ತುಮಕೂರು: ನಗರದ ಹೊನ್ನೇನಹಳ್ಳಿಯ ಗೋಪಾಲಕೃಷ್ಣ ದೇವಾಲಯದ ಬಳಿಯಿರುವ ಶಾಸನದಲ್ಲಿ ಶ್ರೀಕೃಷ್ಣದೇವರಾಯನ ಮರಣದ ಬಗ್ಗೆ ಸಂಪೂರ್ಣ ಮಾಹಿತಿ ದೊರೆತಿದೆ ಎಂದು ಇತಿಹಾಸ ಸಂಶೋಧಕ ಕೆ.ಆರ್. ನರಸಿಂಹನ್ ತಿಳಿಸಿದ್ದಾರೆ.
ಇತಿಹಾಸ ಸಂಶೋಧಕರಾದ ಕೆ.ಆರ್. ನರಸಿಂಹನ್ ಮಾತನಾಡಿದರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣದೇವರಾಯನ ಹುಟ್ಟು ಹಾಗೂ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಅಧಿಕೃತವಾದ ಮಾಹಿತಿ ಎಲ್ಲಿಯೂ ಇಲ್ಲ. ಯಾವುದೇ ಇತಿಹಾಸವನ್ನು ರಚಿಸಬೇಕಾದರೆ ಪ್ರಮುಖವಾಗಿ ನಮಗೆ ಶಾಸನಗಳು ಅಗತ್ಯವಾಗಿರುತ್ತವೆ. ಅದೇ ರೀತಿಯಾಗಿ ಜಿಲ್ಲೆಯ ಹೊನ್ನೇನಹಳ್ಳಿಯಲ್ಲಿ ದೊರೆತಿರುವ ಶಾಸನವು ಶ್ರೀಕೃಷ್ಣದೇವರಾಯನ ಮರಣದ ಬಗ್ಗೆ ನಿಖರವಾದ ಮಾಹಿತಿ ನೀಡುತ್ತಿದೆ ಎಂದರು.
'ಶುಭಮಸ್ತು ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರ್ಷ 1452 ವಿರೋಧಿ ಸಂವತ್ಸರದ ಕಾರ್ತಿಕ ಶುದ್ಧ 15ಲೂ ಶ್ರೀ ಶ್ರೀಮನ್ ಮಹಾನ್ ರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪುತ್ರ ಶ್ರೀ ವೀರಕೃಷ್ಣರಾಯ ಮಹಾರಾಯರು ಯೀ ತಥಾ ತಿಥಿ ಯಲು ಅಸ್ತಮಯರಾಗಿ(ರ)ಲಾಗಿ ಪೆನುಗೂಂಡೆ ರಾಜ್ಯದ ಆನೆಬಿದ್ದ ಸರಿಯಸ್ತಳದ ಮರುಗಲು ನಾಡೊಳಗಣ ತುಮುಕೂರು ಸೀಮೆಯಳಗಣ ಹೊಂನೇನಹಳ್ಳಿ ಗ್ರಾಮವನು ತುಮುಕೂರ ಸೀಮೆ ಗೌಡ ಪ್ರಜೆಗಳು(ತಿಂ) ಮಣ್ಣನಾಯಕರೂ ಅವರ ಕಾರ್ಯಕೆಕರ್ತಯರಾದ ತುಮುಕೂರ ವೀರಪ್ರಸಂನ ಹನುಮಂತ ವರ ಪೂಜೆಗೆ ಧಾರೆಯೆರೆದು' ಈ ರೀತಿಯಾಗಿ ಶಾಸನದಲ್ಲಿ ದಾಖಲಾಗಿದೆ ಎಂದು ತಿಳಿಸಿದರು. ಓದಿ:ಪ್ರತಾಪ್ ಸಿಂಹ ಹೇಳಿಕೆಗೆ ತನ್ವೀರ್ ಸೇಠ್ ತಿರುಗೇಟು.. ಮಂಗಗಳಿಗೆ ಹೋಲಿಸಿ ವ್ಯಂಗ್ಯ
ಈ ಶಾಸನದಲ್ಲಿ ಒಟ್ಟು 15 ಸಾಲುಗಳು ಕಂಡುಬರುತ್ತವೆ. ಅದರಲ್ಲಿ 12 ಸಾಲುಗಳಲ್ಲಿ ಶಾಸನದ ಬಗ್ಗೆ ಮಾಹಿತಿಯಿದ್ದು, ಉಳಿದ ಸಾಲುಗಳಲ್ಲಿ ಶಾಸನವನ್ನು ಸಂರಕ್ಷಿಸುವ ಬಗ್ಗೆ ತಿಳಿಸಲಾಗಿದೆ ಎಂದರು. ಕ್ರಿ.ಶ 1529 ಅಕ್ಟೋಬರ್ 17ರಂದು ಚಂದ್ರಗ್ರಹಣವಾಗುತ್ತದೆ. ಆ ದಿನವೇ ಶ್ರೀಕೃಷ್ಣದೇವರಾಯರು ಸ್ವರ್ಗಸ್ಥರಾಗಿದ್ದಾರೆ ಎಂಬುದು ಈ ಶಾಸನದಲ್ಲಿ ಕಂಡುಬರುತ್ತದೆ. ಈ ಶಾಸನವನ್ನು ಸಂರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎಂದರು.