ಕರ್ನಾಟಕ

karnataka

ETV Bharat / state

ಜಾತ್ರಾ ಮಹೋತ್ಸವಗಳು ಆಯೋಜನೆಯಾದ್ರೆ ಪಿಡಿಒಗಳ ಮೇಲೆ ಕ್ರಮ : ತುಮಕೂರು ಜಿಲ್ಲಾಧಿಕಾರಿ

ಬೆಂಗಳೂರಿನಿಂದ ಗ್ರಾಮಕ್ಕೆ ಬರುವವರನ್ನು ಕಡ್ಡಾಯವಾಗಿ ಟೆಸ್ಟ್​ಗೆ ಒಳಪಡಿಸಬೇಕು. ನಿತ್ಯ ಬೆಂಗಳೂರಿಗೆ ಹೋಗಿ ಬರುವವರಿಗೆ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವಂತೆ ತಿಳಿ ಹೇಳಬೇಕು ಎಂದು ನಿರ್ದೇಶಿಸಿದರು. ಗ್ರಾಮಗಳಲ್ಲಿ ಜರುಗುವ ಕುರಿ,ದನಗಳ ಸೇರಿ ವಿಶೇಷ ಸಂತೆಗಳಿಗೆ ಅವಕಾಶವಿಲ್ಲ. ಮದುವೆ, ಸಭೆ-ಸಮಾರಂಭಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಕ್ರಮಕೈಗೊಳ್ಳುವ ಜವಾಬ್ದಾರಿ ಕಾರ್ಯಪಡೆಯದ್ದೇ ಆಗಿದ್ದು, ಕೋವಿಡ್ ಹರಡದಂತೆ ಜಾಗೃತಿ ವಹಿಸಬೇಕು..

By

Published : Apr 21, 2021, 11:00 PM IST

action-will-be-taken-against-pdos-if-fairs-are-conducted-says-dc
action-will-be-taken-against-pdos-if-fairs-are-conducted-says-dc

ತುಮಕೂರು :ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಭೀತಿ ನಡುವೆಯೂ ಜಾತ್ರೆ ಹಾಗೂ ರಥೋತ್ಸವಗಳು ನಡೆದರೆ ಸಂಬಂಧಪಟ್ಟ ಪಿಡಿಒಗಳು ಮತ್ತು ಗ್ರಾಮ ಲೆಕ್ಕಿಗರೇ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಎಚ್ಚರಿಸಿದ್ದಾರೆ.

ಇವರುಗಳ ಗಮನಕ್ಕೆ ಇಲ್ಲದಂತೆ ಜಾತ್ರೆಗಳು ಆಗುತ್ತವೆ ಅಂದ್ರೆ ಅದು ನಂಬಲು ಸಾಧ್ಯವಿಲ್ಲ. ಕನಿಷ್ಟ 10 ದಿನಗಳಿಂದ ವ್ಯವಸ್ಥೆಗಳು ನಡೆಯುತ್ತಿರುತ್ತವೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮಾಡಬೇಕು, ಅದನ್ನೂ ಮೀರಿ ಆಯೋಜನೆ ಮಾಡಿದ್ರೆ ಪೊಲೀಸರಿಗೆ ದೂರು ನೀಡಬೇಕು ಎಂದಿದ್ದಾರೆ.

ಅಚಾತುರ್ಯವಾಗಿ ಅದು ನಡೆದರೆ ಸಂಬಂಧಪಟ್ಟ ಪಿಡಿಒ ಮತ್ತು ಗ್ರಾಮ ಲೆಕ್ಕಿಗರನ್ನೇ ಹೊಣೆ ಮಾಡಲಾಗುವುದು. ಅಲ್ಲದೆ ಜಾತ್ರ ಸಮಿತಿ ಮತ್ತು ಆಯೋಜಕರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಕೊರೊನಾ ನಿಯಂತ್ರಣ ಕುರಿತಂತೆ ತುಮಕೂರು ಜಿಲ್ಲಾಧಿಕಾರಿ ಮಾಹಿತಿ..

ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ನಗರ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸೋಂಕು ಗ್ರಾಮಗಳಿಗೆ ವ್ಯಾಪಿಸದಂತೆ ಗ್ರಾಮ ಪಂಚಾಯತ್‌ ಅಧ್ಯಕ್ಷರು ಮತ್ತು ಪಿಡಿಒಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿನ ಕಾರ್ಯಪಡೆಯು ಗ್ರಾಪಂ ವ್ಯಾಪ್ತಿಯ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಬಿಲ್ಕಲೆಕ್ಟರ್, ವಾಟರ್‌ಮೆನ್ ಸೇರಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಳಸಿಕೊಂಡು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಗ್ರಾಮಗಳಿಗೆ ಕೊರೊನಾ ಸುಳಿಯದಂತೆ ತಡೆಗಟ್ಟಬೇಕು ಎಂದು ನಿರ್ದೇಶಿಸಿದರು.

ಅಧಿಕಾರಿಗಳು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕೋವಿಡ್-19 ಹರಡದಂತೆ ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ನಿಯಂತ್ರಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರಲ್ಲದೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಕೋವಿಡ್ ಲಕ್ಷಣಗಳು ಕಂಡು ಬಂದವರ ಸ್ವ್ಯಾಬ್ ಸಂಗ್ರಹ ಮಾಡುವುದರೊಂದಿಗೆ, 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದರು.

ಬೆಂಗಳೂರಿನಿಂದ ಗ್ರಾಮಕ್ಕೆ ಬರುವವರನ್ನು ಕಡ್ಡಾಯವಾಗಿ ಟೆಸ್ಟ್​ಗೆ ಒಳಪಡಿಸಬೇಕು. ನಿತ್ಯ ಬೆಂಗಳೂರಿಗೆ ಹೋಗಿ ಬರುವವರಿಗೆ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವಂತೆ ತಿಳಿ ಹೇಳಬೇಕು ಎಂದು ನಿರ್ದೇಶಿಸಿದರು. ಗ್ರಾಮಗಳಲ್ಲಿ ಜರುಗುವ ಕುರಿ,ದನಗಳ ಸೇರಿದಂತೆ ವಿಶೇಷ ಸಂತೆಗಳಿಗೆ ಅವಕಾಶವಿಲ್ಲ. ಮದುವೆ, ಸಭೆ-ಸಮಾರಂಭಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಕ್ರಮಕೈಗೊಳ್ಳುವ ಜವಾಬ್ದಾರಿ ಕಾರ್ಯಪಡೆಯದ್ದೇ ಆಗಿದ್ದು, ಕೋವಿಡ್ ಹರಡದಂತೆ ಜಾಗೃತಿ ವಹಿಸಬೇಕು ಎಂದರು.

ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಅಧಿಕಾರವನ್ನು ಕಾರ್ಯಪಡೆಗೆ ನೀಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ತರಕಾರಿ, ಹೂ, ಹಣ್ಣು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೋವಿಡ್ ನಿಯಮಾವಳಿ ಪಾಲಿಸಿಕೊಂಡೇ ವ್ಯಾಪಾರ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಪಾಸಿಟಿವ್ ದೃಢಪಟ್ಟು ಹೋಂ ಐಸೋಲೇಷನ್​ನಲ್ಲಿರುವ ಸೋಂಕಿತರು ಹೊರಗಡೆ ತಿರುಗಾಡದಂತೆ ಅವರ ಮನೆಯವರಿಗೆ ಅರಿವು ಮೂಡಿಸಿ, ಸೋಂಕಿತರು ತಿರುಗಾಡದಂತೆ ಪಿಡಿಒಗಳು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ABOUT THE AUTHOR

...view details