ತುಮಕೂರು : ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್ನಲ್ಲಿ ನಿರ್ಮಿಸಲಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 6ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಘಟಕಕ್ಕೆ 2016ರಲ್ಲಿ ಮೋದಿ ಶಂಕುಸ್ಥಾಪನೆ ಮಾಡಿದ್ದರು.
610 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ಹೊಸ ಹೆಲಿಕಾಪ್ಟರ್ ತಯಾರಿಕಾ ಘಟಕ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ಇಂಡೋ - ರಷ್ಯನ್ ಜಂಟಿ ಯೋಜನೆಯಾಗಿರುವ KA 226T, ಅವಳಿ ಎಂಜಿನ್ ಹೆಲಿಕಾಪ್ಟರ್ ಮತ್ತು 3-ಟನ್ ಹೊಸ ಪೀಳಿಗೆಯ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ಗಳನ್ನು ಪ್ರತ್ಯೇಕವಾಗಿ ತಯಾರಿಸಲು ಉದ್ದೇಶಿಸಲಾಗಿದೆ. ಗುಬ್ಬಿಯಲ್ಲಿರುವ ಈ ಚಾಪರ್ ಘಟಕವು ಒಂದು ವರ್ಷದಲ್ಲಿ 30 ಹೆಲಿಕಾಪ್ಟರ್ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಅಲ್ಲದೇ 175 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ತಯಾರಿಕೆ ನಿರೀಕ್ಷಿಸಲಾಗುತ್ತಿದೆ. ಬೆಂಗಳೂರು ಮತ್ತು ತುಮಕೂರು ವಿಭಾಗಗಳಿಂದ ಏಕಕಾಲದಲ್ಲಿ ಈ ಹೆಲಿಕಾಪ್ಟರ್ಗಳನ್ನು ಉತ್ಪಾದಿಸಲಾಗುತ್ತದೆ.
ಇತ್ತೀಚೆಗೆ ರಕ್ಷಣಾ ಸಚಿವಾಲಯವು 12 LUH ಗಳನ್ನು ಖರೀದಿಸಲು ಆದೇಶ ನೀಡಿದೆ. ಒಟ್ಟು 500 ಸುಧಾರಿತ ಲಘು ಹೆಲಿಕಾಪ್ಟರ್ಗಳನ್ನು ತಯಾರಿಸಲು Kamov - 226T ಲೈಟ್ ಹೆಲಿಕಾಪ್ಟರ್ ಅಭಿವೃದ್ಧಿಪಡಿಸುವುದಕ್ಕಾಗಿ ರಷ್ಯಾದೊಂದಿಗೆ ಸಹಯೋಗ ವಹಿಸಲು ಭಾರತವು ಮುಂದಾಗಿದೆ.
ಫೆಬ್ರವರಿ 6 ರಂದು ಪ್ರಧಾನಿಗಳಿಂದ ಘಟಕ ಉದ್ಘಾಟನೆ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಒಂದು ತಿಂಗಳ ಅಂತರದಲ್ಲಿ ಮೂರನೇ ಬಾರಿಗೆ ರಾಜ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕದ ಬಳಿಕ ದಕ್ಷಿಣ ಕರ್ನಾಟಕದತ್ತ ಮೋದಿ ಚಿತ್ತಹರಿಸಿದ್ದು, ಇನ್ನೊಂದೆಡೆ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲೂ ಮೋದಿ ಮತ ಭೇಟೆಗೆ ರೆಡಿಯಾಗಿದ್ದಾರೆ. ಇದೇ ವೇಳೆ, ಜಲಜೀವನ್ ಮಿಷನ್ನ ಹಲವು ಯೋಜನೆಗಳ ಶಿಲಾನ್ಯಾಸವನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.