ಕರ್ನಾಟಕ

karnataka

By

Published : May 6, 2021, 9:56 PM IST

ETV Bharat / state

ಸಚಿವರು, ಅಧಿಕಾರಿಗಳ ಸಭೆ ಕರೆದ ಸಿಎಂ: ಲಾಕ್ ಡೌನ್ ವಿಚಾರಕ್ಕೆ ನಾಳೆ ತೆರೆ..?

ಕಠಿಣ ಕರ್ಫ್ಯೂ ಮೇ 12 ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲೇ ಲಾಕ್ ಡೌನ್ ಜಾರಿಗೊಳಿಸಬೇಕಾ ಅಥವಾ 12 ರವರೆಗೂ ಕಾದು ನೋಡಿ ನಂತರ ಈಗಿರುವ ವ್ಯವಸ್ಥೆ ಮುಂದುವರೆಸುವುದು ಇಲ್ಲವೇ ಲಾಕ್ ಡೌನ್ ಜಾರಿಗೊಳಿಸುವುದು ಉತ್ತಮವೋ ಎನ್ನುವ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ನಾಳಿನ ಸಭೆಯಲ್ಲಿ ರಾಜ್ಯದ ಲಾಕ್ ಡೌನ್ ವಿಚಾರಕ್ಕೆ ತೆರೆ ಬೀಳುವ ಸಾಧ್ಯತೆ ದಟ್ಟವಾಗಿದೆ.

Cm bs yadiyurappa
Cm bs yadiyurappa

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಜಾರಿಯ ಚಿಂತನೆಯಲ್ಲಿರುವ ಸಿಎಂ ಬಿ.ಎಸ್. ಯಡಿಯೂರಪ್ಪನವರು ನಾಳೆ ಸಚಿವರು ಮತ್ತು ಅಧಿಕಾರಿಗಳ ಮಹತ್ವದ ಸಭೆ ಕರೆದಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಲಾಕ್ ಡೌನ್ ಕುರಿತ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಾಳೆ ಸಂಜೆ 6 ಗಂಟಗೆ ಸಿಎಂ, ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಕೋವಿಡ್ ಜವಾಬ್ದಾರಿ ಹೊತ್ತಿರುವ ಪಂಚ ಸಚಿವರಾದ ಡಾ. ಅಶ್ವತ್ಥನಾರಾಯಣ್, ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಲಾಕ್ ಡೌನ್ ಒಂದೇ ಮಾರ್ಗ

ಈಗಾಗಲೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನಂತರ ಕೊರೊನಾ ಕರ್ಫ್ಯೂ ಜಾರಿಗೊಳಿಸಲಾಗಿದೆ ಆದರೂ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಎಲ್ಲ ರೀತಿಯ ಪ್ರಯತ್ನ ನಡೆಸಿ ವಿಫಲವಾಗಿರುವ ಆರೋಗ್ಯ ಇಲಾಖೆ ಕೈ ಚೆಲ್ಲಿ ಕುಳಿತಿದೆ, ಲಾಕ್ ಡೌನ್ ಒಂದೇ ಮಾರ್ಗ ಎನ್ನುವ ನಿರ್ಧಾರಕ್ಕೆ ಬಂದಿದೆ.

ಕರ್ಫ್ಯೂ ಇದ್ದರೂ ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ

ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಂಬಂಧ ಈಗಾಗಲೇ ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ಮಾತುಕತೆ ನಡೆಸಿದ್ದು ಪರಿಸ್ಥಿತಿ ವಿವರಣೆ ನೀಡಿದ್ದಾರೆ.‌ ಸುಧಾಕರ್ ಕೂಡ ಲಾಕ್ ಡೌನ್ ಚಿಂತನೆ ಮಾಡಿದ್ದು ಸಿಎಂ ಯಡಿಯೂರಪ್ಪ ಗಮನಕ್ಕೆ ತಂದಿದ್ದಾರೆ. ನಿನ್ನೆ 50 ಸಾವಿರ ಗಡಿ ತಲುಪಿದ್ದ ಸೋಂಕಿತರ ಸಂಖ್ಯೆ ಇಂದು 49 ಸಾವಿರ ಜನರಲ್ಲಿ ದೃಢಪಟ್ಟಿದೆ. ಕರ್ಫ್ಯೂ ಜಾರಿಯಾಗಿ ಈಗಾಗಲೇ 10 ದಿನವಾದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಹಾಗಾಗಿ ಲಾಕ್ ಡೌನ್ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಆರೋಗ್ಯ ಇಲಾಖೆ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯಡಿಯೂರಪ್ಪ ನಾಳೆ ಕೋವಿಡ್ ಉಸ್ತುವಾರಿ ಹೊತ್ತ ಸಚಿವರು ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕಿನ ನಿಯಂತ್ರಣದ ಕುರಿತು ಪರಾಮರ್ಶೆ ನಡೆಸಲಿದ್ದಾರೆ. ಪ್ರತಿ ದಿನ ದೃಢಪಡುತ್ತಿರುವ ಸೋಂಕಿನ ಪ್ರಕರಣಗಳು, ಅದರಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ, ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದುತ್ತಿರುವವರ ಪ್ರಮಾಣ, ಬೆಡ್ ಸಮಸ್ಯೆ, ರೆಮ್ ಡಿಸಿವಿರ್ ಕೊರತೆ, ಆಮ್ಲಜನಕ ಪೂರೈಕೆ ವ್ಯತ್ಯಯ, ಐಸಿಯು ಬೆಡ್, ವೆಂಟಿಲೇಟರ್ ಕೊರತೆ ಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ನಾಳೆ ಲಾಕ್ ಡೌನ್ ವಿಚಾರಕ್ಕೆ ತೆರೆ

ಸಚಿವರು ಮತ್ತು ಅಧಿಕಾರಿಗಳಿಂದ ಮುಂದಿನ ಕ್ರಮದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಕಠಿಣ ಕರ್ಫ್ಯೂ ಮೇ 12 ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲೇ ಲಾಕ್ ಡೌನ್ ಜಾರಿಗೊಳಿಸಬೇಕಾ ಅಥವಾ 12 ರವರೆಗೂ ಕಾದು ನೋಡಿ ನಂತರ ಈಗಿರುವ ವ್ಯವಸ್ಥೆ ಮುಂದುವರೆಸುವುದು ಇಲ್ಲವೇ ಲಾಕ್ ಡೌನ್ ಜಾರಿಗೊಳಿಸುವುದು ಉತ್ತಮವೋ ಎನ್ನುವ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ನಾಳಿನ ಸಭೆಯಲ್ಲಿ ರಾಜ್ಯದ ಲಾಕ್ ಡೌನ್ ವಿಚಾರಕ್ಕೆ ತೆರೆ ಬೀಳುವ ಸಾಧ್ಯತೆ ದಟ್ಟವಾಗಿದೆ.

ABOUT THE AUTHOR

...view details