ತುಮಕೂರು: ಸರಗಳ್ಳತನ ಪ್ರಕರಣದಲ್ಲಿ ತೊಡಗಿದ್ದ ಕುಖ್ಯಾತ ಇರಾನಿ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಸರಗಳ್ಳತನ ಮಾಡಿದ್ದ ಇರಾನಿ ಗ್ಯಾಂಗ್ನ ಇಬ್ಬರ ಬಂಧನ: 17ಲಕ್ಷ ರೂ. ಚಿನ್ನಾಭರಣ ವಶ - Tumkur police
ಸರಗಳ್ಳತನ ಪ್ರಕರಣದಲ್ಲಿ ತೊಡಗಿದ್ದ ಕುಖ್ಯಾತ ಇರಾನಿ ಗ್ಯಾಂಗ್ನ ಇಬ್ಬರನ್ನು ವಶಕ್ಕೆ ಪಡೆದ ತುಮಕೂರು ಪೊಲೀಸರು 369 ಗ್ರಾಂ ಚಿನ್ನಾಭರಣ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರ ಅಲಿಬಾಬಾ ಹಾಗೂ ತಿಪಟೂರಿನ ಸಿರಾಜ್ ಬಂಧಿತ ಆರೋಪಿಗಳಾಗಿದ್ದಾರೆ. 2020 ರ ಡಿಸೆಂಬರ್ 21ರಂದು ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ಬೆಳವಾಡಿ ಬಳಿ ತೋಟಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ಬೆನ್ನತ್ತಿದ ಹುಳಿಯಾರು ಪೊಲೀಸರಿಗೆ ಇರಾನಿ ಗ್ಯಾಂಗಿನ ಇಬ್ಬರು ಆರೋಪಿಗಳು ಬಲೆಗೆ ಬಿದ್ದಿದ್ದರು. ಸುದೀರ್ಘ ವಿಚಾರಣೆಗೆ ಇಬ್ಬರನ್ನು ಒಳಪಡಿಸಿದಾಗ ಇವರು 8 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಹುಳಿಯಾರು, ತಿಪಟೂರು ನಗರ, ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ತಲಾ ಎರಡು ಪ್ರಕರಣ ಹಾಗೂ ಚಿಕ್ಕನಾಯಕನಹಳ್ಳಿ, ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 17,52,750 ರೂ. ಮೌಲ್ಯದ 369 ಗ್ರಾಂ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ನಗದು ಬಹುಮಾನ ವಿತರಿಸಿದ್ದಾರೆ.