ಬೆಂಗಳೂರು: ತುಮಕೂರಿನ ಮರಳೂರು ಗ್ರಾಮದ ಸರಸ್ವತಿಪುರ ಬಡಾವಣೆಯಲ್ಲಿ ಪಾರ್ಕ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ಏಪ್ರಿಲ್ನೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್ಗೆ ನಗರ ಪಾಲಿಕೆ ಭರವಸೆ ನೀಡಿದೆ.
ಸರಸ್ವತಿಪುರ ಬಡಾವಣೆಯಲ್ಲಿ ಪಾರ್ಕ್ಗೆ ಮೀಸಲಿಟ್ಟಿದ್ದ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಡಿ.ವಿ.ಗಂಗಯ್ಯ ಸೇರಿದಂತೆ ಆರು ಮಂದಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ವಿಚಾರಣೆ ನಡೆಸಿದರು. ವಿಚಾರಣೆಗೆ ಹಾಜರಾದ ತುಮಕೂರು ನಗರ ಪಾಲಿಕೆ ಪರ ವಕೀಲರು, ಪಾರ್ಕ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. 2022ರ ಅ.18ರಂದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. 2023ರ ಏ.18ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಕ್ಷೆಯ ಪ್ರಕಾರವೇ ಬಡಾವಣೆಯಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.