ಕರ್ನಾಟಕ

karnataka

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್!

By

Published : Sep 24, 2020, 5:02 PM IST

Updated : Sep 24, 2020, 7:39 PM IST

ಸಿಎಂ ಯಡಿಯೂರಪ್ಪ ಅವರ ಮಂತ್ರಿಮಂಡಲದ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಹೇಳಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯ ಮಂಡಿಸಿದರು.

ವಿಧಾನಸಭಾ ಕಲಾಪ
ವಿಧಾನಸಭಾ ಕಲಾಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಇಂದು ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಅಚ್ಚರಿ ಮೂಡಿಸಿದೆ.

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಿದ್ದಂತೆ ಹಠಾತ್ ಬೆಳವಣಿಗೆಯಿಂದ ಬಿಜೆಪಿ ಶಾಸಕರಲ್ಲಿ ಗಲಿಬಿಲಿ ಉಂಟಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯ ಮಂಡಿಸಿ, ಚರ್ಚೆಗೆ ಅವಕಾಶ ಕೋರಿದರು.

ನಿಯಮದ ಪ್ರಕಾರ ಒಂದು ನೊಟೀಸ್ ಕೊಟ್ಟಿದ್ದೇನೆ. ಯಡಿಯೂರಪ್ಪನವರ ಮಂತ್ರಿಮಂಡಲದ ಮೇಲೆ ವಿಶ್ವಾಸವಿಲ್ಲ. ನಮಗೆ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೊಡಿ ಎಂದು‌ ಕೋರಿದರು. ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ನೀಡಿರುವ ನೋಟಿಸ್ ತಲುಪಿದೆ. ನಿಯಮಾವಳಿ ಪ್ರಕಾರ ಮಾಡುತ್ತೇನೆ. ಪ್ರತಿಪಕ್ಷದ ನಾಯಕರು ನೀಡಿರುವ ಪ್ರಸ್ತಾಪದ ಪರವಾಗಿರುವವರು ಎದ್ದು ನಿಲ್ಲಬೇಕು ಎಂದು ಹೇಳಿದರು. ಆಗ ಸಿದ್ದರಾಮಯ್ಯ ಅವರು ಪ್ರಸ್ತಾಪದ ಪರವಾಗಿ ಕನಿಷ್ಠ 23 ಸದಸ್ಯರು ಇದ್ದರೆ ಸಾಕು. ನಾವು ಅದಕ್ಕಿಂತ ಹೆಚ್ಚಿದ್ದೇವೆ ಎಂದರು.

ಆ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂದು ಛೇಡಿಸಿದರು. ಆಗ ಸ್ಪೀಕರ್ ಅವರು, ಗಂಭೀರ ವಿಷಯ ಪ್ರಸ್ತಾಪವಾಗಿದೆ ಎಂದು ಹೇಳಿ ಪ್ರಸ್ತಾವದ ಪರವಾಗಿ 23 ಜನಕ್ಕಿಂತ ಹೆಚ್ಚು ಸದಸ್ಯರು ಇದ್ದೀರಿ. ಹೀಗಾಗಿ ಸದನದ ಅನುಮತಿ ಇದೆ ಎಂದು ಪ್ರಕಟಿಸಿದರು. ಚರ್ಚೆಯ ದಿನಾಂಕ ಮತ್ತು ಸಮಯವನ್ನು ನಾಳೆ ಮತ್ತು ನಾಡಿದ್ದರೊಳಗೆ ನಿಗದಿ ಮಾಡಲಾಗುವುದು ಎಂದರು.

ಹೆಚ್ಚು ದಿನ ನಾನು ಒತ್ತಾಯ ಮಾಡುವುದಿಲ್ಲ. ಮೂರು ದಿನದೊಳಗೆ ನಿರ್ಣಯ ಪ್ರಕಟಿಸುವುದು ಸೂಕ್ತ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹಾಗೂ ದೇಶದಲ್ಲೂ ಬಹುಮತ ಇಲ್ಲ, ರಾಜಕೀಯ ಗಿಮಿಕ್‍ ಗಾಗಿ ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿದೆ. ಮತಕ್ಕೆ ಹಾಕಿದರೆ ಸೋಲುವುದು ಖಚಿತ. ನಿಮ್ಮ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಪಕ್ಷ ಬಿಟ್ಟು ಬರಲು ತುದಿಗಾಲಲ್ಲಿದ್ದಾರೆ ಎಂದು ಕಾಲೆಳೆದರು.

ಆಗ ಸಿದ್ದರಾಮಯ್ಯ, ನಿಮ್ಮ ಪಕ್ಷದದವರೂ ನಮ್ಮ ಕಡೆ ಬರುತ್ತಿದ್ದಾರೆ. ನಿಮ್ಮ ಹಣೆಬರಹವೂ ನಮಗೆ ಗೊತ್ತಿದೆ ಎಂದು ಟಾಂಗ್ ಕೊಟ್ಟರು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾಪವಾಗಿದೆ. ಇದಕ್ಕೆ ಸದನದ ಒಪ್ಪಿಗೆ ಸಹ ಸಿಕ್ಕಿದೆ. ಹೀಗಿರುವಾಗ ಈ ಕುರ್ಚಿಯಲ್ಲಿ ಕೂರಲು ಯಾರಿಗೂ ಅರ್ಹತೆ ಇಲ್ಲ. ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಜೊತೆಗೆ ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿರುವ ಸಂದರ್ಭದಲ್ಲಿ ಸರ್ಕಾರ ಮಸೂದೆ ಮಂಡನೆಯಂತಹ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಮ್ಮ ಸಿಎಲ್ ಪಿ ನಾಯಕರು ಅವಿಶ್ವಾಸ ಮಂಡಿಸಿದ್ದಾರೆ. ಅದಕ್ಕೆ ಬೇಕಾದ ನಂಬರ್ ಕೇಳಿದ್ದೀರಿ, ಸಿಕ್ಕಿದೆ. ಆದರೆ ಸಚಿವರು ಚರ್ಚೆಗೆ ಅವಕಾಶ ಕೊಡಬೇಡಿ ಎನ್ನುತ್ತಾರೆ. ಅವಕಾಶ ಕೊಡಬೇಡಿ ಎನ್ನಲು ಅವರು ಯಾರು ಎಂದು ಪ್ರಶ್ನಿಸಿದರು.

ಅದಕ್ಕೆ ಪೂರಕವಾಗಿ ಮಾತನಾಡಿದ ಕಾಂಗ್ರೆಸ್ ನ ಹೆಚ್.ಕೆ‌. ಪಾಟೀಲ್, ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ನಿರ್ಣಯ ಮಂಡನೆಯಾದ ಮೇಲೆ ಯಾವುದೇ ಸರ್ಕಾರಿ ವಿಷಯ ಪ್ರಸ್ತಾಪವಾಗಬಾರದು. ರಾಜ್ಯವ್ಯಾಪಿ ಜರೂರು ವಿಷಯ ಬಿಟ್ಟು ಬೇರೆ ವಿಷಯಗಳಿಗೆ ಅವಕಾಶ ಕೊಡುವಂತಿಲ್ಲ. ಅವಕಾಶ ಕೊಟ್ಟು ಸದನದ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ಕಾಂಗ್ರೆಸ್ ನ ಆರ್.ವಿ. ದೇಶಪಾಂಡೆ, ಒಮ್ಮೆ ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ವೀಕರಿಸಿದ ಮೇಲೆ ಯಾವುದೇ ಮಹತ್ವದ ವಿಷಯಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದರು.

ಬಿಜೆಪಿ ಸದಸ್ಯ ಎಸ್.ಎ‌ ರಾಮದಾಸ್ ಮಾತನಾಡಿ, ಹಿಂದೆ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದನ್ನು ಜ್ಞಾಪಿಸಬೇಕಾಗುತ್ತದೆ ಎಂದು ಹೇಳಿದರು. ನೀವು ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿದ್ದೀರಾ. ಅದರ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದೇನೆ ಎಂದು ಸ್ಪೀಕರ್ ಹೇಳಿದರು.

Last Updated : Sep 24, 2020, 7:39 PM IST

ABOUT THE AUTHOR

...view details