ತುಮಕೂರು:ಇಲ್ಲಿನ ಕೊರಟಗೆರೆ ತಾಲೂಕಿನ ಯಲಚಿಗೆರೆ ಗ್ರಾಮದಲ್ಲಿ ಎರಡು ಸಮುದಾಯದ ನಡುವೆ ನಡೆಯುತ್ತಿರುವ ಭೂ ವಿವಾದವನ್ನು ಬಗೆಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ನಿವಾಸಿಗಳು ಕೊರಟಗೆರೆ ತಾಲೂಕು ಚಿನ್ನಹಳ್ಳಿಯಲ್ಲಿ ನಡೆಯುತ್ತಿದ್ದ ಜನಸಂಪರ್ಕ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎದುರೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಡಿಸಿಎಂ ಪರಮೇಶ್ವರ್ ಎದುರೇ ಅಧಿಕಾರಿಗಳನ್ನು ನಿಂದಿಸಿದ ಭೂ ವಿವಾದದಲ್ಲಿ ಸಿಲುಕಿದ ಸಂತ್ರಸ್ತರು. ಜನಸಂಪರ್ಕ ಸಭೆ ಆರಂಭವಾಗುತ್ತಿದ್ದಂತೆ ಗ್ರಾಮದ ರಂಗಪ್ಪ ಸೇರಿದಂತೆ ನಾಲ್ವರು ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಗಮನಕ್ಕೆ ಭೂ ವಿವಾದ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದನ್ನು ಹೇಳಿದರು.
ಜಮೀನು ಖರೀದಿ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ವಿವಾದವಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದು ವಿವಾದ ಬಗೆಹರಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಗ್ರಾಮದಲ್ಲಿ ಮತ್ತೊಂದು ಸಮುದಾಯದ ತಿಮ್ಮರಾಜು, ನಾರಾಯಣ ಎಂಬುವವರ ಪರವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ಹಾಗಾಗಿ ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.