ಅಂದಿನಿಂದ ವಿಜಯಲಕ್ಷ್ಮಿಯವರ ಹೆಸರಿಗೆ ಗೌರವಧನ ಬರುತ್ತಿದೆ. ಗೌರವ ಧನದ ಮೊತ್ತ ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಪರಿಷ್ಕೃತವಾಗುತ್ತೆ.

ಆದರೆ, ಪರಿಷ್ಕೃತ ಮೊತ್ತವನ್ನು ಯಾವತ್ತೂ ಈಕೆಗೆ ನೀಡಲಿಲ್ಲ. ಮೊದಲ ನೂರು ರೂಪಾಯಿ ಇದ್ದ ಗೌರವಧನ ನಂತರ 200 ರೂಪಾಯಿ ಆಗಿತ್ತು. 2013ನೇ ಸಾಲಿಗೆ ಈ ಮೊತ್ತ 3,000 ರೂಪಾಯಿಗೆ ಏರಿತ್ತು. ಈಗ ಈ ಮೊತ್ತ ಮಾಸಿಕ ಆರು ಸಾವಿರಕ್ಕೆ ಏರಿಕೆಯಾಗಿದೆ.

ತನ್ನ ಹಕ್ಕಿಗಾಗಿ ವಿಜಯಲಕ್ಷ್ಮಿ 82ರ ಇಳಿ ವಯಸ್ಸಿನಲ್ಲೂ ಹೋರಾಟ ನಡೆಸುವಂತಾಗಿದೆ. ಇದು ನನಗೆ ಕೇವಲ ಹಣದ ಪ್ರಶ್ನೆಯಲ್ಲ. ತನ್ನ ಪತಿಯ ಸಾಹಸಕ್ಕಾಗಿ ಸರ್ಕಾರ ಕೊಟ್ಟ ಗೌರವ ಪಡೆಯುವುದು, ನನ್ನ ಹಕ್ಕು ಎಂಬುದು ಅವರ ವಾದ.

ಮಹಿಳೆಯು ಸದ್ಯ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ. ಇವರಿಗೆ ಆಗಿರುವ ಅನ್ಯಾಯದ ವಿರುದ್ಧ ಕೇರಳ ರಾಜ್ಯಾದ್ಯಂತ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಪ್ರತಿಷ್ಠಾನ ಶ್ರಮಿಸುತ್ತಿದೆ.

ಇಂದು ಮತ್ತೆ ಗಣರಾಜ್ಯೋತ್ಸವ ಬಂದಿದೆ. ಈ ವರ್ಷವೂ ಅನೇಕ ಮಂದಿಗೆ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ಹೊಸಬರಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಇತಿಹಾಸದಲ್ಲಿ ಆದ ಈ ಅನ್ಯಾಯಕ್ಕೂ ಕೇರಳ ಸರ್ಕಾರ ಸ್ಪಂದಿಸಬೇಕಾಗಿದೆ.

ABOUT THE AUTHOR

...view details