ಕರ್ನಾಟಕ

karnataka

ತುಮಕೂರು ಹೆದ್ದಾರಿಯಲ್ಲಿ ಲಾರಿ ಚಾಲಕರಿಂದ ಲಂಚ: ಎಎಸ್‌ಐ, ಜೀಪ್‌ ಚಾಲಕ ಸಸ್ಪೆಂಡ್‌- ವಿಡಿಯೋ ವೈರಲ್

By

Published : Jun 9, 2023, 5:49 PM IST

Updated : Jun 9, 2023, 6:38 PM IST

ಪೊಲೀಸರು ಲಾರಿ ಚಾಲಕರಿಂದ ಲಂಚ ಪಡೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Suspension of two police officers took bribes
ಹೆದ್ದಾರಿಯಲ್ಲಿ ಲಾರಿ ಚಾಲಕರಿಂದ ಲಂಚ ಪಡೆಯುತ್ತಿದ್ದ ಇಬ್ಬರು ಪೊಲೀಸ್

ಹೆದ್ದಾರಿಯಲ್ಲಿ ಲಾರಿ ಚಾಲಕರಿಂದ ಲಂಚ ಪಡೆಯುತ್ತಿದ್ದ ವಿಡಿಯೋ ವೈರಲ್

ತುಮಕೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ವಿಡಿಯೋ ಬಾರಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯ ವಿರುದ್ಧ ಅಮಾನತು ಆದೇಶ ಹೊರಡಿಸಿ ಕಠಿಣ ಕ್ರಮ ಕೈಗೊಂಡಿದೆ. ಓರ್ವ ಎಎಸ್ಐ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕಳ್ಳಂಬೆಳ್ಳ ಠಾಣೆಯ ಎಎಸ್ಐ ಚಿದಾನಂದ ಸ್ವಾಮಿ, ಹಾಗೂ ಪೊಲೀಸ್ ಜೀಪ್ ಚಾಲಕ ಚಿಕ್ಕ ಹನುಮಯ್ಯ ಅಮಾನತು ಆಗಿದ್ದಾರೆ. ತುಮಕೂರು ಎಸ್​ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಆದೇಶ ಹೊರಡಿಸಿದ್ದಾರೆ.

ಶಿರಾ ತಾಲೂಕಿನ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ, ಲಾರಿಗಳನ್ನು ತಡೆದು ಪೊಲೀಸರು ಹಣ ವಸೂಲಿ ಮಾಡುತ್ತಿದ್ದರು. 200, 300 ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಪೊಲೀಸರು, ಲಾರಿ ಚಾಲಕರಿಂದ ಹಣ ಪಡೆಯುವ ದೃಶ್ಯ ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ಹಣ ಪಡೆಯುತ್ತಿದ್ದ ಇಬ್ಬರು ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದ ಸಾರ್ವಜನಿಕರು, ಪೊಲೀಸರು ಹಣ ಪಡೆಯುವ ದೃಶ್ಯ ಶೂಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಶಿರಾ ಪೊಲೀಸ್ ಇನ್​ಸ್ಪೆಕ್ಟರ್​ಗೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಸೂಚನೆ ನೀಡಿದ್ದರು. ವರದಿಯಲ್ಲಿ ಪೊಲೀಸರು ಹಣ ಪಡೆಯುವುದು ಸಾಬೀತಾದ ಹಿನ್ನೆಲೆಯಲ್ಲಿ ಚಿದಾನಂದ ಸ್ವಾಮಿ ಹಾಗೂ ಚಿಕ್ಕಹನುಮಯ್ಯರನ್ನು ಅಮಾನತು ಮಾಡಲಾಗಿದೆ.

ಪ್ರಕರಣದ ಸಂಪೂರ್ಣ ವಿವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ, ಚಾಲಕರಿಂದ ಹಣ ವಸೂಲಿ ಮಾಡುತ್ತಿರುವುದನ್ನು ಅದೇ ದಾರಿಯಲ್ಲಿ ವಾಹನವೊಂದರಲ್ಲಿ ಹೋಗುತ್ತಿದ್ದ ಸಾರ್ವಜನಿಕರು ದೂರದಿಂದಲೇ ವಿಡಿಯೋ ಮಾಡಿದ್ದಾರೆ. ಹಣ ತೆಗೆದುಕೊಳ್ಳುತ್ತಿದ್ದಂತೆ ಪೊಲೀಸ್​ ಜೀಪ್​ ಹತ್ತಿರ ಹೋದ ಸಾರ್ವಜನಿಕರು, ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಲಾರಿ ಚಾಲಕರಿಂದ ತೆಗೆದುಕೊಂಡಿರುವ ಹಣ ಹಿಂತಿರುಗಿಸುವಂತೆ ಹೇಳಿದ್ದಾರೆ. ಹಣ ಹಿಂತಿರುಗಿಸಲು ಹೇಳುತ್ತಿದ್ದಂತೆ, ಪೊಲೀಸರು ಜೀಪು ಸ್ಟಾರ್ಟ್​ ಮಾಡಿ ಹೊರಡಲು ಸಿದ್ಧರಾಗಿದ್ದಾರೆ. ಆದರೆ ಸಾರ್ವಜನಿಕರು ಅವರನ್ನು ತಡೆದು ನಿಲ್ಲಿಸಿ, ಹಣ ವಾಪಸ್​ ನೀಡುವಂತೆ ಹೇಳಿದ್ದಾರೆ.

ಯಾವ ಠಾಣೆಯ ಸಿಬ್ಬಂದಿ, ಹೆಸರೇನು ಎಂದು ಸಾರ್ವಜನಿಕರು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಹಿಂದೇಟು ಹಾಕಿದ್ದಾರೆ. ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರೆ, ಮುಖಕ್ಕೆ ಕೈ ಅಡ್ಡ ಹಿಡಿಯುತ್ತಿದ್ದ ಪೊಲೀಸ್​ ಸಿಬ್ಬಂದಿಗೆ ಸಾರ್ವಜನಿಕರು ಕ್ಲಾಸ್​ ತೆಗೆದುಕೊಂಡಿದ್ದಾರೆ. ಕಾನೂನನ್ನು ಕಾಪಾಡಬೇಕಾದ ಪೊಲೀಸರೇ ಈ ರೀತಿ ಲಂಚ ತೆಗೆದುಕೊಂಡರೆ ಹೇಗೆ? ಕ್ರಿಮಿನಲ್​ಗಳನ್ನು ಹಿಡಿಯಬೇಕಾದವರೇ ಹೀಗೆ ಕ್ರಿಮಿನಿಲ್​ ಕೆಲಸ ಮಾಡ್ತೀದೀರಾ ಎಂದು ಪ್ರಶ್ನಿಸುತ್ತಾ ಹತ್ತಿರ ಹೋದಂತೆ ಮುಖ ಮುಚ್ಚಿಕೊಂಡಿದ್ದಾರೆ.

ಅಲ್ಲಿದ್ದವರೆಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸ್​ ಸಿಬ್ಬಂದಿ ತಪ್ಪಾಯ್ತು, ಇದೊಂದ್ಸಲ ಬಿಟ್ಟುಬಿಡಿ, ಏನೋ ಒಂದ್ಸಲ ತಪ್ಪಾಗಿದೆ ನಾವು ದಿನಾ ಬರೋರಲ್ಲ, ಯಾವಾಗ್ಲೋ ಬಂದಿದ್ದು ಎಂದು ಸಾರ್ವಜನಿಕರ ಮುಂದೆ ಕ್ಷಮೆ ಯಾಚಿಸಿದ್ದಾರೆ. ಸಾರ್ವಜನಿಕರು ನಿರಂತರವಾಗಿ ಬಯ್ಯುತ್ತಿದ್ದರೆ, ಪೊಲೀಸ್​ ಸಿಬ್ಬಂದಿ ನಿರಂತರವಾಗಿ ತಪ್ಪಾಯ್ತು ಎಂದು ಕೇಳಿಕೊಳ್ಳುತ್ತಿದ್ದರು. ನಂತರ ಲಾರಿ ಚಾಲಕರನ್ನು ಹತ್ತಿರ ಕರೆದು ಸಾರ್ವಜನಿಕರು ಅವರಿಗೂ, ನೀವು ರೈತರ ಮಕ್ಕಳಾಗಿ ಯಾಕೆ ಲಂಚ ಕೊಡುತ್ತೀರಾ, ಅಡ್ಡ ದಾರಿಯಲ್ಲಿ ಹೋಗದೆ ನ್ಯಾಯವಾಗಿ ದುಡಿಯುತ್ತಿದ್ದೀರಾ, ಯಾಕೆ ಲಂಚ ಕೊಡಬೇಕು ಎಂದು ಅವರಿಗೂ ಬುದ್ಧಿ ಹೇಳಿದ್ದಾರೆ.

ಇದನ್ನೂ ಓದಿ:ಲಾರಿ ಚಾಲಕನಿಗೆ ಬೂಟು ಕಾಲಿಂದ ಒದ್ದ ಟ್ರಾಫಿಕ್​ ಹೆಡ್​ ಕಾನ್ಸ್​ಟೇಬಲ್​ ​: ವಿಡಿಯೋ ವೈರಲ್​

Last Updated : Jun 9, 2023, 6:38 PM IST

ABOUT THE AUTHOR

...view details