ಕರ್ನಾಟಕ

karnataka

By

Published : Apr 27, 2023, 9:29 PM IST

ETV Bharat / state

ನಾವು ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುತ್ತೇವೆ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಈ ಬಾರಿ 123 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ತುಮಕೂರಿನಲ್ಲಿ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ತುಮಕೂರು : ಬಿಜೆಪಿ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಬೆಂಬಲ ಕೊಡುತ್ತೇವೆ ಎಂದು ನಾವು ಹೇಳಿಲ್ಲ. ನಾವು ಸಪೋರ್ಟ್ ಕೊಡ್ತಿವಿ ಅಂತಾ ಅರ್ಜಿ ಹಾಕಿಕೊಂಡು ಹೋಗಿದ್ವಾ? ನಾವು ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡ್ತಿವಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ 123 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಆ ನಿಟ್ಟಿನಲ್ಲಿ ಶ್ರಮ ಹಾಕಿದ್ದೇವೆ. ಬಿಜೆಪಿ ಅವರಿಗೆ ಸಂಪೂರ್ಣ ಬಹುಮತ ಬರುತ್ತೆ ಅನ್ನೋ ಭರವಸೆ ಇಲ್ಲ. ಹಾಗಾಗಿ ಜೋಷಿ ಸಪೋರ್ಟ್ ಬಗ್ಗೆ ಮಾತನಾಡಿದ್ದಾರೆ ಎಂದರು. ಎಂಎಲ್​ಸಿ ಬೋಜೆಗೌಡ ಕಾಂಗ್ರೆಸ್​ಗೆ ಬೆಂಬಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ವೈಯಕ್ತಿಕವಾಗಿ ಚಿಕ್ಕಮಗಳೂರು ರಾಜಕಾರಣದಲ್ಲಿ ಸೆಕ್ಯೂಲರ್ ವೋಟ್​ಗಳು ಡಿವೈಡ್ ಆಗಿತ್ತು. ಈಗ ಸೆಕ್ಯೂಲರ್ ಓಟ್​ಗಳು ಒಂದಾಗಲಿ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಅವರಿಗೆ ನೋಟಿಸ್ ಕೊಡಲಿಕ್ಕೆ ಹೇಳಲಾಗಿದೆ ಎಂದು ಹೇಳಿದರು.

ನಾವು ಎಚ್ಚರದಿಂದ ಇರಬೇಕು:ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅಶ್ಲೀಲ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಈ ರೀತಿ ಪಿತೂರಿ ಮಾಡಿದವರು ಏನ್ ಸಾಚಾಗಳಾ? ಅದು ಷಡ್ಯಂತ್ರ. ಬಿಜೆಪಿ ಪಕ್ಷದವರು ಕೋರ್ಟ್​ನಲ್ಲಿ ಸ್ಟೇ ತಗೊಂಡ್ರು. ಆದ್ರೆ ನಾವು ಸ್ಟೇ ತಗೊಂಡಿಲ್ಲ. ಇತರ ಪಿತೂರಿ ಮಾಡಿದವರೆಲ್ಲಾ ಸತ್ಯ ಹರಿಶ್ಚಂದ್ರರಾ? ಮನುಷ್ಯನಲ್ಲಿ ಕೆಲವು ಸಹಜ ಗುಣಗಳಿರುತ್ತವೆ. ಹಾಗಾಗಿ ನಾವು ಎಚ್ಚರದಿಂದ ಇರಬೇಕು ಎಂದು ಹೆಚ್​ ಡಿಕೆ ಹೇಳಿದ್ರು.

ನಾನು ಯಾಕೆ ಒಪ್ಪಂದ ಮಾಡಿಕೊಳ್ಳಲಿ: ಹೆಚ್​ಡಿಕೆ ಕಾಂಗ್ರೆಸ್ ಮೇಲೆ‌ ಸಾಫ್ಟ್ ಕಾರ್ನರ್ ವಿಚಾರವಾಗಿ ಮಾತನಾಡಿ, ನಾನು ಯಾವುದೇ ಪಕ್ಷದ ಮೇಲೂ ಸಾಪ್ಟ್ ಕಾರ್ನರ್ ಇಲ್ಲ ಎಂದರು. ವರುಣಾದಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾಕೆ ಒಪ್ಪಂದ ಮಾಡಿಕೊಳ್ಳಲಿ. ಮಾಜಿ ಶಾಸಕನನ್ನು ನಿಲ್ಲಿಸಿದ್ದೇನೆ, ಗೆಲ್ಲಿಸಿಕೊಂಡು ಬರ್ತಿವಿ. ನಮ್ಮ ಅಭ್ಯರ್ಥಿಯ ಗೆಲುವು ಮುಖ್ಯ ಹೊರತು, ಇನ್ನೊಬ್ಬರ ಅಭ್ಯರ್ಥಿಯನ್ನು ಸೋಲಿಸುವುದಕ್ಕಾಗಲಿ, ಗೆಲ್ಲಿಸುವುದಕ್ಕಾಗಲಿ ಅಭ್ಯರ್ಥಿಯನ್ನು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ತುಮಕೂರಿನಲ್ಲಿ ದೇವೇಗೌಡ್ರು ಸೋಲಲು ಕಾಂಗ್ರೆಸ್ ಕಾರಣ. ಅಂತವರು, ಇಂತವರು ಅಂತಾ ಯಾರ ಹೆಸರು ಹೇಳಲ್ಲ ಎಂದು ತಿಳಿಸಿದರು. ಮಾಜಿ ಶಾಸಕ ಷಫಿ ಅಹಮದ್ ಪಕ್ಷ ಸೇರ್ಪಡೆ ಆಗುವ ನಿರ್ಧಾರ ಮಾಡಿದಾಗ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಮಾಡೋದು ಬೇಡ ತುಮಕೂರಿನಲ್ಲಿಯೇ ಈ ಕಾರ್ಯಕ್ರಮ ಮಾಡೋಣ ಎಂದಿದ್ದೆ ಎಂದು ಹೇಳಿದರು.

ಕುಟುಂಬ ರಾಜಕೀಯದ ಆರೋಪ ಮಾಡ್ತಾರೆ:ಇವತ್ತು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆದಿದೆ. ನಾನು ಹನ್ನೊಂದು ಕ್ಷೇತ್ರದ ಅಭ್ಯರ್ಥಿಗಳಿಗೆ ಹೇಳ್ತಿನಿ. ಷಫಿ ಅಹಮದ್ ಅವರ ಶಕ್ತಿಯನ್ನ ಸರಿಯಾಗಿ ಬಳಸಿಕೊಂಡರೆ, ನಾವು ಹನ್ನೊಂದಕ್ಕೆ ಹನ್ನೊಂದು ಕ್ಷೇತ್ರವನ್ನ ಗೆಲ್ಲೋದ್ರಲ್ಲಿ ಡೌಟಿಲ್ಲ ಎಂದರು. ದೇವೇಗೌಡರು ಮೊನ್ನೆ ಜಿಲ್ಲೆಗೆ ಬಂದು ಒಂದು ಮನವಿ ಮಾಡಿ ಹೋಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್​ನವರು ನಮ್ಮ ಪಕ್ಷದ ಬಗ್ಗೆ ಕುಟುಂಬ ರಾಜಕೀಯದ ಆರೋಪ ಮಾಡ್ತಾರೆ ಎಂದು ಹೇಳಿದರು. ಆದ್ರೆ ಒಬ್ಬ ದಲಿತ ವ್ಯಕ್ತಿಯನ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿದ್ದು ದೇವೇಗೌಡರು. ಬೋರ್ಡ್, ಕಾರ್ಪೊರೇಷನ್ ಸ್ಥಾನ ಕೇಳಿದ್ದ ಭಾಸ್ಕರಪ್ಪ ಅವರನ್ನ ಪಾರ್ಲಿಮೆಂಟ್​ಗೆ ಕಳಿಸಿದ್ದು ದೇವೇಗೌಡರು ಎಂದು ತಿಳಿಸಿದ್ರು.

ಕೋದಂಡರಾಮಯ್ಯ ಅವರು ದೇವೇಗೌಡರ ಜೊತೆ ಇರುವವರೆಗೂ ಅವರ ಸಮುದಾಯಕ್ಕೆ ಎಲ್ಲಾ ರೀತಿಯ ಬೆಂಬಲ ಕೊಟ್ಟಿದ್ರು. ಎರಡು ರಾಷ್ಟ್ರೀಯ ಪಕ್ಷಗಳು ಮತ ಪಡೆಯುವ ಸಲುವಾಗಿ ಸಮುದಾಯಗಳ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿವೆ ಎಂದು ಹೇಳಿದರು.

ಯಡಿಯೂರಪ್ಪ ಬಿಜೆಪಿಯಲ್ಲಿ ಇರ್ತಾನೆ ಇರ್ಲಿಲ್ಲ: ಯಡಿಯೂರಪ್ಪನವರು ಶೆಟ್ಟರ್ ಅವರನ್ನು ಸೋಲಿಸಿಯೇ ಸೋಲಿಸುತ್ತೇನೆ ಅಂತಾರೆ. ಜಗದೀಶ್​​ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು ತಪ್ಪು ಅನ್ನೋ ಥರ ಮಾತಾಡ್ತಾರೆ. ಆದರೆ 2006ರಲ್ಲಿ ಯಡಿಯೂರಪ್ಪ ನಮ್ಮ ಬಳಿ ಬಂದು ನನಗೆ ಒಂದು ಮಂತ್ರಿ ಸ್ಥಾನ ನೀಡಿದ್ರೆ ಬಿಜೆಪಿ ಬಿಟ್ಟು ಜೆಡಿಎಸ್ ಸೇರ್ತೀನಿ ಅಂದಿದ್ರು. ನಾನು ಆಗ ಒಪ್ಪಿದ್ದಿದ್ರೆ ಈಗ ಯಡಿಯೂರಪ್ಪ ಬಿಜೆಪಿಯಲ್ಲಿ ಇರ್ತಾನೆ ಇರ್ಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ರು.

ಇನ್ನೂ ಕೂಡ ಸಮೀಕ್ಷೆಗಳು ನಮ್ಮ ಪಕ್ಷವನ್ನ 26-29ರಲ್ಲಿಯೇ ಇಟ್ಟಿವೆ. ನಾವು 5-10 ಕೋಟಿ ಕೊಟ್ಟಿದ್ರೆ ನಮ್ಮದೂ ಹೆಚ್ಚಾಗಿರ್ತಿತ್ತೋ ಏನೋ.
ಆದ್ರೆ ನಮ್ಮ ಬಳಿ ಹಣ ಇಲ್ವಲ್ಲ, ನಾನು ಕೊಟ್ಟಿದ್ರೆ 29 ಇದ್ದಿದ್ದು 129 ಆಗುತ್ತೆ ಎಂದರು. ಇನ್ನೂ ಸರಿಯಾಗಿ ನಾಮಿನೇಷನ್ ವಿಥ್ ಡ್ರಾ ಆಗಿಲ್ಲ. ಆಗಲೇ ಒಂದು ಚಾನಲ್ ನಲ್ಲಿ ಒಂದು ಪಕ್ಷಕ್ಕೆ 116 ಸೀಟು ಕೊಟ್ಟಿದೆ. ನನಗೆ ನೂರಕ್ಕೆ ನೂರು ನಂಬಿಕೆಯಿದೆ. ತುಮಕೂರು ಜಿಲ್ಲೆಯಲ್ಲಿ ಹನ್ನೊಂದಕ್ಕೆ ಹನ್ನೊಂದು ಕ್ಷೇತ್ರಗಳಲ್ಲಿ ಜನರು ನಮ್ಮನ್ನ ಬೆಂಬಲಿಸ್ತಾರೆ ಎಂದು ಹೆಚ್​ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ, ರೈತ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ತೀನಿ: ಹೆಚ್​ಡಿಕೆ

ABOUT THE AUTHOR

...view details