ಕರ್ನಾಟಕ

karnataka

By

Published : Mar 6, 2022, 7:58 AM IST

ETV Bharat / state

ಜಂಬಿ ದುರ್ಗಾಪರಮೇಶ್ವರಿ ದೇಗುಲದಲ್ಲಿ ಭ್ರಷ್ಟಾಚಾರ ಆರೋಪ: ಜೀರ್ಣೋದ್ಧಾರ ಸಮಿತಿಯಿಂದ ಸ್ಪಷ್ಟನೆ

ದುರ್ಗಾಪರಮೇಶ್ವರಿ ದೇವಾಲಯದ ಒಟ್ಟು ಜೀರ್ಣೋದ್ಧಾರಕ್ಕೆ 55 ಲಕ್ಷ ರೂ. ಖರ್ಚು ಮಾಡಲಾಗಿದೆ. ಇದರ ಒಟ್ಟು ವಿವರವನ್ನು ಶಿರೂರು ಮಠದ ಮ್ಯಾನೇಜರ್‌ಗೆ ಒಪ್ಪಿಸಲಾಗಿದೆ. ಅವರು ಲೆಕ್ಕಪತ್ರ ಸಲ್ಲಿಕೆಯಾಗಿರುವ ಬಗ್ಗೆ ಹಿಂಬರಹ ನೀಡಿರುತ್ತಾರೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಾನಂದ ಹೆಗಡೆ ಹೇಳಿದ್ದಾರೆ.

corruption allegations in jambi durgaparameshwari temple
ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಾನಂದ ಹೆಗಡೆ

ಉಡುಪಿ:ಶಿರೂರು ಮಠದ ಆಡಳಿತ ವ್ಯಾಪ್ತಿಗೆ ಒಳಪಟ್ಟಿರುವ ಬೈರಂಪಳ್ಳಿ ಜಂಬಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಬೈರಂಪಳ್ಳಿ ಆರೋಪಿಸಿರುವ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.


ಈ ದೇವಸ್ಥಾನ ಶಿರೂರು ಮಠದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ. ದೇವಾಲಯದ ಜೀರ್ಣೋದ್ಧಾರಕ್ಕೆ ಊರ-ಪರವೂರ ಭಕ್ತ ಮಹನೀಯರು ನೆರವು ನೀಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಸುಮಾರು 3 ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗಿದೆ.

ಸಂಗ್ರಹವಾದ ಅನುದಾನದಲ್ಲಿ ದೇವಸ್ಥಾನದ ಸುತ್ತ ಇರುವ ಭೂಮಿಯನ್ನು ಸಮತಟ್ಟು ಮಾಡಿ ಸುತ್ತಲೂ ಕಾಂಕ್ರೀಟ್ ರಿಪೀಟ್ ವಾಲ್ ಹಾಕಲಾಗಿದೆ. ಈ ಕಾಮಗಾರಿಗೆ ಸರ್ಕಾರಿ ಇಂಜಿನಿಯರ್ ಅವರಿಂದ ಎಸ್ಟಿಮೇಶನ್ ಮಾಡಿ ನಿಯಮಾವಳಿಗಳನ್ನು ಪಾಲಿಸಿ ಕೆಲಸ ಮಾಡಲಾಗಿದೆ.

ದೇವಾಲಯದ ಒಟ್ಟು ಜೀರ್ಣೋದ್ಧಾರಕ್ಕೆ 55 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಇದರ ಒಟ್ಟು ವಿವರವನ್ನು ಶಿರೂರು ಮಠದ ಮ್ಯಾನೇಜರ್‌ಗೆ ಒಪ್ಪಿಸಲಾಗಿದೆ. ಅವರು ಲೆಕ್ಕಪತ್ರ ಸಲ್ಲಿಕೆಯಾಗಿರುವ ಬಗ್ಗೆ ಹಿಂಬರಹ ನೀಡಿರುತ್ತಾರೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ವಿವರಿಸಿದರು.

ಆದರೆ ಕೆಲ ದಿನದ ಹಿಂದೆ ಕಾಂಗ್ರೆಸ್ ಮುಖಂಡ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಬೈರಂಪಳ್ಳಿ ಫೇಸ್​​ಬುಕ್ ಮೂಲಕ ಪಂಚಾಯತ್ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ ಆರೋಪದ ಬಗ್ಗೆ ತನಿಖೆ ನಡೆಸಲು ನಾವು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.

ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡುವ ಬದಲು ಸಂತೋಷ್ ಬೈರಂಪಳ್ಳಿ ಬಳಿ ಯಾವುದೇ ದಾಖಲೆಗಳಿದ್ದರೆ ದೇವಾಲಯಕ್ಕೆ ಬಂದು ದೇವರ ಮುಂದೆ ದಾಖಲೆಗಳನ್ನು ಹಾಜರು ಮಾಡಲಿ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಹೆಗಡೆ ಸವಾಲು ಹಾಕಿದರು.

For All Latest Updates

ABOUT THE AUTHOR

...view details