ಕರ್ನಾಟಕ

karnataka

ETV Bharat / state

Tumakuru: ಸಿದ್ದಗಂಗಾ ಮಠ ಹಿಂಭಾಗದ ಗೋ ಕಟ್ಟೆಗೆ ಬಿದ್ದು ನಾಲ್ವರು ಸಾವು

Tumakuru news: ಸಿದ್ದಗಂಗಾ ಮಠದ ಹಿಂಭಾಗದ ಗೋ ಕಟ್ಟೆಯಲ್ಲಿ ಈಜಲು ತೆರಳಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ನಾಲ್ವರು ಮೃತಪಟ್ಟಿದ್ದಾರೆ.

By

Published : Aug 13, 2023, 7:04 PM IST

ಸಿದ್ದಗಂಗಾ ಮಠದ ಹಿಂಭಾಗದ ಗೋ ಕಟ್ಟೆಗೆ ಬಿದ್ದು ನಾಲ್ವರು ಮೃತ
ಸಿದ್ದಗಂಗಾ ಮಠದ ಹಿಂಭಾಗದ ಗೋ ಕಟ್ಟೆಗೆ ಬಿದ್ದು ನಾಲ್ವರು ಮೃತ

ಸಿದ್ದಗಂಗಾ ಮಠದ ಹಿಂಭಾಗದ ಗೋ ಕಟ್ಟೆಗೆ ಬಿದ್ದು ನಾಲ್ವರು ಸಾವು

ತುಮಕೂರು :ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಯಲ್ಲಿ (ಕೃಷಿ ಹೊಂಡದಂತಿರುವ ಕೆರೆ) ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ಇಂದು ನಡೆದಿದೆ. ಬಾಗಲಗುಂಟೆಯ ಲಕ್ಷ್ಮೀ (33) ಹಾಗೂ ಯಾದಗಿರಿ ಜಿಲ್ಲೆಯ ಅಫಜಲಪುರದ ಮಹದೇವಪ್ಪ (44) ಚಿಕ್ಕಮಗಳೂರಿನ ಶಂಕರ್ (11), ರಾಮನಗರದ ಹರ್ಷಿತ್ (11) ಮೃತರು ಎಂದು ತಿಳಿದುಬಂದಿದೆ.

ರಂಜಿತ್​, ಶಂಕರ್​, ಹರ್ಷಿತ್​ ಮಠದಲ್ಲಿ 6ನೇ ತರಗತಿಯನ್ನು ಓದುತ್ತಿದ್ದರು. ರಂಜಿತ್‌ನ​ ತಾಯಿ ಲಕ್ಷ್ಮೀ ಮಗನನ್ನು ಭೇಟಿಯಾಗಲು ಮಠಕ್ಕೆ ಬಂದಿದ್ದರು. ಈ ವೇಳೆ ಅವರು ಊಟಕ್ಕೆ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಗೆ ತೆರಳಿದ್ದರು. ರಂಜಿತ್​ ಗೋ ಕಟ್ಟೆಗೆ ಈಜಲು ತೆರಳಿದ್ದಾನೆ. ಆದರೆ, ಈಜು ಸಾಧ್ಯವಾಗದೆ ಮುಳುಗಿದ್ದಾನೆ. ಇದನ್ನು ನೋಡಿದ ತಾಯಿ ನೀರಿಗೆ ಹಾರಿ ಮಗನನ್ನು ರಕ್ಷಿಸಲು ಹೋಗಿ ಆಕೆಯೂ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಇಬ್ಬರನ್ನು ಕಾಪಾಡಲು ಅಲ್ಲಿಯೇ ಇದ್ದ ಆತನ ಇಬ್ಬರು ಸ್ನೇಹಿತರಾದ ಶಂಕರ್ ಮತ್ತು ಹರ್ಷಿತ್​ ಗೋ ಕಟ್ಟೆಗೆ ತೆರಳಿದ್ದಾರೆ. ಘಟನೆಯಲ್ಲಿ ಅವರೂ ಮೃತಪಟ್ಟರು. ಮಹಾದೇವ ಎಂಬವರು ನೀರಿಗೆ ಬಿದ್ದವರನ್ನು ರಕ್ಷಿಸಲು ಧಾವಿಸಿದ್ದು, ಈಜು ಬಾರದೆ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಲ್ಲಿ ಮುಳುಗಿ ಯುವಕರು ಸಾವು: ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಗ್ರಾಮದ ಕೆರೆಯಲ್ಲಿ (ಜುಲೈ 23-2023) ನಡೆದಿತ್ತು. ಮೃತರನ್ನು ಗುಬ್ಬಿ ತಾಲೂಕಿನ ಆಡುಗೊಂಡನಹಳ್ಳಿ ಗ್ರಾಮದ ಹರೀಶ್ (31) ಯೋಗೀಶ್ (36) ಎಂದು ಗುರುತಿಸಲಾಗಿತ್ತು. ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ, ಕಡಬ ಗ್ರಾಮದ ಕೆರೆಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದು ತುಂಬಿತ್ತು. ಹೀಗಾಗಿ ಶನಿವಾರ ಸ್ನೇಹಿತರೊಂದಿಗೆ ಯುವಕರು ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಇಬ್ಬರೂ ಕಾಲು ಜಾರಿ ಕೆರೆಗೆ ಬಿದ್ದಿದ್ದರು. ಆದರೆ, ಸುತ್ತಮುತ್ತಲಿದ್ದ ಯುವಕರು ಇವರನ್ನು ಪಾರು ಮಾಡಲು ಯತ್ನಿಸಿದರೂ ಸಾಧ್ಯವಾಗದೆ ಮುಳುಗಿ ಸಾವನ್ನಪ್ಪಿದ್ದರು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೊಗೇನಕಲ್ ಫಾಲ್ಸ್​ನಲ್ಲಿ ಯುವಕರು ಸಾವು : ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಹೊಗೇನಕಲ್ ಜಲಪಾತದಲ್ಲಿ ಶನಿವಾರ ನಡೆದಿತ್ತು. ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಶಬರಿ (24) ಮತ್ತು ಅಜಿತ್ (26) ಮೃತರೆಂದು ತಿಳಿದುಬಂದಿತ್ತು.

ಇದನ್ನೂ ಓದಿ:ತುಮಕೂರು: ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ಕೆರೆಯಲ್ಲಿ ಮುಳುಗಿ ಸಾವು

ABOUT THE AUTHOR

...view details