ತುಮಕೂರು: ಬಹಳ ಕಷ್ಟಪಟ್ಟು ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸಿದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುವ ಪ್ರಯತ್ನ ಮಾಡಿದ್ದರು. ಆದ್ರೆ ಅವರ ಪಕ್ಷದವರೇ ಅವರನ್ನ ಬದಲಾಯಿಸಲು ಹೊರಟಿರೋದು ದುರಾದೃಷ್ಟಕರ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದರು.
ಸಂಪುಟ ಸಹೋದ್ಯೋಗಿಗಳೇ ಸಿಎಂ ಕೆಳಗಿಳಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರ: ಜಿ.ಪರಮೇಶ್ವರ್ - ಬಿಜೆಪಿ ಸರ್ಕಾರ
ಸಂಪುಟದಲ್ಲಿ ಇದ್ದವರೇ ಮುಖ್ಯಮಂತ್ರಿ ಅವರನ್ನು ಬದಲಾಯಿಸಲು ಹೊರಟಿದ್ದಾರೆ. ಇವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದರು.
![ಸಂಪುಟ ಸಹೋದ್ಯೋಗಿಗಳೇ ಸಿಎಂ ಕೆಳಗಿಳಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರ: ಜಿ.ಪರಮೇಶ್ವರ್ parameshwar](https://etvbharatimages.akamaized.net/etvbharat/prod-images/768-512-12515012-thumbnail-3x2-mng.jpg)
ನಗರದಲ್ಲಿ ಮಾಧ್ಯಮಳೊಂದಿಗೆ ಮಾತನಾಡಿ ಅವರು, "ಸಂಪುಟದಲ್ಲಿ ಇದ್ದವರೇ ಸಿಎಂರನ್ನು ಬದಲಾಯಿಸಲು ಹೊರಟಿದ್ದಾರೆ. ಇವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಜನರಿಗೆ ಇದರಿಂದ ಸಂಕಷ್ಟ ಆಗುತ್ತಿದೆ. ಇದನ್ನೆಲ್ಲಾ ಸರಿಪಡಿಸಿಕೊಳ್ಳಿ ಎಂದುಸಿಎಂಗೆ ನಾನು ಮೊದಲೇ ಹೇಳಿದ್ದೆ" ಎಂದರು.
ಬಿಜೆಪಿಯವರ ತಪ್ಪುಗಳು ಬಹಳಷ್ಟಿವೆ. ಅವೆಲ್ಲಾ ನಮಗೆ ಅನುಕೂಲ ಆಗಲಿದೆ. ಮಾಜಿ ಸಚಿವ ಎಂ.ಬಿ. ಪಾಟೀಲ ಮತ್ತು ಶಾಮನೂರು ಅವರು ಬೇರೆ ಬೇರೆ ಕಾರಣಗಳಿಗೆ ಯಡಿಯೂರಪ್ಪ ಅವರನ್ನು ಬೆಂಬಲಿಸಿರಬಹುದು. ಯಡಿಯೂರಪ್ಪನವರೇ ಅಧಿಕಾರ ಪೂರ್ಣ ಮಾಡಬೇಕು ಎಂಬ ಆಸೆ ನಮಗಿದೆ. ಯಾಕೆಂದರೆ ಅವರು ಅನೇಕ ತಪ್ಪುಗಳನ್ನು ಮಾಡಿದರೆ ನಮಗೆ ಅನುಕೂಲ. ಕಾಂಗ್ರೆಸ್ನವರು ಯಾವಾಗಲೂ ಚುನಾವಣೆಗೆ ಸಿದ್ಧರಿದ್ದೇವೆ ಎಂದು ಪರಮೇಶ್ವರ್ ಹೇಳಿದ್ರು.