ತುಮಕೂರು: ಸುಪ್ರೀಂಕೋರ್ಟ್ ತೀರ್ಪಿನನ್ವಯ ರಾಜ್ಯ ಸರಕಾರ ಎಸ್ಸಿ-ಎಸ್ಟಿ ನೌಕರರ ಹಿಂಬಡ್ತಿ ರದ್ದು ಮಾಡಿ ಆದೇಶ ಹೊರಡಿಸಿದೆ. ಆದರೂ ಸಹ ಲೋಕೋಪಯೋಗಿ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಿಂಬಡ್ತಿ ರದ್ದಾಗಿರುವ ನೌಕರರಿಗೆ ಸೂಕ್ತ ಸ್ಥಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9.2.2017 ರಲ್ಲಿ ಎಸ್ಸಿ-ಎಸ್ಟಿ ನೌಕರರ ಬಡ್ತಿ ಮೀಸಲಾತಿ ಬಗ್ಗೆ ಬಂದಿದ್ದ ವ್ಯತಿರಿಕ್ತ ತೀರ್ಪಿನಿಂದ 3,799 ಮಂದಿ ವಿವಿಧ ಇಲಾಖೆಯ ನೌಕರರು ಹಿಂಬಡ್ತಿ ಅನುಭವಿಸಬೇಕಾಯಿತು. ಬುದ್ಧಿಜೀವಿಗಳು, ಹೋರಾಟಗಾರರು ನಿರಂತರ ಹೋರಾಟ ಹಾಗೂ ಜನಪ್ರತಿನಿಧಿಗಳ ಬೆಂಬಲದಿಂದಾಗಿ ಈ ಕಾಯ್ದೆ ಜಾರಿಯಾಗಿದೆ ಎಂದರು. ರಾಜ್ಯದಲ್ಲಿ 85,000 ಎಸ್ಸಿ ನೌಕರರು, 20,000 ಎಸ್ಟಿ ನೌಕರರು ಸೇರಿ ಒಟ್ಟು 1.05 ಲಕ್ಷ ನೌಕರರಿದ್ದಾರೆ. ಈ ಪೈಕಿ 3,799 ಮಂದಿ ನೌಕರರಿಗೆ ಹಿಂಬಡ್ತಿಯಾದ ಸಂದರ್ಭದಲ್ಲಿ 13 ಜನ ನೌಕರರು ಆತಂಕಕ್ಕೆ ಒಳಗಾಗಿ ಹೃದಯಾಘಾತಕ್ಕೀಡಾದರು. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿದ್ದ ಎಸ್ಸಿ-ಎಸ್ಟಿ ನೌಕರರು ಕಳೆದ 27 ತಿಂಗಳಿನಿಂದ ನಿರಂತರ ಹೋರಾಟ ಮಾಡಿರೋದಕ್ಕೆ ಜಯ ದೊರಕಿದೆ ಎಂದರು.