ಬೆಂಗಳೂರು: ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹೊಸೂರು, ರಾಮನಗರ, ತುಮಕೂರು, ವೈಟ್ ಫೀಲ್ಡ್ ಮತ್ತು ಯಲಹಂಕ ರೈಲು ನಿಲ್ದಾಣಗಳಿಗೆ ಗುಣಮಟ್ಟಗಳಿಗೆ ಪ್ರಶಸ್ತಿ ವೀಡುವ ಅಂತಾರಾಷ್ಟ್ರೀಯ ಸಂಸ್ಥೆಯಿಂದ (ಐಎಸ್ಓ) ಪ್ರಮಾಣಪತ್ರ ದೊರೆತಿದೆ.
ಚೆನ್ನೈನ ಮೆ. ಕ್ವೆಸ್ಟ್ ಸರ್ಟಿಫಿಕೇಷನ್ ಸಂಸ್ಥೆಯು ನೀಡಿರುವ ಈ ಪ್ರಮಾಣ ಪತ್ರವನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿರುವ ಅಶೋಕ್ ಕುಮಾರ್ ವರ್ಮ, ಇದುವರೆಗೂ ಬೆಂಗಳೂರು ವಿಭಾಗದ 11 ರೈಲು ನಿಲ್ದಾಣಗಳಿಗೆ ಐಎಸ್ಓ 14001:2015 ಪ್ರಮಾಣಪತ್ರ ದೊರೆತಿದೆ. ಭಾರತೀಯ ಗುಣಮಟ್ಟ ಪರಿಷತ್ತಿನ ಶ್ರೇಯಾಂಕ ಪಟ್ಟಿಯಲ್ಲಿರುವ ವಿಭಾಗದ ಇತರೆ ರೈಲು ನಿಲ್ದಾಣಗಳಿಗೂ ಐಎಸ್ಓ ಪ್ರಮಾಣಪತ್ರ ಪಡೆಯಲು ಯೋಜಿಸಲಾಗಿದೆ. ಇದರಿಂದ ನೈರುತ್ಯ ರೈಲ್ವೆಯ ಸ್ಥಾನವು ಭಾರತೀಯ ಗುಣಮಟ್ಟ ಪರಿಷತ್ತು ರೈಲು ನಿಲ್ದಾಣಗಳಿಗೆ ಶುಚಿತ್ವದ ಆಧಾರದ ಮೇಲೆ ನೀಡುವ ಶ್ರೇಯಾಂಕದಲ್ಲಿ ಅಧಿಕವಾಗಲಿದೆ ಎಂದು ತಿಳಿಸಿದರು.
ಯಶವಂತಪುರ, ಬೆಂಗಳೂರು ದಂಡು, ಕೃಷ್ಣರಾಜಪುರಂ, ಬಂಗಾರಪೇಟೆ, ಕೆಂಗೇರಿ, ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ರೈಲು ನಿಲ್ದಾಣಗಳಿಗೆ ಈಗಾಗಲೇ 2019 ಆಗಸ್ಟ್ ರಲ್ಲಿ ಪ್ರಮಾಣಪತ್ರ ಲಭಿಸಿದೆ. ಇದೀಗ ಮತ್ತೆ 5 ನಿಲ್ದಾಣಗಳಿಗೆ ಪ್ರಮಾಣಪತ್ರ ದೊರೆತಿದೆ ಎಂದು ತಿಳಿಸಿದರು.