ತುಮಕೂರು: ಹಿಜಾಬ್, ಜಟ್ಕಾ ಕಟ್ ಬೇಕಿಲ್ಲದ ವಿಚಾರಗಳು. ರಾಜ್ಯದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಾರ್ವಜನಿಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿದೆ, ಅಭಿವೃದ್ಧಿ ಕುಠಿಂತಗೊಂಡಿದೆ. ಈ ಬೆನ್ನಲ್ಲೇ ಕೆಲ ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಬಿಜೆಪಿಯವರು ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಅಂತಾ ಶಾಸಕ ಎಸ್ ಆರ್ ಶ್ರೀನಿವಾಸ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ವಿಚಾರಗಳ ಮೇಲೆ ಚರ್ಚೆ ಆಗಬೇಕೋ ಅದು ಆಗುತ್ತಿಲ್ಲ. ಬೆಲೆ ಏರಿಕೆ ವಿಚಾರ ಮರೆಮಾಚಲು ಯಾವುದೋ ಸ್ವಾಮೀಜಿಗಳನ್ನು ಕರೆದುಕೊಂಡು ಬಂದು ಹೇಳಿಕೆ ಕೊಡಿಸುತ್ತಿದ್ದಾರೆ. ನಿನ್ನೆ ಒಬ್ಬ ಸ್ವಾಮೀಜಿ ಧಾರ್ಮಿಕ ಕೇಂದ್ರಗಳಿಗೆ ಮುಸ್ಲಿಂ ಡ್ರೈವರ್ ಕರೆದುಕೊಂಡು ಹೋಗ್ಬೇಡಿ ಎಂದಿದ್ದಾರೆ. ಹೀಗೆಲ್ಲಾ ಅನಾವಶ್ಯಕ ಹೇಳಿಕೆ ನೀಡಬಾರದು. ಕಾವಿಬಟ್ಟೆ ತೊಟ್ಟವರು ಅವರವರ ಕೆಲಸ ಮಾಡ್ಕೊಂಡು ಇದ್ರೆ ದೇಶ ಶಾಂತವಾಗಿರುತ್ತದೆ ಎಂದರು.