ತುಮಕೂರು :ಈಗಾಗಲೇ ಉಸ್ತುವಾರಿ ಅರುಣ್ ಸಿಂಗ್ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ರಾರೆ ಎಂದು ಹೇಳಿದ್ದಾರೆ. ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯನೋ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯೋದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ತುಂಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತೆ. ವಿಜಯೇಂದ್ರ ಖಾಸಗಿ ಕಾರಣಕ್ಕೆ ದೆಹಲಿ ಭೇಟಿ ಮಾಡಿರಬಹುದು ಅಥವಾ ನಾಯಕರನ್ನು ಭೇಟಿ ಮಾಡಿರಬಹುದು, ಅದು ನನಗೆ ಗೊತ್ತಿಲ್ಲ ಎಂದರು. ಸಂಸದ ರಾಘವೇಂದ್ರ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿ ಸಿಎಂ ಯಡಿಯೂರಪ್ಪರನ್ನ ಕೆಳಗಿಳಿಸುವ ವಿಚಾರ ನನಗೆ ಗೊತ್ತಿಲ್ಲ. ಇದೆಲ್ಲಾ ಊಹಾಪೋಹ ಎಂದರು.
ಪರೀಕ್ಷೆ ಬರೆದಿದ್ದೇನೆ, ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂಬ ಸಚಿವ ಸಿ ಪಿ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪರೀಕ್ಷೆ ಬರೆದವರಿಗೆ ಅವರ ಹಣೆಬರಹ ಗೊತ್ತಿರತ್ತೆ. ಎಷ್ಟು ಮಾರ್ಕ್ಸ್ ಬರತ್ತೆ ಅಂತ ಅವರಿಗೆ ಗೊತ್ತಿರತ್ತೆ. ನಿಜವಾದ ಪರೀಕ್ಷೆ ಬರೆದವರು ಫೇಲಾಗಿದ್ದಾರೆ ಎಂದರು.